ತಾಯಿ ಮತ್ತು ಹಸಿವು ಬಗ್ಗೆ ಚಿರಂಜೀವಿ ಸರ್ಜಾ ಹೇಳಿದ್ದ ಮನಕಲಕುವ ಘಟನೆ
ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದಲ್ಲ ಒಂದು ರೀತಿ ಸವಾಲಿನ, ನೋವಿನ ಘಟನೆಗಳು ನಡೆದಿರುತ್ತವೆ. ಎಷ್ಟೇ ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಹೊರ ಜಗತ್ತಿಗೆ ಕಾಲಿಟ್ಟಾಗ ಅದು ಕಲಿಸುವ ಪಾಠವೇ ಬೇರೆ. ಅಂತಹ ಅನುಭವದ ಪಾಠ ಚಿರಂಜೀವಿ ಸರ್ಜಾ ಅವರಿಗೂ ಆಗಿತ್ತು. ಮನಕಲಕುವ ಘಟನೆಯನ್ನು ಚಿರಂಜೀವಿ ಉದಯ ಟಿವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು.
Recommended Video
ಹಿರಿಯ ನಟಿ ಲಕ್ಷ್ಮೀ ನಿರೂಪಣೆಯ ಈ ಕಾರ್ಯಕ್ರಮವೊಂದರ ವಿಡಿಯೋ ಈಗ ವೈರಲ್ ಆಗಿದೆ. ಚಿರಂಜೀವಿ ಅವರ ಅಕಾಲಿಕ ಅಗಲುವಿಕೆಯ ನೋವಿನ ನಡುವೆ, ಅವರು ಅನುಭವಿದ್ದ ಹಸಿವಿನ ಸಂಕಟ, ಅದನ್ನು ಅವರು ಎದುರಿಸಿದ್ದ ಬಗೆ ಹಾಗೂ ಆ ಅನುಭವದ ಕುರಿತು ನಟಿ ಲಕ್ಷ್ಮೀ ಹೇಳಿದ್ದ ಮಾತುಗಳು ಎಂದೆಂದಿಗೂ ಪ್ರಸ್ತುತ ಎನಿಸುತ್ತವೆ.
ಚಿರಂಜೀವಿ ಸರ್ಜಾ ತಮ್ಮ ಬದುಕಿಗೆ ಸಾಣೆ ಹಿಡಿಯುವ ಪ್ರಯತ್ನವನ್ನು ಮುಂಬೈನಲ್ಲಿ ನಡೆಸಿದ್ದರು. ಅಲ್ಲಿನ ಜೀವನ ಎಣಿಸಿಕೊಂಡಷ್ಟು ಸುಲಭವಾಗಿರಲಿಲ್ಲ. ಅಲ್ಲಿ ಹಣವಿಲ್ಲದೆ ಎದುರಿಸಿದ್ದ ಕಹಿ ಹೇಗಿತ್ತು ಎನ್ನುವುದು ಅವರೇ ಹೇಳಿಕೊಂಡಿದ್ದರು. ಮುಂದೆ ಓದಿ...

ಒಂದು ಸಾವಿರದಲ್ಲಿ ಇಡೀ ತಿಂಗಳು
ಮುಂಬೈನಲ್ಲಿದ್ದ ಸಂದರ್ಭದಲ್ಲಿ ತಿಂಗಳ ಮೊದಲು ಮೂರು ಸಾವಿರ ಬಂದಾಗ ಎಲ್ಲರನ್ನೂ ಕರೆದುಕೊಂಡು ಹೋಗಿ ತಿನ್ನಿಸಿಬಿಡುತ್ತಿದ್ದೆ. ನನಗೇ ಗೊತ್ತಿಲ್ಲದ ಹಾಗೆ ಒಂದೂವರೆ ಎರಡು ಸಾವಿರ ರೂಪಾಯಿ ಖರ್ಚು ಮಾಡಿಬಿಡುತ್ತಿದ್ದೆ. ಕೊನೆಗೆ ಉಳಿಯುತ್ತಿದ್ದದ್ದು ಒಂದು ಸಾವಿರ ರೂಪಾಯಿ ಮಾತ್ರ. ಉಳಿದ ಒಂದು ತಿಂಗಳವರೆಗೆ ಅದರಲ್ಲಿಯೇ ಬದುಕಬೇಕಿತ್ತು.

ದಿನಕ್ಕೆ ಎರಡೇ ಇಡ್ಲಿ
ದಿನಕ್ಕೆ ಏನೇ ಕಟ್ಟುನಿಟ್ಟಾದ ವ್ಯಯ ಮಾಡಿದರೂ ನೂರು ರೂಪಾಯಿ ಖರ್ಚಾಗುತ್ತಿತ್ತು. ಬೆಳಿಗ್ಗೆ ತಿನ್ನುತ್ತಿದ್ದದ್ದು ಎರಡೇ ಇಡ್ಲಿ. ಐದು ರೂಪಾಯಿಗೆ ಎರಡು ಇಡ್ಲಿ ಸ್ವಲ್ಪ ಚಟ್ನಿ ಕೊಡುತ್ತಿದ್ದರು. ಬೆಳಿಗ್ಗೆ ಎರಡು ಇಡ್ಲಿ ತಿಂದರೆ ಮರುದಿನ ಬೆಳಿಗ್ಗೆಯೇ ತಿನ್ನುತ್ತಿದ್ದದ್ದು. ಅಲ್ಲಿಯವರೆಗೂ ಹೊಟ್ಟೆಯ ಹಸಿವು ತಡೆದುಕೊಂಡೇ ಇರಬೇಕಾಗಿತ್ತು.

ತಾಯಿ ಬಗ್ಗೆ ಗೌರವ ಹೆಚ್ಚಿತು
ಅಲ್ಲಿ ಹಸಿವಿನ ಸಂಕಟಗಳನ್ನು ಅನುಭವಿಸಿದ ಬಳಿಕ ನಮ್ಮ ತಾಯಿ ಮೇಲೆ ಗೌರವ ಜಾಸ್ತಿಯಾಯ್ತು. ಒಮ್ಮೆ, ಜೇಬಲ್ಲಿ ದುಡ್ಡಿಲ್ಲ ತುಂಬಾ ಹೊಟ್ಟೆ ಹಸಿವಾಗುತ್ತಿತ್ತು. ನಾನು ಬರೊಲ್ಲ ಎಂದರೂ ಸ್ನೇಹಿತರು ಪ್ರಾಜೆಕ್ಟ್ ಬಗ್ಗೆ ಮಾತಾಡಬೇಕು ಎಂದು ಬಲವಂತವಾಗಿ ಕಾಫಿ ಡೇಗೆ ಕರೆದುಕೊಂಡು ಹೋಗಿದ್ದರು.

ಹಸಿದಿದ್ದರೂ ಬೇಡ ಎಂದೆ
ಕಾಫಿ ಡೇನಲ್ಲಿ ಕುಳಿತಾಗ ಕಾಫಿ, ಸ್ಯಾಂಡ್ ವಿಚ್ ತಗೋ ಎಂದರು. ಏನೂ ಬೇಡ ಈಗಷ್ಟೇ ತಿಂದು ಬಂದೆ ಎಂದೆ. ವಾಸ್ತವವಾಗಿ ಹೊಟ್ಟೆ ಹಸಿದು ಹೋಗಿತ್ತು. ನನ್ನ ಫ್ರೆಂಡ್ ಪಕ್ಕದಲ್ಲಿ ಕುಳಿತು ಸ್ಯಾಂಡ್ ವಿಚ್ ಅರ್ಧ ತಿಂದು ಇನ್ನು ಅರ್ಧ ಹಾಗೆಯೇ ಬಿಟ್ಟ. ಇದ್ಯಾಕೆ ವೇಸ್ಟ್ ಮಾಡುತ್ತಿದ್ದೀಯಾ ಎಂದು ಕೇಳಿದಾಗ, ಅಯ್ಯೋ ಇರಲಿ ಬಿಡು ಇದು ಚೆನ್ನಾಗಿಲ್ಲ ಎಂದ.

ಊಟದ ಕಷ್ಟ ಅರಿವಾಯ್ತು
ನಾವು ಮನೆಯಲ್ಲಿ ಇದ್ದಾಗ ತಾಯಿ ಊಟಕ್ಕೆ ಪಲ್ಯ ಅದು ಇದು ಎಲ್ಲ ಮಾಡಿಕೊಡೋರು. ನಾನು ಇದು ಚೆನ್ನಾಗಿಲ್ಲ ಬೇಡ ಎಂದೆಲ್ಲ ಹೇಳುತ್ತಿದ್ದೆ. ಆಗ ಗೊತ್ತಿಲ್ಲದೆ ಮಾಡಿದ ತಪ್ಪು ನನಗೆ ಬಾಂಬೆಯಲ್ಲಿ ಅರಿವಾಯ್ತು. ಅಮ್ಮನ ಮೇಲೆ ಗೌರವ ಜಾಸ್ತಿ ಆಯ್ತು, ಊಟದ ಮೇಲೆ ಗೌರವ ಜಾಸ್ತಿ ಆಯ್ತು. ಕಷ್ಟ ಎಂದರೆ, ಅದರಲ್ಲಿಯೂ ಊಟದ ಕಷ್ಟ ಗೊತ್ತಾಯ್ತು ಎಂದು ಚಿರಂಜೀವಿ ಹೇಳಿಕೊಂಡಿದ್ದರು.

ಮಕ್ಕಳಿಗೆ ಹಸಿವು ಗೊತ್ತಾಗಬೇಕು
ಹೊಟ್ಟೆ ಹಸಿವು ಎಂದರೆ ಏನು ಎಂಬುದೇ ಗೊತ್ತಿರದಂತಹ ಮನೆಯಿಂದ ಬಂದವರು. ಅಲ್ಲಿಗೆ ಹೋದ ಬಳಿಕ ನಿಮಗೆ ಗೊತ್ತಾಗಿದೆ. ಇಂದಿನ ಮಕ್ಕಳಿಗೆ ಊಟದ ಕಷ್ಟ ಏನು ಎಂಬುದು ಗೊತ್ತಾಗಬೇಕು, ಖಂಡಿತಾ ಗೊತ್ತಾಗಬೇಕು. ಅವರಿಗೆ ಹಾಗೆ ಗೊತ್ತಾಗದಂತೆ ಬೆಳೆಸುವುದು ನಮ್ಮಂತಹ ತಾಯಂದಿರು. ಯಾವಾಗ ಊಟದ ಬೆಲೆ ಗೊತ್ತಾಗುತ್ತೋ ಆಗಲೇ ಈ ದೇಶ ಉದ್ಧಾರ ಆಗೋದು ಎಂದು ನಟಿ ಲಕ್ಷ್ಮಿ ಅವರ ಪ್ರತಿಕ್ರಿಯೆ ನಾಟುವಂತಿತ್ತು.

ಮೆಕ್ಯಾನಿಕ್ ಕೆಲಸ ಮಾಡಿದ್ದ ಚಿರು
ಈ ವಿಭಿನ್ನ ಕಾರ್ಯಕ್ರಮದಲ್ಲಿ ನಟ, ನಟಿಯರು ಜನಸಾಮಾನ್ಯರು ಮಾಡುವ ಒಂದೊಂದು ಕೆಲಸಗಳಲ್ಲಿ ಕೆಲವು ಸಮಯ ತೊಡಗಿಕೊಂಡು ಸಂಪಾದನೆ ಮಾಡುವ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಚಿರಂಜೀವಿ, ವರ್ಕ್ ಶಾಪ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು. ಕಾರ್ಗಳ ಸರ್ವೀಸ್ ಮಾಡಿದ್ದರು. ನನ್ನ ತಂದೆ ಕೂಡ ಮೆಕ್ಯಾನಿಕ್ ಆಗಿದ್ದರು ಎಂಬುದನ್ನು ಚಿರು ತಿಳಿಸಿದ್ದರು. ಹಾಗೆಯೇ ಈ ಕಾರ್ಯಕ್ರಮದ ಮೂಲಕ ಶಿವರಾಜ್ ಎಂಬುವವರಿಗೆ ಆರ್ಥಿಕ ಸಹಾಯ ಮಾಡಿದ್ದರು.


Click it and Unblock the Notifications











