ಬಾಲನಟನಿಂದ ನೆರವು, ರೈತರಿಂದ ನೇರವಾಗಿ ಬೆಳೆ ಖರೀದಿಗೆ ಮುಂದಾದ ಉಪೇಂದ್ರ
ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಉಪೇಂದ್ರ ಅವರು ತಮ್ಮ ಉಪ್ಪಿ ಫೌಂಡೇಶನ್ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ದೇಣಿಗೆ ಬಂದ ಹಣದ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡುತ್ತಿದ್ದು, ಬಾಲನಟನೊಬ್ಬ 10 ಸಾವಿರ ಸಹಾಯ ಮಾಡಿರುವ ವಿಚಾರ ತಿಳಿಸಿದ್ದಾರೆ. ತಮ್ಮ ಸಂಭಾವನೆ ಹಣದಲ್ಲಿ ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಾಯವಾಗಲಿ ಉದ್ದೇಶದಿಂದ ಬಾಲನಟ ಅನೀಶ್ ಸಾಗರ್ ದೇಣಿಗೆ ನೀಡಿದ್ದಾರೆ ಎಂದು ಉಪ್ಪಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, 'ಜೀವನಾನೆ ನಾಟಕ ಸ್ವಾಮಿ' ಮತ್ತು 'ಸಾಲುಗಾರ' ಎಂಬ ಶಾರ್ಟ್ ಫಿಲಂನಲ್ಲಿ ನಟಿಸಿರುವ ಅನೀಶ್ ಸಾಗರ್ ನಾಯ್ಡು ಎಂಬ ಬಾಲನಟ ತನಗೆ ಬಂದ ಸಂಭಾವನೆ 10000 ರೂವನ್ನು ಸಂಕಷ್ಟದಲ್ಲಿರುವವರಿಗೆ ನೀಡುತ್ತಿದ್ದಾನೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಕೊರೊನಾ ಸಮಯದಲ್ಲಿ ರೈತರು ಕಷ್ಟದಲ್ಲಿದ್ದಾರೆ. ಹಾಗಾಗಿ, ಅವರು ಬೆಳೆದ ತರಕಾರಿ ಹಾಗೂ ಇತರೆ ಬೆಳೆಗಳನ್ನು ಅವರಿಂದಲೇ ನೇರವಾಗಿ ಪಡೆಯುತ್ತಿರುವುದಾಗಿ ಉಪೇಂದ್ರ ತಿಳಿಸಿದ್ದಾರೆ.
'ಕೊರೊನಾ ಲಾಕ್ಡೌನ್ನಿಂದ ನಮ್ಮ ಹಲವು ರೈತರು ಬೆಳೆದ ಬೆಳೆ ಮಾರಲು ಆಗದೇ ಕಷ್ಟದಲ್ಲಿದ್ದಾರೆ. ನಮಗೆ ಈ ದಾನಿಗಳಿಂದ ಬಂದ ಹಣದಲ್ಲಿ ರೈತರ ಬಳಿ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ ಅದನ್ನು ದಿನಸಿ ಕಿಟ್ ಜೊತೆಯಲ್ಲಿ ನೀಡುತ್ತೇವೆ' ಎಂದು ರಿಯಲ್ ಸ್ಟಾರ್ ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಫೌಂಡೇಶನ್ ಕಡೆಯಿಂದ ದಿನಸಿ ಕಿಟ್ ಪಡೆದುಕೊಂಡಿರುವವರ ಫೋಟೋಗಳನ್ನು ಪ್ರಿಯಾಂಕಾ ಉಪೇಂದ್ರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.


Click it and Unblock the Notifications











