ಸಿನಿಮಾ ಛಾಯಾಗ್ರಾಹಕ ಅರುಣ್ ಕುಮಾರ್ ನಿಧನ
ಸಿನಿಮಾ ಛಾಯಾಗ್ರಾಹಕ ಅರುಣ್ ಕುಮಾರ್ ನಿನ್ನೆ (ನವೆಂಬರ್ 30) ಸಂಜೆ ನಿಧನ ಹೊಂದಿದ್ದಾರೆ. ಕಳೆದ ಕೆಲವು ಸಮಯದಿಂದ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದ 51 ವರ್ಷದ ಅರುಣ್ ಕುಮಾರ್ ನಿನ್ನೆ ಲೋ ಬಿಪಿಯಿಂದ ಇಹಲೋಕ ತ್ಯಜಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇತ್ತೀಚಿಗೆ ರಿಲೀಸ್ ಆದ 'ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಅರುಣ್ ಕುಮಾರ್ ಹೆಚ್ಚು ಸುದ್ದಿ ಮಾಡಿದ್ದರು. ಅಶೋಕ್ ಕಡಬ ನಿರ್ದೇಶನದ ಸಿನಿಮಾ ಇದಾಗಿದೆ. ಸಿನಿಮಾದ ಚಿತ್ರೀಕರಣ ವೇಳೆ ತಲೆನೋವು ಎನ್ನುತ್ತಿದ್ದರು, ಆದರೆ ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಅರುಣ್ ಕುಮಾರ್ ಕಳೆದ ಒಂದು ವಾರದಿಂದ ತುಂಬ ತಲೋನೋವಿನಿಂದ ಬಳಲುತ್ತಿದ್ದರಂತೆ. ಬೆಂಗಳೂರಿನಲ್ಲಿ ಪರಿಕ್ಷೆ ನಡೆಸಿ, ಬಳಿಕ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಗಲೇ ಬ್ರೇನ್ ಟ್ಯೂಮರ್ ಅಂತಿಮ ಹಂತ ತಲುಪಿತ್ತು. ಅಲ್ಲದೆ ಕೊರೊನಾ ಪಾಸಿಟಿವ್ ಸಹ ಬಂದಿತ್ತು ಎಂದು ಹೇಳಲಾಗುತ್ತಿದೆ.

ಬೀರೂರಿನವರಾದ ಅರುಣ್ ಕುಮಾರ್, ಸುಮಾರು 30ಕ್ಕು ಅಧಿಕ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅರುಣ್ ಕುಮಾರ್ ಮೂವರು ಮಕ್ಕಳು ಮತ್ತು ಪತ್ನಿ ಸರಸ್ವತಿಯನ್ನು ಅಗಲಿದ್ದಾರೆ. ಮೊದಲ ಪುತ್ರ ಸೌಂಡ್ ಇಂಜಿನಿಯರಿಂಗ್ ಕೋರ್ಸ್ ಮಾಡುತ್ತಿದ್ದಾರ, ಕಿರಿಯ ಪುತ್ರ ಸ್ಟುಡಿಯೋ ಯೂನಿಟ್ ನೋಡಿಕೊಳ್ಳುತ್ತಿದ್ದಾರೆ. ಇನ್ನು ಮಗಳ ಮದುವೆ ತಯಾರಿಯಲ್ಲಿದ್ದ ಅರುಣ್ ಕುಮಾರ್ ಮಗಳ ಮದುವೆ ನೋಡುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.
ಅರುಣ್ ಕುಮಾರ್ ಕನ್ನಡ ಮಾತ್ರವಲ್ಲದೆ ಹಿಂದಿ, ಮರಾಠಿ ಮತ್ತು ಗುಜರಾತಿ ಚಿತ್ರಗಳಿಗೂ ಕೆಲಸ ಮಾಡಿದ್ದಾರೆ. ಗುಜರಾತಿನಲ್ಲಿ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಛಾಯಾ ಎನ್ನುವ ಸಿನಿಮಾಗೆ ಸದ್ಯ ಅರುಣ್ ಕುಮಾರ್ ಕೆಲಸ ಮಾಡುತ್ತಿದ್ದರು. ಈ ಸಿನಿಮಾ ಇನ್ನು ರಿಲೀಸ್ ಆಗಬೇಕಿದೆ.


Click it and Unblock the Notifications











