ಮಾಸ್ಟರ್ ರೋಹಿತ್ ಚಿತ್ರರಂಗಕ್ಕೆ ಬಂದಿದ್ದೇಗೆ? 'ಕಾಟೇರ' ಚಿತ್ರಕ್ಕೆ ಆಯ್ಕೆ ಹೇಗಾಯ್ತು?
ರಸ್ತೆ ಅಪಘಾತದಲ್ಲಿ ಕನ್ನಡದ ಬಾಲನಟ ಮಾಸ್ಟರ್ ರೋಹಿತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. 'ಒಂದಲ್ಲ ಎರಡಲ್ಲ' ಹಾಗೂ 'ಕಾಟೇರ' ಚಿತ್ರಗಳಲ್ಲಿ ಆತ ನಟಿಸಿ ಗಮನ ಸೆಳೆದಿದ್ದು ಗೊತ್ತೇಯಿದೆ. ಸದ್ಯ ಮೈಸೂರಿನ ಮಣಿಪಾ; ಆಸ್ಪತ್ರೆಯಲ್ಲಿ ರೋಹಿತ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ರೋಹಿತ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಕನ್ನಡಿಗರು ಪ್ರಾರ್ಥಿಸುತ್ತಿದ್ದಾರೆ. ಖಾಸಗಿ ಕಾರ್ಯಕ್ರಮ ಮುಗಿಸಿ ತಾಯಿ, ಸ್ನೇಹಿತರು ಹಾಗೂ ಟೀಚರ್ ಜೊತೆ ಕಾರಿನಲ್ಲಿ ಪ್ರಯಾಣಿಸುವಾಗ ಈ ಗಂಭೀರ ಅಪಘಾತ ಸಂಭವಿಸಿದೆ. ಕೇರಳದ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರ್ ಪುಡಿಪುಡಿ ಆಗಿದೆ. ರೋಹಿತ್ ದವಡೆಗೆ ಗಂಭೀರ ಪೆಟ್ಟಾಗಿದ್ದು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಬಳಿಕ ಮಣಿಪಾಲದಿಂದ ಸೆಂಟ್ ಜೋಸೆಫ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಅಂದಹಾಗೆ ಬಾಲನಟ ರೋಹಿತ್ ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ. 'ಒಂದೆಲ್ಲ ಎರಡಲ್ಲ' ಚಿತ್ರದ ಸಮೀರನ ಪಾತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಒಬ್ಬ ಮುಗ್ಧ ಹುಡುಗನ ಹುಡುಗನ ಹುಡುಕಾಟದಲ್ಲಿದ್ದರು. ಮೈಸೂರಿನಲ್ಲಿ ಆ ಪಾತ್ರಕ್ಕಾಗಿ ಆಡಿಷನ್ ನಡೆಯುತ್ತಿತ್ತು. ರೋಹಿತ್ ತಂದೆಗೆ ಹುಷಾರಿಲ್ಲ ಎನ್ನುವ ವಿಚಾರವನ್ನು ಸೋದರಿಗೆ ಫೋನ್ ಮಾಡಿದ್ದರಂತೆ. ಆಗ ಅವರು ಮೈಸೂರಿನಲ್ಲಿ ಸಿನಿಮಾ ಆಡಿಷನ್ ನಡೀತಿದೆ. ಮಗನನ್ನು ಕರೆದುಕೊಂಡು ಹೋಗಿ ಎಂದಿದ್ದರು. ಹಾಗಾಗಿ ಆಡಿಷನ್ಗೆ ಕರೆದುಕೊಂಡು ಹೋಗಿದ್ದರು.
ಸತ್ಯಪ್ರಕಾಶ್ ಒಂದು ಸಣ್ಣ ಸ್ಕ್ರಿಪ್ಟ್ ನೀಡಿ ಅಭ್ಯಾಸ ಮಾಡಿ ನಟಿಸಿ ತೋರಿಸಲು ಹೇಳಿದ್ದರು. ರೋಹಿತ್ ಸೊಗಸಾಗಿ ಅಭಿನಯಿಸಿದ್ದ. ಅಲ್ಲೇ ಸಮೀರ ಸಿಕ್ಕ ಎಂದು ಸತ್ಯಪ್ರಕಾಶ್ ಖುಷಿಯಾಗಿದ್ದರು. 1500 ಮಕ್ಕಳನ್ನು ಆಡಿಷನ್ ಮಾಡಿ ಕೊನೆಗೆ ರೋಹಿತ್ ಆಯ್ಕೆ ಆಗಿದ್ದ. ಮುಂದೆ 'ಒಂದಲ್ಲ ಎರಡಲ್ಲ' ಚಿತ್ರಕ್ಕಾಗಿ ಅಭ್ಯಾಸ, ಚಿತ್ರೀಕರಣ ಎಲ್ಲಾ ಸೇರಿ ಎರಡು ತಿಂಗಳು ರೋಹಿತ್ ಕೆಲಸ ಮಾಡುವಂತಾಯಿತು. ಚಿತ್ರದಲ್ಲಿ ಮುಗ್ಧ ಹುಡುಗನಾಗಿ ನಟಿಸಿ ಗೆದ್ದರು.

ಉಮಾಪತಿ ಶ್ರೀನಿವಾಸ್ 'ಒಂದಲ್ಲ ಎರಡಲ್ಲ' ಚಿತ್ರ ನಿರ್ಮಿಸಿದ್ದರು. ಈ ಸಿನಿಮಾ ಬಳಿಕ ದರ್ಶನ್ ಜೊತೆ 'ರಾಬರ್ಟ್' ಚಿತ್ರಕ್ಕೆ ಕೈ ಹಾಕಿದ್ದರು. ದರ್ಶನ್ ಕೂಡ 'ಒಂದಲ್ಲ ಎರಡಲ್ಲ' ಸಿನಿಮಾ ನೋಡಿ ಮೆಚ್ಚಿದ್ದರು. ಒಮ್ಮೆ 'ರಾಬರ್ಟ್' ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಮಾಸ್ಟರ್ ರೋಹಿತ್ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಆಗ ಆತನ ನಟನೆ ಬಗ್ಗೆ ದರ್ಶನ್ ಮೆಚ್ಚಿ ಮಾತನಾಡಿದ್ದರು. ಮುಂದೆ ತಮ್ಮ 'ಕಾಟೇರ' ಚಿತ್ರದಲ್ಲಿ ಒಂದು ಪಾತ್ರ ಸಿಗುವಂತೆ ನೋಡಿಕೊಂಡಿದ್ದರು.
'ಕಾಟೇರ' ಚಿತ್ರದಲ್ಲಿ ದರ್ಶನ್ ಜೊತೆ ಜೊತೆಗೆ ಪುಟ್ಟರಾಜು ಆಗಿ ರೋಹಿತ್ ಪಾತ್ರವೂ ಇರುತ್ತದೆ. ಅಲ್ಲೂ ತನ್ನ ಮುಗ್ಧ ನಟನೆಯಿಂದ ರೋಹಿತ್ ಗಮನ ಸೆಳೆದಿದ್ದರು. ಇನ್ನು 'ಒಂದಲ್ಲ ಎರಡಲ್ಲ' ಚಿತ್ರದ ನಟನೆಗಾಗಿ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಕೂಡ ರೋಹಿತ್ಗೆ ಸಿಕ್ಕಿತ್ತು. ಈ ವಿಚಾರ ಕೇಳಿ ನನಗೆ ಆ ರಾಷ್ಟ್ರಪ್ರಶಸ್ತಿ ಒಮ್ಮೆ ತಂದು ತೋರಿಸಿ ಸರ್ ಎಂದು ರೋಹಿತ್ ಬಳಿ ದರ್ಶನ್ ಕೇಳಿದ್ದರಂತೆ. ಈ ವಿಚಾರವನ್ನು ಸ್ವತಃ ದರ್ಶನ್ ಹೇಳಿಕೊಂಡಿದ್ದರು.
ಮಾಸ್ಟರ್ ರೋಹಿತ್ ಅವರನ್ನು 'ಸರ್' ಎಂದೇ ಪ್ರೀತಿಯಿಂದ ದರ್ಶನ್ ಮಾತನಾಡಿಸುತ್ತಾರೆ. ಇದನ್ನು ರೋಹಿತ್ ಹಿಂದೆ ಒಮ್ಮೆ ಹೇಳಿದ್ದರು. ಪಾಂಡವಪುರದ ಪ್ರತಿಭೆ 'ಒಂದಲ್ಲ ಎರಡಲ್ಲ' ಚಿತ್ರದ ಸಮಯದಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕರಾಟೆ ಅಂದರೆ ಬಹಳ ಆಸೆ ಇತ್ತು. ಹಾಗಾಗಿ ಅಭ್ಯಾಸ ಮಾಡುತ್ತಿದ್ದ. ನಟಿಸಿದ ಮೊದಲ ಚಿತ್ರದಲ್ಲೇ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಪಡೆದು ಎಲ್ಲರ ಹುಬ್ಬೇರಿಸಿದ್ದರು.


Click it and Unblock the Notifications











