'ಲಕ್ಷ್ಮಿಪುತ್ರ' ಚಿಕ್ಕಣ್ಣನಿಗೆ ನಾಯಕಿಯಾಗಲು ಒಪ್ಪದ ಮೂವರು ನಟಿಯರು; ಮುಂದೇನಾಯ್ತು?
ಎ.ಪಿ ಅರ್ಜುನ್ ನಿರ್ಮಾಣದ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿದ್ದಾರೆ. ಈಗಾಗಲೇ 'ಉಪಾಧ್ಯಕ್ಷ' ಚಿತ್ರದ ಮೂಲಕ ಚಿಕ್ಕಣ್ಣ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ. ಇದು ನಾಯಕನಾಗಿ ಅವರ 2ನೇ ಸಿನಿಮಾ. ವಿಜಯ್ ಸ್ವಾಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.
'ಲಕ್ಷ್ಮಿಪುತ್ರ' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಚಿಕ್ಕಣ್ಣನಿಗೆ ಜೊತೆ ನಾಯಕಿಯಾಗಿ ನಟಿಸೋಕೆ ಕೆಲ ನಟಿಯರು ಒಪ್ಪಲಿಲ್ಲವಂತೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ತಮಾಷೆಯಾಗಿ ವೀಡಿಯೋ ಮಾಡಿ ತೋರಿಸಿದೆ. ಅಂತೂ ಇಂತೂ ಹೊಸ ನಟಿಯನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ ಚಿತ್ರತಂಡ.

ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಗಣ 'ಲಕ್ಷ್ಮಿಪುತ್ರ' ಚಿತ್ರದಲ್ಲಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು ಎ.ಪಿ ಅರ್ಜುನ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ 'ಲಕ್ಷ್ಮಿಪುತ್ರ' ಚಿತ್ರದ ನಾಯಕಿ ಯಾರು ಎಂದು ಚಿಕ್ಕಣ್ಣನನ್ನು ಕೇಳುತ್ತಿದ್ದರು. ಆ ಗೋಳು ಏನು ಎನ್ನುವುದನ್ನು ವೀಡಿಯೋ ಮಾಡಿ ಚಿತ್ರತಂಡ ಹಂಚಿಕೊಂಡಿದೆ.
ಸ್ನೇಹಿತರಿಂದ ಹಿಡಿದು ಟ್ರಾಫಿಕ್ ಪೊಲೀಸ್ವರೆಗೂ 'ಲಕ್ಷ್ಮಿಪುತ್ರ' ಚಿತ್ರದ ನಾಯಕಿ ಯಾರು ಎಂದು ಕೇಳಿದ್ದಾರೆ. ನಿರ್ಮಾಪಕ, ನಿರ್ದೇಶಕರ ಬಳಿ ಇದೇ ಪ್ರಶ್ನೆ ಇಟ್ಟಾಗ ನಾವು ಬಹಳ ಹುಡುಕಿದ್ವಿ, ಯಾರು ಸಿಗಲಿಲ್ಲ ಎಂದಿದ್ದಾರೆ. ಸರಿ ನಾನೇ ಹುಡುಕ್ತೀನಿ ಎಂದು ಚಿಕ್ಕಣ್ಣ ಇಬ್ಬರು ಮೂವರು ನಟಿಯರನ್ನು ಭೇಟಿ ಮಾಡಿ ಕೇಳಿದ್ದಾರೆ. ಸುಚಿತ್ರಾ ರಾಮ್, ಸ್ಮ್ರಾಣ್ಯ ಶೆಟ್ಟಿ, ಮಲ್ಲಿಕಾ ಧನ್ಪಾಲ್ ಹೀಗೆ ಮೂವರ ಬಳಿ ಹೋಗಿ ತಮ್ಮ ಚಿತ್ರದಲ್ಲಿ ನಾಯಕಿಯಾಗಿ ನಟಿಸುವಂತೆ ಚಿಕ್ಕಣ್ಣ ಕೇಳಿದ್ದಾರೆ. ಮೂವರೂ ಏನೇನೋ ಕಾರಣ ಹೇಳಿ ತಪ್ಪಿಸಿಕೊಂಡಿದ್ದಾರೆ.
ಕೊನೆಗೆ ತಮ್ಮ ಚಿತ್ರಕ್ಕೆ ನಾಯಕಿಯನ್ನು ಹುಡುಕಿಕೊಡು ಎಂದು ದೇವಸ್ಥಾನಕ್ಕೆ ತೆರಳಿ ದೇವರ ಬಳಿ ಹೋಗಿ ಚಿಕ್ಕಣ್ಣ ಕೇಳಿಕೊಂಡಿದ್ದಾರೆ. ದೇವಸ್ಥಾನಕ್ಕೆ ನಟಿ ವಂದಿತಾ ಬಂದಿದ್ದಾರೆ. 'ಲಕ್ಷ್ಮಿಪುತ್ರ' ಚಿತ್ರತಂಡದ ಪರವಾಗಿ ಎಲ್ಲರಿಗೂ ಹೊಸವರ್ಷದ ಶುಭಾಶಯ ಕೋರಿದ್ದಾರೆ. ಹೊಸ ಪ್ರತಿಭೆ ವಂದಿತಾ ಇದೀಗ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
'ಉಪಾಧ್ಯಕ್ಷ' ಚಿತ್ರದಲ್ಲಿ ಕಾಮಿಡಿ ಹೀರೊ ಆಗಿ ಚಿಕ್ಕಣ್ಣ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ 'ಲಕ್ಷ್ಮಿಪುತ್ರ' ಚಿತ್ರದಲ್ಲಿ ಕೂಡ ಅದೇ ಪ್ರಯತ್ನ ಮಾಡಲಾಗ್ತಿದೆ. ಕೋವಿಡ್ ಸಮಯದಲ್ಲಿ ಈ ಕಥೆಯನ್ನು ಎ.ಪಿ ಅರ್ಜುನ್ ಸಿದ್ಧಪಡಿಸಿದ್ದರು. ತಮ್ಮ ಗರಡಿಯಲ್ಲಿ ಪಳಗಿದ ವಿಜಯ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ತಾಯಿ, ಮಗನ ಬಾಂಧವ್ಯದ ಕಥೆಯನ್ನು ಹೇಳಲಾಗ್ತಿದೆ. ವರ್ಷದ ಹಿಂದೆ ಸಿನಿಮಾ ಸೆಟ್ಟೇರಿತ್ತು.
ಫ್ಯಾಮಿಲಿ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು 'ಲಕ್ಷ್ಮಿಪುತ್ರ' ಸಿನಿಮಾ ಕಟ್ಟಿಕೊಡಲಾಗ್ತಿದೆ. ಚಿಕ್ಕಣ್ಣ ಹಾಗೂ ವಂದಿತಾ ಜೋಡಿ ಹೇಗೆ ಮೋಡಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 'ಅಯೋಗ್ಯ' ಚಿತ್ರದ ನಿರ್ದೇಶಕ ಮಹೇಶ್ ಸಾರಥ್ಯದ ಮತ್ತೊಂದು ಚಿತ್ರದಲ್ಲಿ ಕೂಡ ಚಿಕ್ಕಣ್ಣ ನಟಿಸುತ್ತಿದ್ದಾರೆ.
ಸಣ್ಣಪುಟ್ಟ ಪಾತ್ರಗಳ ಮೂಲಕ ಚಂದನವನಕ್ಕೆ ಬಂದ ಚಿಕ್ಕಣ್ಣ ಬಳಿಕ ಜನಪ್ರಿಯ ಹಾಸ್ಯನಟನಾಗಿ ಗುರ್ತಿಸಿಕೊಂಡಿದ್ದರು. ಪುನೀತ್ ರಾಜ್ಕುಮಾರ್, ದರ್ಶನ್, ಸುದೀಪ್, ಯಶ್, ಶಿವರಾಜ್ಕುಮಾರ್ ಹೀಗೆ ಸ್ಟಾರ್ ನಟರ ಜೊತೆಗೆಲ್ಲಾ ನಟಿಸಿ ಗಮನ ಸೆಳೆದರು. 'ಅಧ್ಯಕ್ಷ' ಚಿತ್ರದಲ್ಲಿ ಶರಣ್ ಜೊತೆ ಚಿಕ್ಕಣ್ಣ ಕಾಂಬಿನೇಷನ್ ಹಿಟ್ ಆಗಿತ್ತು. ಮುಂದೆ 'ಉಪಾಧ್ಯಕ್ಷ' ಚಿತ್ರದಲ್ಲಿ ಹೀರೊ ಆಗುವ ಪ್ರಯತ್ನ ಮಾಡಿದ್ದರು. ಅದರಲ್ಲಿ ಯಶಸ್ಸು ಸಿಕ್ಕಿದೆ.
ಹಾಸ್ಯ ನಟ ಚಿಕ್ಕಣ್ಣಗೆ ಮದುವೆ ನಿಶ್ಚಯವಾಗಿದೆ. ಮಂಡ್ಯ ಮೂಲದ ಪಾವನಾ ಎಂಬುವವರನ್ನು ಕೈಹಿಡಿಯಲು ಚಿಕ್ಕಣ್ಣ ಮುಂದಾಗಿದ್ದಾರೆ. ಈ ವರ್ಷವೇ ಮದುವೆ ನಡೆಯಲಿದೆ.


Click it and Unblock the Notifications











