ಎಕ್ಸ್ಪ್ರೆಸ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ
ನ್ನೈ : ಅಕ್ಟೋಬರ್ 14ರ ಭಾನುವಾರ ಸಂಜೆ ಚೆನ್ನೈ ಜವಾಹರ ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ತಾರಾ ಮೇಳವೇ ನಡೆಯಲಿದೆ. ಸಂಜೆ 5-30ಕ್ಕೆ ಇಲ್ಲಿ 21ನೇ ಹೀರೋಹೋಂಡಾ ಸಿನಿಮಾ ಎಕ್ಸ್ಪ್ರೆಸ್ ಪ್ರಶಸ್ತಿ ಪ್ರದಾನ ಸಮಾರಂಭ.
ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳ ಚಿತ್ರಗಳಿಗೆ ನೀಡಲಾಗುವ ಈ ಪ್ರಶಸ್ತಿಗಳನ್ನು ಪ್ರೇಕ್ಷಕರೇ ಆಯ್ಕೆ ಮಾಡಿದ್ದಾರೆ. ಕನ್ನಡ.ಇಂಡಿಯಾಇನ್ಫೋ.ಕಾಂಗೆ ಸಿಕ್ಕಿರುವ ಖಚಿತ ವರ್ತಮಾನಗಳ ರೀತ್ಯ 1999-2000 ಸಾಲಿನ ಈ ಪ್ರಶಸ್ತಿಗಳ ಕನ್ನಡ ವಿಭಾಗದಲ್ಲಿ ಯಜಮಾನ ಚಿತ್ರದ ಅತ್ಯಮೋಘ ಅಭಿನಯಕ್ಕಾಗಿ ವಿಷ್ಣುವರ್ಧನ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶಾಪ ಚಿತ್ರದ ನಟನೆಗಾಗಿ ಅನುಪ್ರಭಾಕರ್ ಅತ್ಯತ್ತಮ ನಟಿ ಪ್ರಶಸ್ತಿ ಪಡೆದಿದ್ದರೆ, ಸ್ಪರ್ಶ ಚಿತ್ರದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಅದೇ ಚಿತ್ರದ ನಿರ್ಮಾಪಕ ಸಂಜೀವ್ ಅನುಕ್ರಮವಾಗಿ ಅತ್ಯುತ್ತಮ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ತಾರಾಮೇಳ, ಗಾನಮೇಳ ಮತ್ತು ಪ್ರೇಕ್ಷಕರನ್ನು ಪುಳಕಗೊಳಿಸುವ ಚಲನಚಿತ್ರದ ಸರ್ವಾಂಗೀಣ ಸೊಬಗಿನ ಸಮಾರಂಭ ಇದಾಗಲಿದೆ ಎಂದು ಸಿನಿಮಾ ಎಕ್ಸ್ಪ್ರೆಸ್ ಪತ್ರಿಕಾ ಪ್ರಕಟಣೆ ತಿಳಿಸಿದೆ. ಅಂದಹಾಗೆ 21-10-2001ರಂದು ಸನ್ ನೆಟ್ವರ್ಕ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.


Click it and Unblock the Notifications