ವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು
ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಖ್ಯಾತಿಯ ಉತ್ತಂಗಕ್ಕೇರಿರುವ ವಿಜಯ್ ದೇವರಕೊಂಡ ಅವರು ಬಹು ಬೇಗನೇ ತೆಲುಗು ಸಿನಿ ಉದ್ಯಮದಲ್ಲಿ ತಮ್ಮದೇ ಆದ ಜಾಗವನ್ನು ಸಂಪಾದಿಸಿಕೊಂಡರು.
ಎಷ್ಟು ಬೇಗ ಖ್ಯಾತಿ ಗಳಿಸಿದರೋ ಅಷ್ಟು ಬೇಗ ವಿವಾದಗಳೂ ಅವರನ್ನು ಸುತ್ತಿಕೊಂಡವು ಮತ್ತು ಸುತ್ತಿಕೊಳ್ಳುತ್ತಿವೆ. ಇತ್ತೀಚೆಗೆ ವಿಜಯ್ ದೇವರಕೊಂಡ ಅವರು ಪ್ರಾರಂಭ ಮಾಡಿರುವ ಚಾರಿಟಿ ಬಗ್ಗೆ ಅಂತರ್ಜಾಲ ಮಾಧ್ಯಮವೊಂದು ಕೆಟ್ಟದಾಗಿ ಬರೆದಿತ್ತು. ಇದರ ವಿರುದ್ಧ ವಿಜಯ್ ದೇವರಕೊಂಡ ಸಿಡಿದೆದ್ದಿದ್ದರು.
ಈಗ ವಿಜಯ್ ದೇವರಕೊಂಡ ಬೆಂಬಲಕ್ಕೆ ಇಡೀಯ ತೆಲುಗು ಚಿತ್ರರಂಗವೇ ನಿಂತಿದೆ. ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು, ಕಾಜಲ್ ಅಗರ್ವಾಲ್ ಸೇರಿ ಹಲವರು ವಿಜಯ್ ದೇವರಕೊಂಡ ಪರವಾಗಿ ನಿಂತು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪ
ವಿಜಯ್ ದೇವರಕೊಂಡ ಅನವಶ್ಯಕವಾಗಿ ಜನರಿಂದ ಹಣ ದೇಣಿಗೆ ಪಡೆದು, ಪಡೆದ ಹಣವನ್ನು ಸರಿಯಾಗಿ ಜನರಿಗೆ ಹಂಚುತ್ತಿಲ್ಲವೆಂದು ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿತ್ತು. ಇದು ವಿಜಯ್ ದೇವರಕೊಂಡ ಅವರ ಸಿಟ್ಟು ಕೆರಳಿಸಿತ್ತು.

ಸುಳ್ಳು ಸುದ್ದಿ ನಂಬಬೇಡಿ: ವಿಜಯ್
ಇದರ ವಿರುದ್ಧ ವಿಡಿಯೋ ರೆಕಾರ್ಡ್ ಮಾಡಿ ಹಾಕಿದ್ದ ವಿಜಯ್ ದೇವರಕೊಂಡ, ಕಠಿಣವಾದ ಪದಗಳಲ್ಲಿಯೇ ಸುಳ್ಳು ಸುದ್ದಿ ಬರೆದವರನ್ನು, ಪ್ರಕಟಿಸಿದವರನ್ನು ಟೀಕಿಸಿದ್ದರು. ಅಷ್ಟೆ ಅಲ್ಲದೆ, ಸುಳ್ಳು ಸುದ್ದಿ ಪ್ರಕಟಿಸುವ ವೆಬ್ಸೈಟ್ಗಳನ್ನು ನಂಬಬೇಡಿ ಎಂದು ಸಹ ಮನವಿ ಮಾಡಿದ್ದರು.

ಹಣಕ್ಕಾಗಿ ಸುದ್ದಿ ವಿರುದ್ಧ ಮಹೇಶ್ ಬಾಬು ಕಿಡಿ
ಇದಕ್ಕೆ ತೆಲುಗು ಚಿತ್ರರಂಗದ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದರು, ಮಹೇಶ್ ಬಾಬು ಟ್ವೀಟ್ ಮಾಡಿ, 'ನಾನು ನಿನ್ನ ಜೊತೆಗಿದ್ದೇನೆ ಸಹೋದರ, ಜನರ ಪ್ರೀತಿ ಗಳಿಸಲು ವರ್ಷಾನುಗಟ್ಟಲೆ ಶ್ರಮ ಪಡಬೇಕಾಗುತ್ತದೆ. ಆದರೆ ಯಾರೋ ಒಬ್ಬ ಅನಾಮಿಕ ಹಣಕ್ಕಾಗಿ ಗಳಿಸಿದ ಹೆಸರನ್ನೆಲ್ಲಾ ಹಾಳು ಮಾಡುವುದು ಅಪರಾಧ' ಎಂದು ಅವರು ಬರೆದಿದ್ದಾರೆ.

ನಾನೂ ಸಹ ನೊಂದಿದ್ದೇನೆ: ಚಿರಂಜೀವಿ
ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿ, 'ಈ ಘಟನೆಯಿಂದ ನಿಮಗಾದ ನೋವು ಅರ್ಥ ಮಾಡಿಕೊಳ್ಳಬಲ್ಲೆನು, ಇಂಥಹಾ ಜವಾಬ್ದಾರಿಹೀನ ಬರಹಗಳಿಂದ ನಾನು ಮತ್ತು ನನ್ನ ಕುಟುಂಬ ಸಾಕಷ್ಟು ನೋವು ಅನುಭವಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ
ವಿಜಯ್ ದೇವರಕೊಂಡ ಗೆ ಬೆಂಬಲಿಸಿ ತೆಲುಗು ಚಿತ್ರರಂಗದ ಹಲವರು ಟ್ವೀಟ್ ಮಾಡಿದ್ದು, ನಟಿ ಕಾಜಲ್ ಅಗರ್ವಾಲ್, ಕ್ರಿಶ್ ಜಗರಲಮುಡಿ, ಎಸ್.ಹರಿಶಂಕರ್, ವಂಶಿ ಪೈಡಪಲ್ಲಿ, ಕೊರಟಾಲ ಶಿವ, ನಟಿ ರಾಶಿ ಇನ್ನೂ ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











