ಮುನ್ನುಡಿ, ಶಾಪ, ಮತದಾನ, ಭೂಮಿ,
ಬೆಂಗಳೂರು : ಖ್ಯಾತ ಬಾಲಿವುಡ್ ಹಾಗೂ ಮಾಜಿ ಸಂಸತ್ ಸದಸ್ಯೆ ವೈಜಯಂತಿ ಮಾಲಾ ಬಾಲಿ ಅವರ ಅಧ್ಯಕ್ಷತೆಯ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಗಳ ಆಯ್ಕೆ ಸಮಿತಿ 2000 ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳಿಗಾಗಿ ಬಂದಿರುವ ಚಿತ್ರಗಳ ವೀಕ್ಷಣೆಯಲ್ಲಿ ತೊಡಗಿದೆ.
ಈ ಸಮಿತಿಯಲ್ಲಿ ಕರ್ನಾಟಕದ ಆರ್. ಲಕ್ಷ್ಮಣ್, ಪಾರ್ವತಿ ಇಂದುಶೇಖರ್ ಹಾಗೂ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೋದಂಡರಾಮಯ್ಯ ಅವರೂ ಇದ್ದಾರೆ. ಈ ಮಂಡಳಿ ಮಾರ್ಚ್ ಮೊದಲ ವಾರದಿಂದಲೇ ಪ್ರಶಸ್ತಿಗೆ ಅರ್ಹವಾದ ಚಿತ್ರಗಳನ್ನು ಹೆಕ್ಕಿ ತೆಗೆಯಲು ಚಿತ್ರ ವೀಕ್ಷಣೆಯ ಕಾಯಕದಲ್ಲಿ ನಿರತವಾಗಿದೆ.
ಈ ಬಾರಿಯ ಚಲನಚಿತ್ರ ಪ್ರಶಸ್ತಿಗಾಗಿ ಒಟ್ಟು 129 ಚಿತ್ರಗಳು ಬಂದಿವೆ. ಈ ಪೈಕಿ ಇತ್ತೀಚೆಗಷ್ಟೇ ಅರವಿಂದನ್ ಪ್ರಶಸ್ತಿಗೆ ಪಾತ್ರವಾದ ಪಿ. ಶೇಷಾದ್ರಿ ನಿರ್ದೇಶನದ ಮುನ್ನಡಿ, ಟಿ.ಎನ್. ಸೀತಾರಾಂ ನಿರ್ದೇಶನದ ಹಾಗೂ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಚಿತ್ರ ಮತದಾನ, ಸಂವಹನ ತಜ್ಞ ಅಬ್ದುಲ್ ರೆಹಮಾನ್ ಪಾಶಾ ಅವರ ನಿರ್ದೇಶನದ ಇನ್ನೂ ಬಿಡುಗಡೆಯಾಗದ ಚಿತ್ರ ಚಂದನದ ಚಿಗುರು, ಗಂಧರ್ವ ನಿರ್ದೇಶನದ ಭೂಮಿ, ಬಾಲಿವುಡ್ ತಂತ್ರಜ್ಞ ಹಾಗೂ ನಟ ಬಿ.ಸಿ.ಪಾಟೀಲರ ಸೋದರ ಅಶೋಕ್ ಪಾಟೀಲ್ ನಿರ್ದೇಶನದ ಶಾಪ, ರಘುನಾಥ್ ನಿರ್ದೇಶನದ ಹ್ಯಾಟ್ಸ್ ಆಫ್ ಇಂಡಿಯಾ ಸೇರಿದಂತೆ ಕನ್ನಡದ 10 ಚಿತ್ರಗಳು ಸ್ಪರ್ಧಾ ಕಣದಲ್ಲಿವೆ.
ಈಗಾಗಲೇ ವೀಡಿಯೋಕಾನ್ ಸುಪ್ರಭಾತ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿರುವ ಸುನಿಲ್ ಕುಮಾರ್ ದೇಸಾಯಿ ಅವರ ಸ್ಪರ್ಶ, ಸೀತಾರಾಂ ಕಾರಂತರ ಸರೋವರ, ಪಿ. ರಾಮದಾಸ ನಾಯ್ಡು ಅವರ ಮುಸ್ಸಂಜೆ ಹಾಗೂ ಅಪರಂಜಿ ಮಕ್ಕಳು ಸ್ಪರ್ಧೆಯಲ್ಲಿರುವ ಇತರ ಕನ್ನಡ ಚಿತ್ರಗಳು. ಬಹುತೇಕ ಈ ತಿಂಗಳ ಅಂತ್ಯದಲ್ಲಿ ಪ್ರಶಸ್ತಿ ಪ್ರಕಟವಾಗಲಿದೆ.


Click it and Unblock the Notifications