ನಿರ್ಮಲಾನಂದ ಸ್ವಾಮೀಜಿ ಭೇಟಿಯಾದ ಸ್ಯಾಂಡಲ್ ವುಡ್ 'ಉಪಾಧ್ಯಕ್ಷ' ಚಿಕ್ಕಣ್ಣ
ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ ಸ್ಯಾಂಡಲ್ ವುಡ್ ನ 'ಉಪಾಧ್ಯಕ್ಷ'. ಚಿಕ್ಕಣ್ಣ ಉಪಾಧ್ಯಕ್ಷ ಎನ್ನುವ ಸಿನಿಮಾ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಇದೀಗ ಚಿಕ್ಕಣ್ಣ ಆಂದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕನಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಿಕ್ಕಣ್ಣ ಮೊದಲು ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮಿಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದು ಸಿನಿಮಾ ಪ್ರಾರಂಭಿಸುತ್ತಿದ್ದಾರೆ. ಚಿಕ್ಕಣ್ಣ ಜೊತೆಯಲ್ಲಿ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಇಡೀ ಚಿತ್ರತಂಡ ತೆರಳಿದೆ. ಇತ್ತೀಚಿಗಷ್ಟೆ ಉಪಾಧ್ಯಕ್ಷ ಸಿನಿಮಾದ ಟೈಟಲ್ ಅನೌನ್ಸ್ ಮಾಡಲಾಗಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಪೂಜೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಹಾಡಿನ ರೆಕಾರ್ಡಿಂಗ್ ಪ್ರಾರಂಭವಾಗಿದೆ. ಅಂದ್ಹಾಗೆ 'ಉಪಾಧ್ಯಕ್ಷ' ಚಂದ್ರಮೋಹನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಈ ಹಿಂದೆ ಬಾಂಬೆ ಮಿಠಾಯಿ, ಡಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಇದೀಗ ಚಿಕ್ಕಣ್ಣ ಜೊತೆ ಉಪಾಧ್ಯಕ್ಷ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಚಿತ್ರಕ್ಕೆ ರಾಬರ್ಟ್, ಮದಗಜ ಚಿತ್ರದ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿರುವ ಸಿನಿಮಾತಂಡ ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ. ಅಂದ್ಹಾಗೆ ಉಪಾಧ್ಯಕ್ಷನಿಗೆ ಚಿತ್ರತಂಡ ನಾಯಕಿಯ ಹುಡುಕಾಟ ಮಾಡುತ್ತಿದೆ. ಚಿಕ್ಕಣ್ಣ ಜೊತೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಚಿಕ್ಕಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಚಿಕ್ಕಣ್ಣ ಸದ್ಯ ಪೊಗರು ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕಣ್ಣ ಈಗ ಮೊದಲ ಬಾರಿ ಹೀರೋ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.


Click it and Unblock the Notifications











