'ಸ್ಮಾರಕ ಪಾಲಿಟಿಕ್ಸ್' ಶುರು ಮಾಡಿ 'ಫ್ಯಾನ್ ವಾರ್ಸ್' ಪ್ರೇರೇಪಿಸಿದವರು ಮಾತನಾಡಲು ಯೋಗ್ಯರಾ?- ಚೇತನ್ ವ್ಯಂಗ್ಯ
ಡಾ. ರಾಜ್ಕುಮಾರ್ ಅವರ ಸ್ಮಾರಕದ ಜಾಗದ ಬಗ್ಗೆ ಪ್ರಶ್ನೆ ಎತ್ತಿ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಸಂಘಟನೆಗಳ ವಿರೋಧ ಎದುರಿಸುವಂತಾಗಿದೆ. ಚೇತನ್ ಕ್ಷಮೆ ಕೇಳಬೇಕು ಎಂದು ಸಾಕಷ್ಟು ಜನ ಪಟ್ಟು ಹಿಡಿದಿದ್ದಾರೆ. ಆದರೆ ಅದಕ್ಕೆ ಚೇತನ್ ಸಿದ್ಧರಿಲ್ಲ. ಇದೆಲ್ಲದರ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಗ್ಗೆ ಚೇತನ್ ವ್ಯಂಗ್ಯವಾಡಿದ್ದಾರೆ.
ಅಣ್ಣಾವ್ರ ಸ್ಮಾರಕದ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ ಅವರಿಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆದಿದ್ದಾರೆ. ಕೋಲಾರದಲ್ಲಿ ಸೋಮವಾರ(ಏಪ್ರಿಲ್ 27) ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ದಾರೆ. ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ ಅವರಿಗೆ ಇಲ್ಲ. ಚೇತನ್ ಪ್ರಚಾರಪ್ರಿಯ, ಆದರೆ ಅಣ್ಣಾವ್ರು ಯಾವತ್ತು ಏನನ್ನೂ ಬಯಸದ ವ್ಯಕ್ತಿ, ಅಂಥಹವರು ಮತ್ತೆ ಹುಟ್ಟಿಬರಲು ಸಾಧ್ಯವಿಲ್ಲ ಎಂದು ನಿಖಿಲ್ ಹೇಳಿದ್ದರು.

ನಿಖಿಲ್ ಹೇಳಿಕೆಗೆ ಟಾಂಗ್ ಕೊಟ್ಟು ಚೇತನ್ ಅಹಿಂಸಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಜೆಡಿಎಸ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಣ್ಣಾವ್ರ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ ಅವರಿಗೆ ಇಲ್ಲ ಎನ್ನುವ ಹೇಳಿಕೆಯನ್ನು ಪ್ರಸ್ತಾಪಿಸಿ "ಪ್ರಜಾಪ್ರಭುತ್ವದಲ್ಲಿ, ಯಾರು ಮಾತನಾಡಲು 'ಯೋಗ್ಯ'? ಎಂದು ಚೇತನ್ ಪ್ರಶ್ನಿಸಿದ್ದಾರೆ.
"ಮಾಜಿ ಪ್ರಧಾನಿಯ ಮಗ-2006ರಲ್ಲಿ ಅವಕಾಶವಾದಿ 'ಸ್ಮಾರಕ ಪಾಲಿಟಿಕ್ಸ್' ಶುರು ಮಾಡಿ ಕನ್ನಡ ಚಲನಚಿತ್ರರಂಗದ ಅಭಿಮಾನಿಗಳ ನಡುವೆ ಅದಕ್ಕೆಸಂಬಂಧಪಟ್ಟ 'ಫ್ಯಾನ್ ವಾರ್ಸ್' ಪ್ರೇರೇಪಿಸಿದವರಾ? ಎಂದು ಚೇತನ್ ಕೇಳಿದ್ದಾರೆ. ಡಾ. ರಾಜ್ಕುಮಾರ್ ನಿಧನರಾಗಿದ್ದಾಗ ಹೆಚ್. ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರ ಅಂತ್ಯಕ್ರಿಯೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದೇ ವಿಚಾರವನ್ನು ಪ್ರಸ್ತಾಪಿಸಿ ಚೇತನ್ ಕೌಂಟರ್ ಕೊಟ್ಟಿದ್ದಾರೆ.
'ಸ್ಮಾರಕ ಪಾಲಿಟಿಕ್ಸ್' ಶುರು ಮಾಡಿದ ಕುಮಾರಸ್ವಾಮಿ ಅಣ್ಣಾವ್ರ ಬಗ್ಗೆ ಮಾತನಾಡಲು ಯೋಗ್ಯರಾ? ಅಥವಾ ಅವರ ಮಗ(ನಿಖಿಲ್ ಕುಮಾರಸ್ವಾಮಿ)- ಮೂರು ಬಾರಿ ಸೋತವರು-ಸ್ವಜನಪಕ್ಷಪಾತ ಹೊರತುಪಡಿಸಿ ಮತ್ತೇನು ಸಾಧನೆ ಇಲ್ಲದವರಾ? ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲರೂ ಮಾತನಾಡಲು ಯೋಗ್ಯರೇ. ಆದರೆ ಯಾರ ಮಾತಿಗೆ ನಿಜವಾದ ತೂಕ ಇದೆ ಅನ್ನುವುದನ್ನು ಜನರೇ ತೀರ್ಮಾನಿಸುತ್ತಾರೆ" ಎಂದು ಚೇತನ್ ತಿವಿದಿದ್ದಾರೆ. ಆದರೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನಾದರೂ ನಿಮ್ಮ ತಪ್ಪು ತಿದ್ದಿಕೊಳ್ಳಿ. ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿ ಎಂದು ಸಲಹೆ ನೀಡುತ್ತಿದ್ದಾರೆ. ಜೆಡಿಎಸ್ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಚೇತನ್ ವಿರೋಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಚೇತನ್ ಪೋಸ್ಟ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. "ರಾಜ್ಕುಮಾರ್ ಕೇವಲ ನಟನಲ್ಲ.. ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಪ್ರೀತಿಯ ದೇವರು ಅಣ್ಣಾವ್ರು ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ದುರಹಂಕಾರದ ಪರಾಕಾಷ್ಠೆ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಹೆಮ್ಮೆ ತಂದ ವ್ಯಕ್ತಿಯನ್ನು ಟೀಕಿಸುವ ಮೊದಲು, ಸ್ವಲ್ಪ ಇತಿಹಾಸವನ್ನು ಕಲಿಯಿರಿ. ಸಾರ್ವಜನಿಕ ಜೀವನದಲ್ಲಿ ಟೀಕೆ ಸಹಜ, ಆದರೆ ಅದರಲ್ಲಿ ಸತ್ವ ಇರಬೇಕು. ನಾವು ಯಾವಾಗಲೂ ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿಗಳನ್ನು ಅಥವಾ ಸೋಲು ಮತ್ತು ಗೆಲುವಿನ ಮಾತನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತು ಕನ್ನಡಿಗರ ಭಾವನೆಗಳ ಮೇಲೆ ಹಿಂಸೆಯನ್ನು ಉಂಟುಮಾಡುತ್ತದೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications