ಸಿಎಂ ಭೇಟಿ ಮಾಡಿದ ಶಿವರಾಜ್ ಕುಮಾರ್ ನಿಯೋಗ: ಅಕ್ಟೋಬರ್ 1 ರಿಂದ ಚಿತ್ರಮಂದಿರ ಓಪನ್!
ಕಳೆದ ಆರು ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಚಿತ್ರಮಂದಿರಗಳು ಅಕ್ಟೋಬರ್ 1 ರಿಂದ ತೆರೆಯಲಿದೆ ಎಂಬ ವಿಚಾರ ಹೊರಬಿದ್ದಿದೆ. ಮುಂದಿನ ತಿಂಗಳ ಆರಂಭದಿಂದ ಸಿನಿಮಾ ಮಂದಿರ ಕಾರ್ಯನಿರ್ವಹಿಸಲು ಕೇಂದ್ರ ಸಮ್ಮತಿ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಚರ್ಚಿಸಿದ್ದು, ಅಕ್ಟೋಬರ್ 1 ರಿಂದ ದೇಶಾದ್ಯಂತ ಚಿತ್ರಮಂದಿರ ತೆರೆಯಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕನ್ನಡ ಚಲನಚಿತ್ರರಂಗದ ಪರವಾಗಿ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದೆ. ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ನೆರವು ನೀಡಬೇಕು ಹಾಗೂ ಚಿತ್ರಮಂದಿರ ತೆರೆಯಲು ಅನುವು ಮಾಡಿಕೊಡಬೇಕು ಎಂದು ವಿನಂತಿಸಿದೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್ ''ಚಿತ್ರರಂಗದ ಸಮಸ್ಯೆಗೆ ಬಗ್ಗೆ ಸಿಎಂ ಸ್ಪಂದಿಸಿದ್ದಾರೆ. ಲಾಕ್ ಡೌನ್ ನಿಂದ ಸಿನಿ ಕ್ಷೇತ್ರಕ್ಕೆ ಬಹಳ ನಷ್ಟವಾಗಿದೆ. ಸಿನಿಮಾ ಥಿಯೇಟರ್ ಬಗ್ಗೆ ಚರ್ಚೆ ಮಾಡಿದ್ದೇವೆ. ಥಿಯೇಟರ್ ಓಪನ್ ಬಗ್ಗೆ ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
''ಸಿನಿಮಾ ಥಿಯೇಟರ್ ಓಪನ್ ಮಾಡೋದು ದೊಡ್ಡದಲ್ಲ. ಆದರೆ ಎಷ್ಟು ಜನರ ನಿರ್ಮಾಪಕರು ರೆಡಿಯಾಗಿದ್ದಾರೆ ಎಂಬುದು ಗಮನಿಸಬೇಕು. ಈ ಬಗ್ಗೆ ನಾವು ಮೊದಲು ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ. ನಮ್ಮ ಸಮಸ್ಯೆ ಬಗ್ಗೆ ಸಿಎಂ ಬಳಿ ಕೇಳಿಕೊಂಡಿದ್ದೇವೆ. ಆ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ'' ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಶಿವರಾಜ್ ಕುಮಾರ್, ತಾರಾ ಅನುರಾಧ, ಸಾ.ರಾ.ಗೋವಿಂದು, ನಟ ಯಶ್ ಮತ್ತು ದುನಿಯಾ ವಿಜಯ್ ಹಾಗೂ ನಿರ್ಮಾಪಕ, ನಿರ್ದೇಶಕರುಗಳು ಭಾಗಿಯಾಗಿದ್ದರು.


Click it and Unblock the Notifications











