ವೇದಿಕೆಯಲ್ಲಿ ಚಿರಂಜೀವಿ 'ಅನುರಾಗ ಅರಳಿದಾಗ'
ಇಂದು (ನವೆಂಬರ್ 29) ಬೆಳಗ್ಗೆ ಅದ್ದೂರಿಯಾಗಿ ನೆರವೇರಿದ ಡಾ.ರಾಜ್ ಕುಮಾರ್ ಸ್ಮಾರಕ ಅನಾವರಣ ಸಮಾರಂಭ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಯ್ತು. ಅಣ್ಣಾವ್ರ ಸ್ಮರಣೆ ಚಿರಸ್ಥಾಯಿಯಾಗಿಡಲು ಒಂದೇ ವೇದಿಕೆಯಲ್ಲಿ ಸಾಕ್ಷಿಯಾದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಮೆಗಾ ಸ್ಟಾರ್ ಚಿರಂಜೀವಿಯನ್ನು ನೋಡುವ ಭಾಗ್ಯ ಕನ್ನಡ ಕುಲಕೋಟಿಗೆ ದಕ್ಕಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಜನಿಕಾಂತ್, ಚಿರಂಜೀವಿ ಸೇರಿದಂತೆ ರಾಜ್ ಕುಟುಂಬ ಸ್ಮಾರಕ ಅನಾವರಣ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಡಾ.ರಾಜ್ ಕುಮಾರ್ ಕುರಿತಾಗಿ ರೆಡಿಮಾಡಿರುವ 'ಸಾಕ್ಷ್ಯಚಿತ್ರ'ವನ್ನು ಬಿಡುಗಡೆ ಮಾಡಿದ ಮೆಗಾ ಸ್ಟಾರ್ ಚಿರಂಜೀವಿ, ಅಣ್ಣಾವ್ರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು. [ಅಣ್ಣಾವ್ರ ಸ್ಮಾರಕ ಅನಾವರಣದ ಅಪೂರ್ವ ಕ್ಷಣಗಳು]

ರಾಜ್ ಕುಮಾರ್ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಚಿರಂಜೀವಿ, ಅಣ್ಣಾವ್ರ ಜೊತೆ ಕಳೆದ ಕೆಲ ಅತ್ಯಮೂಲ್ಯ ಘಟನೆಗಳನ್ನ ವೇದಿಕೆಯಲ್ಲಿ ಹಂಚಿಕೊಂಡರು. ''ನಾನು ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿ ಓದ್ತಿದ್ದೆ. ನನಗೆ ರಜನಿಕಾಂತ್ ಸೀನಿಯರ್. ಆಗ ಸಿನಿಮಾ ಶೂಟಿಂಗ್ ಸ್ಪಾಟ್ ಗೆ ಹೋಗಿ, ಶಾಟ್ ಗಳ ಬಗ್ಗೆ ಕಲಿಯುವುದು ಅವಶ್ಯಕವಾಗಿತ್ತು. ಆಗೊಮ್ಮೆ ನಾನು ರಾಜ್ ಕುಮಾರ್ ಅಭಿನಯಿಸುತ್ತಿದ್ದ ಸಿನಿಮಾವೊಂದರ ಶೂಟಿಂಗ್ ಸ್ಪಾಟ್ ಗೆ ಹೋಗಿದ್ದೆ. ಅವರನ್ನ ನೋಡಿ, ಇಂತಹ ದೊಡ್ಡ ಸ್ಟಾರ್ ಹತ್ತಿರ ಮಾತನಾಡುವುದು ಹೇಗೆ ಅಂತ ಟೆನ್ಷನ್ ಮಾಡಿಕೊಂಡಿದ್ದೆ. ಆಗ ನನ್ನನ್ನ ನೋಡಿ ಅವರೇ ಹತ್ತಿರ ಬಂದು ''ಚೆನ್ನಾಗಿದ್ದೀರಾ'' ಅಂತ ಕೇಳಿದರು.'' [ಅಣ್ಣಾವ್ರ ಜೀವನ ಪುಟದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ]
''ನನಗೆ ಬರುವ ಕನ್ನಡದಲ್ಲಿ ಚೆನ್ನಾಗಿದ್ದೀನಿ ಅಂದೆ. ಮುಂದಕ್ಕೆ ಕನ್ನಡದಲ್ಲಿ ಮಾತನಾಡುವುದಕ್ಕೆ ಬರ್ಲಿಲ್ಲ. ನಾನು 'ತೆಲಗುವಾಳ್ಳು' ಅಂದೆ. ಅದಕ್ಕವರು ತೆಲುಗಿನಲ್ಲಿ ''ಬಾಗುನ್ನಾರಾ, ಆಂಧ್ರಾಲೋ ಅನ್ನಿ ತೆಲುಗುವಾಳ್ಳು ಬಾಗುನ್ನಾರಾ'' ಅಂತ ಕೇಳಿದರು. ನನಗೆ ಶಾಕ್ ಆಗ್ಹೋಯ್ತು. ಮೈಂಡ್ ಬ್ಲಾಕ್ ಆಗೋಯ್ತು. ಎಂಥಾ ಸರಳಜೀವಿ ಇವರು.'' ಅಂತ ಅಣ್ಣಾವ್ರ ಜೊತೆಗೆ ತಮ್ಮ ಮೊದಲ ಭೇಟಿಯನ್ನು ಚಿರಂಜೀವಿ ನೆನಪು ಮಾಡಿಕೊಂಡರು.

''ನನ್ನ ಸಿನಿಮಾ 'ಘರಾನಾ ಮೊಗಡು' (ಅಣ್ಣಾವ್ರ 'ಅನುರಾಗ ಅರಳಿತು' ಚಿತ್ರದ ರೀಮೇಕ್) ಚಿತ್ರವನ್ನು ನೋಡಿ ಅದರ ಬಗ್ಗೆ ನನಗೆ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹುಬ್ಬಳ್ಳಿಯಲ್ಲಿ ಕನ್ನಡ ಸಿನಿಮಾಗಳನ್ನೂ ಮೀರಿಸಿ 'ಘರಾನಾ ಮೊಗಡು' ಓಡುತ್ತಿದೆ. ಮುಂದೆ ನೀನು ದೊಡ್ಡ ನಟನಾಗುತ್ತೀಯಾ ಅಂತ ಹೇಳಿದರು. ಅದನ್ನ ನಾನು ಸಾಯುವವರೆಗೂ ಮರೆಯುವುದಿಲ್ಲ. ಅಂತಹ ಮಹಾನ್ ವ್ಯಕ್ತಿಗೆ ಸಾವಿಲ್ಲ. ಈ ಸ್ಮಾರಕದಿಂದ ಅವರು ಅಮರಜೀವಿಯಾಗಿದ್ದಾರೆ'' ಅಂತ ರಾಜಣ್ಣನ ಬಗ್ಗೆ ಚಿರಂಜೀವಿ ಭಾವನಾತ್ಮಕವಾಗಿ ಮಾತನಾಡಿದರು. [ನಟಸಾರ್ವಭೌಮ ರಾಜ್ ಬಗ್ಗೆ ರಜನಿ ಹೀಗಂದಿದ್ಯಾಕೆ? ]
ಪ್ರತಿ ಇಂಟರ್ ವ್ಯೂಗಳಲ್ಲೂ ರಾಜ್ ಕುಮಾರ್ ರವರನ್ನ ನೆನಪಿಸಿಕೊಳ್ಳುವ ಚಿರಂಜೀವಿ, ಇಂದು ಮುತ್ತುರಾಜನ ಬಗ್ಗೆ 'ಮುತ್ತಿ'ನಂಥಹ ಮಾತುಗಳನ್ನಾಡಿರುವುದು ವರನಟನ ಅಭಿಮಾನಿಗಳಿಗೆ ಇನ್ನಿಲ್ಲದಷ್ಟು ಖುಷಿಕೊಟ್ಟಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











