ಚಿಕ್ಕಣ್ಣ ಹೀರೊ ಆಗಿ 2ನೇ ಸಿನಿಮಾ ಫಿಕ್ಸ್; ನಿರ್ಮಾಪಕರು, ನಿರ್ದೇಶಕರು ಯಾರು?
ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಪ್ರೇಕ್ಷಕರನ್ನು ರಂಜಿಸಿದ ಚಿಕ್ಕಣ್ಣ ಹೀರೊ ಆಗಿ ಗೆದ್ದಿದ್ದರು. ಆದರೆ ಹೀರೊ ಆಗಿಯೂ ಪ್ರೇಕ್ಷಕರನ್ನು ನಗಿಸೋ ಕಾಯಕ ಮುಂದುವರೆಸಿದ್ದಾರೆ. ಈ ವರ್ಷ ಸಕ್ಸಸ್ ಕಂಡ ಕೆಲವೇ ಕನ್ನಡ ಸಿನಿಮಾಗಳಲ್ಲಿ 'ಉಪಾಧ್ಯಕ್ಷ' ಕೂಡ ಒಂದಾಗಿದೆ. ಅನಿಲ್ ಕುಮಾರ್ ನಿರ್ದೇಶನದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.
ಹಾಸ್ಯ ಕಲಾವಿದರು ಹೀರೊ ಆಗಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವುದು ಹೊಸದೇನು ಅಲ್ಲ. ಆದರೆ ಸಕ್ಸಸ್ ಅಷ್ಟು ಸುಲಭವಾಗಿ ಸಿಗಲ್ಲ. ಚಿಕ್ಕಣ್ಣ ಹೀರೊ ಅಂದಾಗ ಕೆಲವರು ಹೀಗೆ ಅಂದುಕೊಂಡಿದ್ದರು. ಆದರೆ ನಿರೀಕ್ಷೆ ಮೀರಿ ಚಿಕ್ಕು ಗೆದ್ದರು. ಇದೀಗ ಹೀರೊ ಆಗಿ ಮತ್ತೊಂದು ಚಿತ್ರಕ್ಕೆ ಚಿಕ್ಕಣ್ಣ ಆಯ್ಕೆ ಆಗಿದ್ದಾರೆ.

ಚಿಕ್ಕಣ್ಣ ಹೀರೊ ಆಗಿ ನಟಿಸಲಿರುವ 2ನೇ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ನಿರ್ಮಾಪಕರು, ನಿರ್ದೇಶಕರು ಸಿಕ್ಕಿದ್ದಾರೆ ಎನ್ನಲಾಗ್ತಿದೆ. ಇನ್ನು ಸಿನಿಮಾ ಸೆಟ್ಟೇರುವುದು ಮಾತ್ರ ಬಾಕಿಯಿದೆ. ನಿರ್ದೇಶಕ ಎ. ಪಿ ಅರ್ಜುನ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು ರಾಜ್ ಗುರು ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಬಂದ 'ಕೆರೆಬೇಟೆ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಮೊದಲ ಪ್ರಯತ್ನಲ್ಲದೇ ನಿರ್ದೇಶಕ ರಾಜ್ ಗುರು ಗೆದ್ದಿದ್ದರು. ಗೌರಿಶಂಕರ್ ಹೀರೊ ಆಗಿ ನಟಿಸಿದ್ದ ಸಿನಿಮಾ 50 ದಿನ ಪೂರೈಸಿತ್ತು. ಇದೀಗ ಅವರು ಚಿಕ್ಕಣ್ಣ ಹೀರೊ ಆಗಿ 2ನೇ ಚಿತ್ರಕ್ಕೆ ಕೈಹಾಕಿದ್ದಾರೆ. ಈ ಹಿಂದೆ 'ಅದ್ಧೂರಿ ಲವರ್' ಚಿತ್ರವನ್ನು ಎ. ಪಿ ಅರ್ಜುನ್ ನಿರ್ಮಿಸಿ, ನಿರ್ದೇಶನ ಮಾಡಿದ್ದರು.
'ಉಪಾಧ್ಯಕ್ಷ' ಬಳಿಕ ಚಿಕ್ಕಣ್ಣ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಯಾವುದೂ ಫೈನಲ್ ಆಗಿಲ್ಲ. ಸದ್ಯ ಎ. ಪಿ ಅರ್ಜುನ್ ನಿರ್ಮಾಣದ ಸಿನಿಮಾ ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಸದ್ಯಕ್ಕೆ ಸಿನಿಮಾ ಶುರುವಾಗುವುದಿಲ್ಲ. ಎ. ಪಿ ಅರ್ಜುನ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ತೆರೆಗೆ ಬರಬೇಕಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 11ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕವೇ ಚಿಕ್ಕಣ್ಣನ 2ನೇ ಸಿನಿಮಾ ಶುರು ಎನ್ನುವ ಚರ್ಚೆ ಕೂಡ ನಡೀತಿದೆ.

10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಉಪಾಧ್ಯಕ್ಷ ಆಗಿ ಚಿಕ್ಕಣ್ಣ ನಟಿಸಿದ್ದರು. ಶರಣ್ ಜೊತೆ ಜೊತೆಗೆ ಸಾಗುವ ಪಾತ್ರದಲ್ಲಿ ಒಳ್ಳೆ ಅಂಕ ಗಿಟ್ಟಿಸಿದ್ದರು. ದಶಕದ ಬಳಿಕ ಅದೇ ಕಥೆಯನ್ನು ಬೇರೆಯದ್ದೇ ರೂಪದಲ್ಲಿ 'ಉಪಾಧ್ಯಕ್ಷ'ನ ಪಾತ್ರವನ್ನೇ ಲೀಡ್ ಮಾಡಿ ಕಥೆ ಹೇಳಲಾಗಿತ್ತು. ಜನವರಿ 26ಕ್ಕೆ ಸಿನಿಮಾ ತೆರೆಗೆ ಬಂದಿತ್ತು.
ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ಉಪಾಧ್ಯಕ್ಷ' ಚಿತ್ರದಲ್ಲಿ ಕಿರುತೆರೆ ನಟಿ ಮಲೈಕಾ ನಾಯಕಿಯಾಗಿ ಮಿಂಚಿದ್ದರು. ಚಿಕ್ಕಣ್ಣ ತಮ್ಮ ಕಾಮಿಡಿ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿ ರಂಜಿಸಿದ್ದರು. ಆರ್ಮುಗ ರವಿಶಂಕರ್, ಸಾಧು ಕೋಕಿಲ, ವೀಣಾ ಸುಂದರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ವರ್ಷ ಮೊದಲ ಹಿಟ್ 'ಉಪಾಧ್ಯಕ್ಷ' ಎನಿಸಿಕೊಂಡಿತ್ತು.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗಿದೆ. ಸ್ಟಾರ್ ನಟನರ ಸಿನಿಮಾಗಳಲ್ಲಿ ಕಾಮಿಡಿಗೆ ಸಪರೇಟ್ ಟ್ರ್ಯಾಕ್ಗಳು ಕಾಣಿಸುತ್ತಿಲ್ಲ. ಹಾಗಾಗಿ ಹಾಸ್ಯ ಕಲಾವಿದರಿಗೆ ಅವಕಾಶಗಳು ಕಮ್ಮಿ ಆಗುತ್ತಿದೆ. ಇಂತಹ ಸಮಯದಲ್ಲೇ ಚಿಕ್ಕಣ್ಣ ಹೀರೊ ಆಗುವ ಸಾಹಸಕ್ಕೆ ಕೈ ಹಾಕಿ ಗೆದ್ದಿದ್ದಾರೆ. ಅದನ್ನೇ ಮುಂದುವರೆಸಿಕೊಂಡು ಹೋಗುವ ಲೆಕ್ಕಾರದಲ್ಲಿ ಇರುವಂತೆ ಕಾಣುತ್ತಿದೆ.


Click it and Unblock the Notifications











