ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಅಲ್ಲ.. ಪಾಕಿಸ್ತಾನ್ ಜಿಂದಾಬಾದ್ ಅಂದ್ರೆ ತಪ್ಪಲ್ಲ: ಚೇತನ್ ಅಹಿಂಸಾ ಹೇಳಿಕೆ ವೈರಲ್
ಅಣ್ಣಾವ್ರ ಸ್ಮಾರಕ ಜಾಗದ ಬಗ್ಗೆ ಕ್ಯಾತೆ ತೆಗೆದು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ವಿವಾದ ಸೃಷ್ಟಿಸಿದ್ದಾರೆ. ಡಾ. ರಾಜ್ಕುಮಾರ್ ಅಭಿಮಾನಿಗಳು, ಕನ್ನಡಪರ ಸಂಘಟನೆಗಳು ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಅವರು ಬಗ್ಗುತ್ತಿಲ್ಲ.
ಚೇತನ್ ಕ್ಷಮೆಗೆ ಆಗ್ರಹಿಸಿ ಪ್ರತಿಭಟನೆ ಕೂಡ ನಡೆದಿದೆ. ನಿರ್ಮಾಪಕ ಸಾರಾ ಗೋವಿಂದು, ಅಖಿಲ ಕರ್ನಾಟಕ ರಾಜ್ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್ ಆರ್ ರಮೇಶ್ ಸೇರಿ ಹಲವರು ಚೇತನ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಚೇತನ್ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಪಾಕಿಸ್ತಾನದ ಬಗ್ಗೆ ಚೇತನ್ ನೀಡಿದ್ದ ಹಳೇ ಹೇಳಿಕೆ ವೈರಲ್ ಆಗ್ತಿದೆ.

'ಪಾಕಿಸ್ತಾನ ಜಿಂದಾಬಾದ್' ಎಂದು ಹೇಳಿರುವ ವ್ಯಕ್ತಿ ಚೇತನ್. ಆತನಿಗೆ ಕ್ಷಮೆ ಇಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣ್ಣಾವ್ರ ಸ್ಮಾರಕದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಚೇತನ್ ಕ್ಷಮೆ ಕೇಳಲೇಬೇಕು ಎಂದಿದ್ದಾರೆ. ಅಂದಹಾಗೆ ಪಾಕಿಸ್ತಾನದ ಬಗ್ಗೆ ಚೇತನ್ ಯಾವಾಗ, ಏನು ಹೇಳಿದ್ದರು ಎನ್ನುವ ಚರ್ಚೆ ನಡೀತಿದೆ. ಎರಡು ವರ್ಷಗಳ ಹಿಂದೆ 'ಮಸ್ತ್ ಮಗಾ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚೇತನ್ ಭಾಗವಹಿಸಿದ್ದರು. ಆ ಸಮಯದಲ್ಲಿ ಈ ವಿಚಾರವನ್ನು ಮಾತನಾಡಿದ್ದರು.
ಪಾಕಿಸ್ತಾನ, ಭಾರತದಿಂದ ಬೇರ್ಪಟ್ಟ ನಮ್ಮ ತಮ್ಮನೋ, ತಂಗಿ ರಾಷ್ಟ್ರನೋ ಅಥವಾ ಶತ್ರು ರಾಷ್ಟ್ರನಾ ಎನ್ನುವ ಪ್ರಶ್ನೆಗೆ ಚೇತನ್ ಉತ್ತರಿಸಿ "ಪಾಕಿಸ್ತಾನ ಖಂಡಿತ ನಮ್ಮ ಶತ್ರು ರಾಷ್ಟ್ರ ಅಲ್ಲ.. ನಮ್ಮ ಪಕ್ಕದ ರಾಷ್ಟ್ರ.. 1947ರಲ್ಲಿ ಒಂದಾಗಿದ್ದ ಭಾರತ ಎರಡು ಭಾಗಗಳಾಗಿ ಬೇರೆ ಆಗುವಂತಾಯಿತು. ಧರ್ಮದ ಹೆಸರಿನಲ್ಲಿ ಕಟ್ಟಿರುವ ದೇಶ ಅದು, ಸೈದ್ದಾಂತಿಕವಾಗಿ ಅದನ್ನು ನಾನು ಒಪ್ಪಲ್ಲ. ನಮ್ಮ ಭಾರತ ಮಾದರಿ ದೇಶ, ಜಾತ್ಯಾತೀತವಾಗಿ ಧರ್ಮ ನಿರಪೇಕ್ಷಿತವಾಗಿ ಸಹಬಾಳ್ವಿಕೆಯಲ್ಲಿ ಕಟ್ಟಿರುವ ದೇಶ.. ಆದರೆ ಪಾಕಿಸ್ತಾನ ನಮ್ಮ ಶತ್ರು ಅಲ್ಲ. ಪಾಕಿಸ್ತಾನ ಜಿಂದಾಬಾದ್ ಅಂದ್ರೆ, ಅದು ದೇಶ ವಿರೋಧಿ ಅಲ್ಲ" ಎಂದು ಚೇತನ್ ಹೇಳಿದ್ದರು.
ಭಾರತದ ಒಳಗಿರುವವರು 'ಪಾಕಿಸ್ತಾನ ಜಿಂದಾಬಾದ್' ಅಂದ್ರೆ ಸರೀನಾ? ಎನ್ನುವ ಪ್ರಶ್ನೆಗೆ "ಸ್ಲೋಗನ್ ಕಾರಣಕ್ಕೆ ದೇಶವಿರೋಧಿ ಎನ್ನಲು ಸಾಧ್ಯವಿಲ್ಲ.. ಕೆಲವರು ಪ್ರಚೋದಿಸುವ ರೀತಿ ಏನೋ ಹೇಳ್ತಾರೆ.. ಎಲ್ಲಾ ದೇಶಕ್ಕೂ ಜಿಂದಾಬಾದ್.. ಮುಖ್ಯವಾಗಿ ನಮ್ಮ ಭಾರತ ದೇಶ ಕಟ್ಟಬೇಕು.. ಪಾಕಿಸ್ತಾನ ನಮ್ಮ ಶತ್ರು ಅಲ್ಲ.. ನಿಜ ಹೇಳಬೇಕು ಅಂದ್ರೆ ನಮಗೆ ಶತ್ರುಗಳು ಅಮೆರಿಕಾ ಹಾಗೂ ಇಸ್ರೇಲ್ ದೇಶಗಳು.. ಜನ ವಿರೋಧಿ ದೇಶಗಳು.. ಇವತ್ತು ಎಲ್ಲರೂ ಪಾಸ್ಪೋರ್ಟ್ ತಗೊಂಡು ಅಮೆರಿಕಾಗೆ ಹೋಗ್ತಾರೆ, ಇಸ್ರೇಲ್ಗೆ ಸಪೋರ್ಟ್ ಮಾಡ್ತಾರೆ.. ಅವು ನಮ್ಮ ಶತ್ರು ದೇಶಗಳು.. ಅಮೆರಿಕಾ ಜಿಂದಾಬಾದ್, ಇಸ್ರೇಲ್ ಜಿಂದಾಬಾದ್ ಅಂದ್ರೆ, ಯಾರು ವಿರೋಧಿಸಲ್ಲ. ಪಾಕಿಸ್ತಾನ ಶತ್ರು ಅಲ್ಲದೇ ಇದ್ದರೆ 'ಪಾಕಿಸ್ತಾನ ಜಿಂದಾಬಾದ್' ಎನ್ನುವುದು ತಪ್ಪಾಗಲ್ಲ" ಎಂದು ಚೇತನ್ ಹೇಳಿದ್ದರು.
ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ಕುಮಾರ್ ಪುಣ್ಯಭೂಮಿ ಬಗ್ಗೆ ಚೇತನ್ ಮಾಡಿದ್ದ ಪೋಸ್ಟ್ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗ್ತಿದೆ. ಅಣ್ಣಾವ್ರ ಹುಟ್ಟುಹಬ್ಬದ ಸಂದರ್ಭದಲ್ಲಿ ಚೇತನ್ ಪೋಸ್ಟ್ ಮಾಡಿ "ನಾವು ರಾಜ್ಕುಮಾರ್ ಅವರನ್ನು ಒಬ್ಬ ಶ್ರೇಷ್ಠ ಕಲಾವಿದ ಎಂದು ಗೌರವಿಸುತ್ತೇವೆ. ಆದರೆ, 2006ರಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಈ ನಟನ ಸ್ಮಾರಕ ಕಾಂಪ್ಲೆಕ್ಸ್ಗಾಗಿ 2.5 ಎಕರೆ ಭೂಮಿ ನೀಡಿದ್ದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕು. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ" ಎಂದು ಬರೆದುಕೊಂಡಿದ್ದರು.


Click it and Unblock the Notifications