ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ; ಭಾವುಕ ಪತ್ರ ಹಂಚಿಕೊಂಡ ಸರ್ಜಾ ಕುಟುಂಬ
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನ ಹೊಂದಿ ಇವತ್ತಿಗೆ ಒಂದು ವರ್ಷ ಕಳೆದಿದೆ. ಜೂನ್ 7, 2020 ಮಧ್ಯಾಹ್ನ ಸುಮಾರು 4 ಗಂಟೆಗೆ ಚಿರಂಜೀವಿ ಸರ್ಜಾ ಇನ್ನಿಲ್ಲ ಎನ್ನುವ ಸುದ್ದಿ ಕನ್ನಡ ಚಿತ್ರಪ್ರಿಯರಿಗೆ ಬರ ಸಿಡಿಲಿನಂತೆ ಬಡಿಯಿತು. ಯಾರು ಕೂಡ ಕನಸಲ್ಲೂ ನಿರೀಕ್ಷಿಸದ ಸುದ್ದಿ ಕೇಳಿ ಇಡೀ ಕರ್ನಾಟಕ ಶಾಕ್ ಆಗಿತ್ತು.
Recommended Video
ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದರು. ಮನೆಯಲ್ಲಿ ಕುಸಿದು ಬಿದ್ದ ಚಿರಂಜೀವಿ ಸರ್ಜಾ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಕೆಲವೇ ಕ್ಷಣದಲ್ಲಿ ಚಿರು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಚಿರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಕುಟುಂಬದವರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಚಿರು ಹಠಾತ್ ಸಾವಿನ ನೋವಿನಿಂದ ಕುಟುಂಬದವರು ಇನ್ನು ಹೊರಬಂದಿಲ್ಲ.
ಪ್ರತಿದಿನ, ಪ್ರತಿಕ್ಷಣ ಚಿರು ನೆನೆದು ಭಾವುಕರಾಗುತ್ತಾರೆ. ಚಿರು ಜೊತೆ ಕಳೆದ ನೆನಪನ್ನು ಹಂಚಿಕೊಳ್ಳುತ್ತಿರುತ್ತಾರೆ. ಚಿರು ನಿಧನಹೊಂದಿ ಒಂದು ವರ್ಷದ ಪುಣ್ಯಸ್ಮರಣೆ ದಿನ ಸರ್ಜಾ ಕುಟುಂಬ ಭಾವುಕ ಪತ್ರ ಹಂಚಿಕೊಂಡಿದ್ದಾರೆ.

'ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ, ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದಿಗೂ ನಿನ್ನ ನೆನಪಿನಲ್ಲೇ, ನಿನ್ನ ಪ್ರೀತಿಯ ಕುಟುಂಬ..' ಎಂದು ಇಡೀ ಕುಟುಂಬ ಭಾವುಕ ಪತ್ರವನ್ನು ಹಂಚಿಕೊಂಡಿದ್ದಾರೆ.

ಇನ್ನು ಪತ್ನಿ ಮೇಘನಾ ರಾಜ್ ಪತಿ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಸಹ ನೆಚ್ಚಿನ ನಟನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿರು ಫೋಟೋ ಶೇರ್ ಮಾಡಿ ಸ್ಮರಿಸುತ್ತಿದ್ದಾರೆ.


Click it and Unblock the Notifications











