ಪೌರ ಕಾರ್ಮಿಕರ ಬಡಾವಣೆಗೆ ನಟ ಚೇತನ್ ಅಹಿಂಸಾ ಭೇಟಿ, ಹೋರಾಟಕ್ಕೆ ಬೆಂಬಲ
ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ನಟ ಚೇತನ್ ಇಂದು ಪೌರಕಾರ್ಮಿಕರ ಬಡಾವಣೆಗೆ ಭೇಟಿ ನೀಡಿ, ಅವರೊಟ್ಟಿಗೆ ಹೋರಾಟದಲ್ಲಿ ಭಾಗಿಯಾದರು.
ಪೌರಕಾರ್ಮಿಕರಿಗೆ ಆಶ್ರಯ ಮನೆ ನಿರ್ಮಾಣಕ್ಕೆ ಒತ್ತಾಯಿಸಿ ಹುಲ್ಲಹಳ್ಳಿಯಿಂದ ನಂಜನಗೂಡಿಗೆ ಪಾದಯಾತ್ರೆಯನ್ನು ದಲಿತ ಸಂಘಟನೆಗಳು ಕೈಗೊಂಡಿದ್ದು, ನಂಜನಗೂರು ತಾಲ್ಲೂಕಿನ ಹುಲ್ಲಹಳ್ಳಿ ಪೌರಕಾರ್ಮಿಕರ ಬಡಾವಣೆಗೆ ಭೇಟಿ ನೀಡಿದ ನಟ ಚೇತನ್ ಅಹಿಂಸ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಹಲವಾರು ವರ್ಷಗಳಿಂದ ವಾಸಿಸಲು ಸೂಕ್ತ ವಸತಿ ಸೌಲಭ್ಯವಿಲ್ಲದೇ ಪರಿತಪಿಸುತ್ತಿರುವ ಹೋಬಳಿ ಕೇಂದ್ರವಾಗಿರುವ ಹುಲ್ಲಹಳ್ಳಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ 27 ಕುಟುಂಬಗಳಿಗೆ ವಾಸಿಸಲು ನೆಲೆಯಿಲ್ಲದಂತಾಗಿದೆ. ಸರಕಾರಿ ಓಣಿಗೆ ಸೇರಿದ ಕೊಳಚೆ ಪ್ರದೇಶದಲ್ಲಿ ಪೌರ ಕಾರ್ಮಿಕ ಕುಟುಂಬಗಳು ಕನಿಷ್ಠ ಸೌಲಭ್ಯವಿಲ್ಲದೇ ಬದುಕುತ್ತಿದ್ದಾರೆ. ಯಾವ ಸರಕಾರ ಬಂದರೂ ಬಡವರ, ಶೋಷಿತರ ಪರ ನಿಲ್ಲುತ್ತಿಲ್ಲ. ಮಾತಿಗೊಮ್ಮೆ ಬುದ್ದ, ಬಸವ, ಅಂಬೇಡ್ಕರ್ರ ತತ್ವಗಳನ್ನು ಹೇಳುವ ರಾಜಕಾರಣಿಗಳು ನುಡಿದಂತೆ ನಡೆಯುವುದಿಲ್ಲ. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಅನಿವಾರ್ಯ. ಪೌರ ಕಾರ್ಮಿಕರಿಗೆ ಆಶ್ರಯ ಮನೆ ನಿರ್ಮಾಣಕ್ಕಾಗಿ ಹೋರಾಟ ಕೈಗೊಂಡು ಮಂಗಳವಾರ ಹುಲ್ಲಹಳ್ಳಿಯಿಂದ ನಂಜನಗೂಡಿಗೆ ಪಾದಯಾತ್ರೆ ನಡೆಸಲು ಮುಂದಾಗಿರುವ ದಲಿತ ಸಂಘಟನೆಗಳ ಒಕ್ಕೂಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಂಕರಪುರ ಸುರೇಶ್ ಮಾತನಾಡಿ, ಮೇ 17 ರಂದು ಒಕ್ಕೂಟದ ವತಿಯಿಂದ ಪೌರ ಕಾರ್ಮಿಕರಿಗೆ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಹುಲ್ಲಹಳ್ಳಿ ಗ್ರಾಮದಿಂದ ನಂಜನಗೂಡಿನ ಪಾದಯಾತ್ರೆ ಕೈಗೊಳ್ಳಲಾಗಿದ್ದು, ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕಾರ್ಯ ಜಯಶಂಕರ್, ಬೊಕ್ಕಹಳ್ಳಿ ಲಿಂಗಯ್ಯ, ಯಶವಂತ್, ಹಗಿನವಾಳು ಚಿಕ್ಕಣ್ಣ ಉಪಸ್ಥಿತರಿದ್ದರು.
ನಟನೆ ಜೊತೆಗೆ ಹೋರಾಟಗಾರರಾಗಿ ಚೇತನ್ ಅಹಿಂಸ ಗುರುತಿಸಿಕೊಂಡಿದ್ದು, ದಲಿತ ಪರ, ಶೋಷಿತರ ಪರ ಹೋರಾಟಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಚೇತನ್ ಅಹಿಂಸ ಬಂಧನವೂ ಆಗಿತ್ತು. ಚೇತನ್ ಅಹಿಂಸ, ನ್ಯಾಯಾಲಯದ ತೀರ್ಪೊಂದನ್ನು ವಿಮರ್ಶಿಸಿ ಬಹಳ ಹಿಂದೆ ಮಾಡಲಾಗಿದ್ದ ಟ್ವೀಟ್ಗೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ಬಂಧಿಸಿ ಜೈಲಿನಟ್ಟಿದ್ದರು. ಪ್ರಸ್ತುತ ಜಾಮೀನಿನ ಮೇಲೆ ಚೇತನ್ ಹೊರಗಿದ್ದಾರೆ. ಚೇತನ್ ಅವರನ್ನು ಯಾವುದೇ ಮಾಹಿತಿ ಇಲ್ಲದೆ ಬಂಧಿಸಲಾಗಿದೆ, ಇದು ಬಂಧನವಲ್ಲ, ಅಪಹರಣ ಎಂದು ಚೇತನ್ರ ಪತ್ನಿ ಆರೋಪಿಸಿದ್ದರು. ಜೈಲಿನಿಂದ ಬಂದ ಬಳಿಕ ಮಾತನಾಡಿದ್ದ ಚೇತನ್ ತಮ್ಮ ಹೋರಾಟ ಭವಿಷ್ಯದಲ್ಲಿ ಇನ್ನಷ್ಟು ತೀಕ್ಷಣವಾಗುವುದೆಂದು ಹೇಳಿದ್ದರು. ಅಂತೆಯೇ ವಿವಿಧ ಹೋರಾಟಗಳಲ್ಲಿ ಚೇತನ್ ಭಾಗವಹಿಸುತ್ತಿದ್ದಾರೆ.


Click it and Unblock the Notifications











