ಚಿರು ಸರ್ಜಾ ದೂರಾಗಿ ಎರಡು ವರ್ಷ: ನೆನಪು ಸದಾ ಹಸಿರು
ಎರಡು ವರ್ಷಗಳ ಹಿಂದೆ ಇದೇ ದಿನ ವಿಧಿ, ನಟ ಚಿರಂಜೀವಿ ಸರ್ಜಾರನ್ನು ಭೌತಿಕವಾಗಿ ಮರೆಯಾಗಿಸಿತು. ಆದರೆ ಆದರೆ ಅವರನ್ನು ಹೃದಯದಲ್ಲಿ ಅಜರಾಮರಗೊಳಿಸಿಕೊಂಡಿದ್ದಾರೆ ಅಭಿಮಾನಿಗಳು.
ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಎರಡು ವರ್ಷಗಳಾಗಿವೆ. ಜೂನ್ 07, 2020 ರಂದು ಚಿರಂಜೀವಿ ಸರ್ಜಾ ಹಠಾತ್ ಹೃದಯಾಘಾತದಿಂದ ನಿಧನ ಹೊಂದಿದರು.
ಪತ್ನಿ ಮೇಘನಾ ರಾಜ್, ತಂದೆ-ತಾಯಿ, ತಮ್ಮ ಧ್ರುವ ಸರ್ಜಾ ಎಲ್ಲರನ್ನೂ ಅಗಲಿ ದೂರಾದರು ಚಿರಂಜೀವಿ ಸರ್ಜಾ. ಆದರೆ ಅವರ ಲಕ್ಷಾಂತರ ಅಭಿಮಾನಿಗಳು ಚಿರು ಸರ್ಜಾ ಅವರನ್ನು ಹೃದಯದಲ್ಲಿರಿಸಿಕೊಂಡಿದ್ದಾರೆ.
2020ರ ಜೂನ್ 7 ರಂದು ಮಧ್ಯಾಹ್ನದ ವೇಳೆಗೆ ಚಿರಂಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು, ಮನೆಯಲ್ಲಿಯೇ ಪ್ರಜ್ಞೆತಪ್ಪಿ ಬಿದ್ದುಬಿಟ್ಟರು. ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯ್ತು. ನಂತರ ಅವರನ್ನು ಮೃತ ಎಂದು ಘೋಷಿಸಲಾಯ್ತು. ಹಠಾತ್ ಹೃದಯಾಘಾತದಿಂದ ಚಿರಂಜೀವಿ ಸರ್ಜಾರ ಮೃತ್ಯು ಸಂಭವಿಸಿದೆ ಎಂದು ವೈದ್ಯರು ವರದಿ ನೀಡಿದರು.

ಚಿರಂಜೀವಿ ಸರ್ಜಾರ ಅಂತಿಮ ದರ್ಶನ ಬಸವನಗುಡಿಯ ಅವರ ನಿವಾಸದಲ್ಲಿ ನಡೆಯಿತು. ಅಂತಿಮ ದರ್ಶನಕ್ಕೆ ದರ್ಶನ್, ಆಗ ಬದುಕಿದ್ದ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು, ರಾಜಕಾರಣಿಗಳು ಆಗಮಿಸಿದ್ದರು. ಅಂತಿಮ ಸಂಸ್ಕಾರವನ್ನು ಕನಕಪುರದ ಬಳಿ ಇರುವ ಧ್ರುವ ಸರ್ಜಾರ ಫಾರ್ಮ್ ಹೌಸ್ನಲ್ಲಿ ಮಾಡಲಾಯಿತು.
ಚಿರಂಜೀವಿ ಸರ್ಜಾ ನಿಧನ ಹೊಂದಿದಾಗ ಪತ್ನಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಬಳಿಕ ಅಕ್ಟೋಬರ್ 22 ರಂದು ರಾಯನ್ ಸರ್ಜಾ ಜನನವಾಯಿತು. ಮೇಘನಾ ರಾಜ್ ಸೇರಿದಂತೆ, ಸರ್ಜಾ ಕುಟುಂಬ ರಾಯನ್ ಸರ್ಜಾರಲ್ಲಿಯೇ ಚಿರಂಜೀವಿ ಸರ್ಜಾರನ್ನು ಕಾಣುತ್ತಿದ್ದಾರೆ.
ಹಿರಿಯ ನಟ ಶಕ್ತಿ ಪ್ರಸಾದ್ ಮೊಮ್ಮಗ, ಅರ್ಜುನ್ ಸರ್ಜಾರ ಬಹು ಹತ್ತಿರದ ಸಂಬಂಧಿ ಆಗಿರುವ ಚಿರು ಸರ್ಜಾ, 2009 ರಲ್ಲಿ 'ವಾಯುಪುತ್ರ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಎರಡು ದಶಕದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಸಿನಿಮಾ 'ರಾಜ ಮಾರ್ತಾಂಡ' ಸಿನಿಮಾಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











