ಪೊಲೀಸ್ ವಿಚಾರಣೆಯಿಂದ ಸಲ್ಮಾನ್, ರಾಣಿ, ಪ್ರೀತಿ ಬಚಾವು
ಮುಂಬೈ : ಪೊಲೀಸ್ ಬಂಧನದಲ್ಲಿರುವ ಫೈನಾನ್ಶಿಯರ್ ಭರತ್ ಶಾ ಬಗೆಗೆ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದಲ್ಲಿ ನಟಿಸಿರುವ ತಾರೆಯರ ವಿಚಾರಣೆ ನಡೆಸುವುದಿಲ್ಲ ಎಂದು ಮುಂಬೈ ಪೊಲೀಸ್ ಕಮಿಷನರ್ ಮಹೇಶ್ ನಾರಾಯಣ್ ಸಿಂಗ್ ಮಂಗಳವಾರ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಸಲ್ಮಾನ್ ಖಾನ್, ಪ್ರೀತಿ ಜಿಂಟಾ ಹಾಗೂ ರಾಣಿ ಮುಖರ್ಜಿ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದಲ್ಲಿ ಸಂಭಾವನೆ ಪಡೆದು ಕೆಲಸ ಮಾಡಿರುವ ನಟ- ನಟಿಯರಷ್ಟೆ. ಅವರನ್ನು ಭರತ್ ಶಾ ವಿಷಯದಲ್ಲಿ ಪ್ರಶ್ನೆಗೊಳಪಡಿಸುವ ಮಾತೇ ಇಲ್ಲ. ನಜೀಂ ರಿಜ್ವಿ ಬಗ್ಗೆ ಪಕ್ಕಾ ಸಾಕ್ಷ್ಯ ಸಿಕ್ಕಿರುವುದರಿಂದ ಮುಂಬೈ ಅಪರಾಧಿ ವಿಭಾಗ ಆತನ ವಿರುದ್ಧ ಮೊಕದ್ದಮೆ ದಾಖಲಿಸಿದೆ ಎಂದು ಹೇಳಿದರು.
ಭರತ್ ಶಾ ಹಣ ಸಹಾಯ ಮಾಡಿ, ಬಿಡುಗಡೆಗೆ ಸಿದ್ಧವಾಗಿರುವ ಇನ್ನೆರಡು ಚಿತ್ರಗಳ ನಿರ್ಮಾಪಕರನ್ನು ವಿಚಾರಣೆ ಮಾಡುವಿರಾ ಎಂಬ ಪ್ರಶ್ನೆಗೆ, 'ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಬಗೆಗೆ ಸೂಕ್ತ ಪುರಾವೆ ಸಿಕ್ಕಿದಲ್ಲಿ ಮಾತ್ರ ನಿರ್ಮಾಪಕರನ್ನು ಬಂಧಿಸಲು ಸಾಧ್ಯ" ಎಂದರು.
ನಾವು ಬೆನ್ನಟ್ಟಿರುವುದು ಭೂಗತ ಜಗತ್ತನ್ನು, ಸಿನಿಮಾ ಲೋಕವನ್ನಲ್ಲ. ಆದರೆ ಬಂದೂಕಿನ ನಳಿಕೆ ರೇಖೆಗೆ ಯಾವ ಯಾವ ತಲೆಗಳು ಎದುರಾಗುತ್ತವೋ ಹೇಳಲಾಗದು. ಭೂಗತ ದೊರೆಗಳ ಸಹವಾಸ ಇಟ್ಟುಕೊಂಡವರಿಗಂತೂ ಇದು ಕೇಡುಗಾಲ. ನಮ್ಮ ಉದ್ದೇಶ ಸಿನಿಮಾ ಜಗತ್ತಿಗೆ ಅಂಟಿರುವ ಭೂಗತ ದೊರೆಗಳ ಹಳೆ ಕೊಳೆ ರೋಗ ತೊಡೆದು ಹಾಕುವುದು. ಸಿನಿಮಾ ಮಂದಿಗೆ ತೊಂದರೆ ಕೊಡುವುದಲ್ಲ ಎಂದು ಸಿಂಗ್ ಖಂಡಾತುಂಡಾಗಿ ಹೇಳಿದರು.


Click it and Unblock the Notifications