ಹೆಂಗಿದ್ದ 'ಗುರು' ಹಿಂಗ್ಯಾಕೆ ಆದರು, ಅದು ಹೇಗೆ ಆನ್ಲೈನ್ ಜೂಜಿನಂತಹ ವ್ಯಸನಕ್ಕೆ 'ಶಾರದಾಸುತ' ಬಲಿಯಾದ್ರು ?

ಸರಸ್ವತಿಯ ವರಪುತ್ರರಾಗಿದ್ದವರು ಗುರು ಪ್ರಸಾದ್. ತಮ್ಮನ್ನು ತಾವು ಶಾರದಾ ಸುತ ಎಂದು ಕರೆದುಕೊಂಡು ಚಿತ್ರಮಂದಿರದ ಮುಂದೆ ತಮ್ಮ ಕಟೌಟ್ ನಿಲ್ಲಿಸಿಕೊಂಡಿದ್ದವರು. ನಾವು ಕ್ಲಾಪ್ ಹೊಡಿಯೋದಲ್ಲ, ಜನ ಕ್ಲಾಪ್ ಹೊಡಿಬೇಕು ಅನ್ನೋ ಕಾಮನ್ ಸೆನ್ಸ್ ನನಗಿದೆ ಎಂದು ಹೇಳುತ್ತಿದ್ದ ಗುರುಪ್ರಸಾದ್, ಜನ ಹೊಡೆದ ಚಪ್ಪಾಳೆಯಿಂದ ಮೈ ಮರೆತರು. ಅಹಂಕಾರವನ್ನು ನೆತ್ತಿಗೇರಿಸಿಕೊಂಡರು. ಯಾರೇ ಕೂಗಾಡಲಿ ಬಾರೇ ಅಲ್ಲಾಡಲೀ ಎಂಬ ವ್ಯಕ್ತಿತ್ವವನ್ನು ರೂಢಿಸಿಕೊಂಡರು. ಕಥೆ ಹೇಳ್ತಾ ಹೇಳ್ತಾ ಆ ಕಥೇಲಿರೋ ''ಉಪಕಥೆ''ಗಳಿಂದಾಗಿ ತಾವೇ ಹೆಣೆದ ಕಥೆಯನ್ನೇ ಮರೆತು ವ್ಯವಸ್ಥಿತವಾಗಿದ್ದ ಬದುಕಿಗೆ ತಮ್ಮ ಕೈಯಾರೆ ಬೆಂಕಿ ಹಚ್ಚಿದರು. ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾದರು.

ಇನ್ನೂ ಗುರು ಪ್ರಸಾದ್ ಅಗಲಿದ ನಂತರ ಅನೇಕರು ನಾನಾ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲಿಯೂ ಜಗ್ಗೇಶ್, ಗುರು ಪ್ರಸಾದ್ ಅವರ ಕುರಿತು ಬಾಯಿಗೆ ಬಂದಿದ್ದನ್ನೆಲ್ಲ ಮಾತನಾಡುತ್ತಿದ್ದಾರೆ. ಈ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ನಡುವೆ ಗುರು ಪ್ರಸಾದ್ ಜೊತೆ ಡೈರೆಕ್ಷರ್ ಸ್ಪೆಷಲ್ ಚಿತ್ರಕ್ಕೆ ಕೆಲಸ ಮಾಡಿದ್ದ ಕನ್ನಡ ಚಿತ್ರರಂಗದ ಪ್ರತಿಭಾವಂತ ಛಾಯಾಗ್ರಾಹಕ ಮಹೇನ್ ಸಿಂಹ, ಗುರು ಕುರಿತು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ಆ ಕಾಲದ ಗುರು ಮತ್ತು ಈ ಕಾಲದ ಗುರುಗೆ ಇದ್ದ ವ್ಯತ್ಯಾಸವನ್ನು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾದ ಲೇಖನವನ್ನು ಮಹೇನ್ ಸಿಂಹ ಬರೆದುಕೊಂಡಿದ್ದಾರೆ. ಗುರುಪ್ರಸಾದ್ ಬಗ್ಗೆ ಮಹೇನ್ ಸಿಂಹ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

Cinematographer Mahen Simha recalled his experience with the late director Guruprasad in a post

ಮಹೇನ್ ಸಿಂಹ ಕಂಡಂತೆ ಗುರು ಪ್ರಸಾದ್ ...!

ಆತ್ಮಹತ್ಯೆ ದೇಹಕ್ಕಷ್ಟೇ ಸಂಬಂಧಿಸಿದ್ದಲ್ಲ. ಆ ಒಂದು ಯೋಚನೆ ದೇಹದ ತನಕ ಬರೋ ಮುಂಚೆಯೇ..ಬೇರೆ ಏನೇನನ್ನೋ ಹತ್ಯ ಮಾಡಿ..ಕೊನೆಗೆ ದೇಹವನ್ನೂ ಮುಗಿಸಿ ಹೋಗ್ತದೆ. ಕೈಗೆ ಹಗ್ಗ ಬರೋ ಬಹಳ ಮುಂಚೆಯೇ...ನಾವು ನಂಬಿರುವ ವಿಷಯಗಳ ಹತ್ಯೆ ಆಗಿರುತ್ತೆ..ನಮ್ಮನ್ನು ನಂಬಿರುವ ಜನಗಳ ನಂಬಿಕೆಗಳ ಹತ್ಯೆ ಆಗಿರುತ್ತೆ. ಹತಾಷೆಯಲ್ಲಿ ನಮ್ಮ ಮುಂದಿನ ಯೋಜನೆಗಳ ಹತ್ಯೆ ಆಗಿರುತ್ತೆ. ಇದೆಲ್ಲಾಕ್ಕೂ ನಾವೇ ಮೂಲ ಕಾರಣ ಅಂತಲೂ ಇಲ್ಲ...ಬಹಳಷ್ಟು ಜನರ ವಿಷಯದಲ್ಲಿ ಇದು ಹೊರಗಿನಿಂದ ಶುರುವಾಗಿರುತ್ತದೆ. ಆದರೆ ಗುರು ವಿಷಯದಲ್ಲಿ ಅದು ಶುರುವಾದದ್ದು ಆತನೊಳಗಿಂದಲೇ. ಆತ ಆತನ ಸಿನೆಮಾಗಳ ಆತ್ಮದ ಹತ್ಯೆಯನ್ನು ಅದ್ಯಾವತ್ತೋ ಮಾಡಿ ಮುಗಿಸಿದ್ದ.

ನನಗನ್ನಿಸೋ ಹಾಗೆ..ಈ ಆತ್ಮ ಹತ್ಯೆಯೂ ಆತನ ಅಹಂನ ದ್ಯೋತಕವೇ ಏನೋ.. ಪ್ರಪಂಚಕ್ಕೆ "ನಾನು ಹಾಗೇ ನಾನು ಹೀಗೆ ಅನ್ನೋ ದೊಡ್ಡ ದೊಡ್ಡ ಪ್ರವಚನ ಮಾಡಿ.. ತನ್ನ ಕೃತಿಯಿಂದ ಅದನ್ನ ಸಮರ್ಥಿಸಿಕೊಳ್ಳಲಾಗದೇ ಹೋದಾಗ... ಆ ಕೋಪದಲ್ಲೇ ಆಗಿರೋ ಅಚಾತುರ್ಯ ಇದು ಅನ್ನಿಸುತ್ತೆ ನನಗೆ. ಇತ್ತೀಚಿನ ಆತನ ಕೋಪ ನೋಡಿದಾಗ ಹಾಗೇ ಅನ್ನಿಸುತ್ತೆ. ಪ್ರಪಂಚ ಹೀಗೇ ಇರುತ್ತೆ ...ಇಲ್ಲಿಯ ಜನರ ಬುದ್ಧಿ ಮಟ್ಟ ಇಷ್ಟೇ..ಇವರಿಗೆ ನಾನು ಏನು ಕೊಡ್ತೀನೋ ಅದೇ ಎಂಟರ್ಟೈನ್ಮೆಂಟ್ ಅನ್ನೋ ಯೋಚನೆ ಗುರು ಮನಸಲ್ಲಿ ಆಳವಾಗಿ ಬೇರೂರಿತ್ತು. ಇದು ಶುರುವಾಗಿದ್ದು ಎದ್ದೇಳು ಮಂಜುನಾಥದ ನಂತರ. ಪತ್ರಿಕೆ ಗಳು ಗುರುವಿನ ಹೆಸರಿನ ಜೊತೆಗೆ...ಪ್ರತಿಭಾವಂತ..ಬುದ್ಧಿವಂತ ಮುಂತಾದವುಗಳನ್ನ ಧಾರಾಳವಾಗಿ ಸೇರಿಸಿ ಬರೆಯುತಿದ್ದ ಕಾಲ. ಅದು ಆತನಿಗೆ ಯಾವ ಮಟ್ಟಕ್ಕೆ ಸರಿ ಅನ್ನಿಸಿತ್ತು ಅಂದರೆ ಬೇರೆ ಯಾರೂ ಏನೂ ಇಲ್ಲಾ ಅನ್ನೋ ಮಟ್ಟಕ್ಕೆ.

ಆತ ಹೀಯಾಳಿಸದ ವೆಕ್ತಿಯೇ ಇಲ್ಲ..ಚಿತ್ರಗಳೂ ಇಲ್ಲ.. ಕನ್ನಡದ ದೊಡ್ಡ ದೊಡ್ಡ ನಿರ್ದೇಶಕರನ್ನ ಆಡಿಕೊಂಡು ನಗೋದನ್ನ ಕಿವಿಯಾರೇ ಕೇಳಿದ್ದೇನೆ. ಇಲ್ಲಿಯವರು ಬಿಡಿ.. ನೀವು ಅಕಿರಾ ಕುರೋಸೋವ ಅಂದರೆ ಅವನ್ಯಾವೋನು..ನನ್ನ ಮುಂದೆ ಅನ್ನುವ ವ್ಯಕ್ತಿ ಆತ. ಕ್ರಿಯಾತ್ಮಕ ಅಹಂ ಒಳ್ಳೇದೇ. ಮೊದಲು ಹೀಗೆಲ್ಲಾ ಆತ ಎಲ್ಲರಿಗೂ ಚಾಲೆಂಜ್ ಹಾಕೋವಾಗ.. ನನಗೂ ಅನ್ನಿಸೋದು..ಈತನಿಂದ ಏನೋ ಹೊಸದು ಬರಬಹುದು ಅಂತ. ಆ ನಂಬಿಕೆಗೆ ಆಧಾರ..."ಮಠ" "ಎದ್ದೇಳು ಮಂಜುನಾಥ" ಅನ್ನೋ ಚಿತ್ರಗಳು. ಆ ಕಾಲಕ್ಕೆ ..ಮತ್ತು ಈ ಮಣ್ಣಿಗೆ ಸರಿಯಾದ ಕೃತಿಯಾಗಿದ್ದ ಅವು..ಆತನ ಮೇಲೆ ನಮ್ಮ ನಂಬಿಕೆ ಹೆಚ್ಚಿಸಿತ್ತು. ಆದರೆ ಆಗಿದ್ದು ಬೇರೆ. ಮುಂದಿನ ಚಿತ್ರಗಳಲ್ಲಿ ಅದ್ಯಾವುದೂ ಕಾಣಲಿಲ್ಲ. ಮಠ ಈತನೇ ನಿರ್ದೇಶನ ಮಾಡಿದ್ದಾ? ಅನ್ನೋ ಮಟ್ಟಕ್ಕೆ.

ಇವತ್ತು ಜಗ್ಗೇಶ್ ಮಾತಾಡಿದ್ದರ ಬಗ್ಗೆ ಹಲವರು ಅಸಮಾಧಾನ ವ್ಯಕ್ತ ಪಡಿಸ್ತಾ ಇದ್ದಾರೆ. ಅದು ಅವರವರ ಭಾವಕ್ಕೆ. ಅದರ ಬಗ್ಗೆ ನಾನೇನೊ ಹೇಳಲ್ಲ. ಆದರೆ ಒಂದು ಗಮನಿಸಬೇಕಾದ್ದು ಏನೆಂದರೆ... ಸಾರ್ವಜನಿಕ ಜೀವನದಲ್ಲಿ ಇದ್ದವರು.. ಬಹಳಷ್ಟು ಜನರಿಗೆ ಆದರ್ಶವಾಗಿರ್ತಾರೆ. ಹಾಗೇ ಒಂದು ಮಗ್ಗಲಲ್ಲಿ ಗುರು ಆದರ್ಶವಾಗೇ ಇದ್ದ. ಆತನ ಇನ್ನೊಂದು ಮಗ್ಗುಲು ಎಲ್ಲರಿಗೂ ಗೊತ್ತಿರಲಿಲ್ಲ. ಆತನೊಟ್ಟಿಗೆ ಒಡನಾಟದಲ್ಲಿದ್ದವರು.. ಅದನ್ನು ಹೇಳಿದಾಗಲೇ... ಆತ ನಮಗೆ ಪೂರ್ತಿ ದಕ್ಕೋದು. ಇನ್ನು ಇದನ್ನು ಈಗಲೇ ಹೇಳಬೇಕಾ...ಆಮೇಲೆ ಹೇಳಬೇಕಾ ..ಈಗಲ್ಲದೇ ಆಮೇಲೆ ಹೇಳಿದ್ರೆ ಅದು ಸರಿಯಾ ಗೊತ್ತಿಲ್ಲ.

ಹಾಲಿವುಡ್ ನಲ್ಲೂ ಡ್ರಗ್ ಸೇವನೆಯಿಂದ ಸತ್ತ ಎಷ್ಟೋ ಸ್ಟಾರ್ ಗಳಿದ್ದಾರೆ. ಅಂತಹವರು ಅಂತಹ ಅಂತ್ಯ ಕಂಡಾಗ...ಆತನ ಒಳ್ಳೇ ಗುಣಗಳನ್ನೇ ಹಾಡಿ ಹೊಗಳಿ ಸುಮ್ಮನಾದರೆ..ಅದು ಮುಂದಿನ ಜನಾಂಗಕ್ಕೆ ಮೋಸ ಮಾಡಿದಂತೆ. ಆ ಸಮಯಕ್ಕೆ ಆತನ ವ್ಯಸನಗಳ ಬಗ್ಗೆ..ಆತನನ್ನು ಕೊಂಡುಹೋದ ವಿಷಯದ ಬಗ್ಗೆ ಒಂದು ಆರೋಗ್ಯ ಪೂರ್ಣ ಚರ್ಚೆ ಆದರೆ...ವ್ಯಸನಗಳು ಮನುಷ್ಯನನ್ನು ಹೀಗೂ ಮುಗಿಸುತ್ತದೆ ಅನ್ನೋದು ಮುಂದಿನವರಿಗೂ ಗೊತ್ತಾಗುತ್ತದೆ..ಮತ್ತು ಆಗಲೇ ಬೇಕು.

ಇನ್ನು ಪ್ರಪಂಚದಲ್ಲಿ ಒಳ್ಳೇದು ಕೆಟ್ಟದ್ದು ಇದ್ದಿದ್ದೇ..ಅದೇ ಗುರುವಿನಲ್ಲೂ ಇದಿದ್ದು. ಅಲ್ಲಿಂದ ಒಳ್ಳೇದ್ ತೆಗೋ ಬೇಕೋ ಕೆಟ್ಟದ್ದು ತೆಗೋ ಬೇಕೋ ಅನ್ನೋದು ಅವರವರಿಗೆ ಬಿಟ್ಟಿದ್ದು.ಅಷ್ಟು ಬುದ್ದಿವಂತಿಕೆ ಎಲ್ಲರಲ್ಲೂ ಇದೆ. ಹಾಗಾಗಿ ಕೆಟ್ಟದ್ದು ಮಾತಾಡಲೇ ಬಾರದು ಅನ್ನೋದು ಬಾಲಿಶ. ಯಾರಾದರೂ ಅದನ್ನು ಹೇಳಲೇ ಬೇಕು. ಹೇಳಿದ್ದು ಸತ್ಯವಾಗಿದ್ದರೆ...ಗುರು ಬಗ್ಗೆ ಹೇಳಿದವನು ಏನು ಸಾಚಾನ? ಅಂತ ಆತನ ಹಿಂದೆ ಬೀಳೋ ಬದಲು..ಈಗಿನ ವಿಷಯದಲ್ಲಿ ಸತ್ಯ ಎಷ್ಟಿದೆ ನೋಡಿ.

ಇತ್ತೀಚೆಗೆ ಸುಶಾಂತ್ ಸಿಂಗ್ ರಾಜ್ ಪುತ್ ಆತ್ಮ ಹತ್ಯೆ ಮಾಡಿಕೊಂಡಾಗ ..ಹೇಳಬೇಕೂ ಅಂದರೂ ಕೆಟ್ಟದು ಇರಲಿಲ್ಲ. ಇಲ್ಲದೇ ಇದ್ದದ್ದನ್ನು ...ಮಡಿದ ನಂತರ ಯಾರೂ ಹೇಳಲ್ಲ. ಇದ್ದರಷ್ಟೇ ಹೀಗಾಗೋದು. ಇನ್ನು ಕನ್ನಡ ಚಿತ್ರರಂಗ ಗುರುವಿನಂತಹ ಪ್ರತಿಭೆ ಯನ್ನು ಉಳಿಸಿಕೊಳ್ಳಬೇಕು ಅನ್ನೊರಿಗೆ ನಾನು ಹೇಳೋದು ಒಂದೇ ಮಾತು. ಕನ್ನಡ ಚಿತ್ರರಂಗ ಮಿಕ್ಕೆಲ್ಲರಿಗಿಂತ ಹೆಚ್ಚು ಅವಕಾಶ ಈತನಿಗೆ ಮತ್ತೆ ಮತ್ತೆ ಕೊಟ್ಟಿದೆ. ಆತ ಒಂದು ಚಿತ್ರ ಮಾಡೋ ಮನಸ್ಥಿತಿಯಲ್ಲೇ ಇಲ್ಲಾ ಅಂದರೂ ಚಿತ್ರ ಮಾಡಿಸಿದೆ. ಇದು ಇಲ್ಲಿ ಎಲ್ಲರಿಗೂ ಗೊತ್ತಿರೋ ಸತ್ಯ.

ಆತನ ಕನ್ನಡತನಕ್ಕೆ ಗೌರವ ಕೊಟ್ಟು ದೊಡ್ಡ ಮನೆ ಆತನಿಗೆ ಅವಕಾಶ ಕೊಟ್ಟಿತ್ತು. ಅಪ್ಪುವಿನಿಂದ ಹಿಡಿದು ರಾಘಣ್ಣನ ವರೆಗೆ ಆತನಿಗೆ ಮರ್ಯಾದಿ ಕೊಟ್ಟು.. ಕೆಲಸ ಮಾಡಿಸಿತ್ತು..ಸಂಭಾವನೆ ಕೊಟ್ಟಿತ್ತು. ಆ ನಂತರ ಅವರ ಚಿತ್ರಗಳಿಗೆ ಬರಿಯುವ ಅವಕಾಶವೂ ಸಿಕ್ಕಿತ್ತು. ಆದರೆ ಉಳಿಸಿಕೊಳ್ಳಲಿಲ್ಲ...ಆತನ ನಾಲಿಗೆ. ಆತನ ಯಾವುದೇ ಚಿತ್ರ ತೆಗೆದು ಕೊಳ್ಳೀ...ನಿರ್ಮಾಪರೊಟ್ಟಿಗೆ ಜಗಳ ಇದ್ದದ್ದೆ. ಒಬ್ಬರಾಗಿದ್ದರೆ ನಿರ್ಮಾಪಕರದ್ದೇ ತಪ್ಪಿರಬೇಕು ಅಂತ ಯೋಚಿಸಬಹುದು.. ಇದು ಹಾಗಲ್ಲ. ಸನತ್ ಅನ್ನೋ ಸಜ್ಜನ್ನೊಬ್ಬ ಎದ್ದೇಳು ಮಂಜುನಾಥ ಸಮಯದಲ್ಲಿ ಪಟ್ಟ ಪಾಡು ಯಾರಿಗೂ ಬೇಡ. ಹಳೇ ವೀಡಿಯೋ ಗಳನ್ನ ನೋಡಿದ್ರೆ ಗೊತ್ತಾಗುತ್ತೆ.

ಇಷ್ಟೆಲ್ಲಾ ಆದರೂ ಧನಂಜಯ ಬಡವ ರಾಸ್ಕಲ್ ನಲ್ಲಿ ಕರೆದು ನಟಿಸಲಿಕ್ಕೆ ಅವಕಾಶ ಕೊಟ್ಟು ಸಂಭಾವನೆ ಕೊಟ್ತು ಕಳುಹಿಸಿದ್ದರು. ಮೊನ್ನೆ ಕೂಡ ಉಪೇಂದ್ರರವರ ಸಿನೇಮಾಕ್ಕೆ ..ಕೆ ಪಿ ಶ್ರೀಕಾಂತ್ [ಮಠ ನಿರ್ಮಾಪಕರು] ಕರೆದು ನಟಿಸುವ ಅವಕಾಶ ಕೊಟ್ಟಿದ್ದರು. ತನಗೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮುಗಿಸಿ..ಸಮಯಕ್ಕೆ ಸರಿಯಾಗಿ ಕೊಡುತ್ತೇನೆ ಅನ್ನೋ ಸಣ್ಣ ಭರವಸೆ ಆತ ನೀಡಿದ್ದರೂ..ಆತನೊಟ್ಟಿಗೆ ಕೆಲಸ ಮಾಡಲು ಈಗಲೂ ಜನ ರೆಡಿ ಇದ್ದರು.

ಆದರೆ ಗುರು ಬೇರೆಯೇ ಪ್ರಪಂಚದಲ್ಲಿದ್ದ. ನಾನು ಮೊದಲು ಭೇಟಿ ಮಾಡಿದ್ದ ಗುರು.. ಕ್ರಾಂತಿ ಕಾರಿ. ಸಿನೆಮಾ ಅಂದರೆ ಆಯ್ತು ಬೇರೇನೊ ಬೇಕಿಲ್ಲ.. ಕೆಟ್ಟ ಸಿನೇಮಾಗಳಿಗೆ ಕೆಂಡ ಕಾರಿಕೊಂಡು ಓಡಾಡುತಿದ್ದ ಬೆಂಕಿ ಚೆಂಡು. ಆಮೇಲೆ ಅದೇ ಗುರುವನ್ನು ಬಿಗ್ ಬಾಸ್ ನಲ್ಲಿ ನೋಡಿದಾಗ..ಎಂಟರ್ಟೈನ್ ಮೆಂಟ್ ಅನ್ನೋ ಕಮರ್ಷಿಯಲ್ ಸೆಟ್ಅಪ್ [ಮೊದ ಮೊದಲು ಗುರು ದ್ವೇಷಿಸುತಿದ್ದ ವಿಷಯ ] ನಲ್ಲಿ ಕಂಡಾಗ.. ಈತ ಇದೇ ವ್ಯವೆಸ್ಥೆಗೆ ಹೇಗೆ ಬಲಿಯಾದ..ಈತನ ಯೋಚನೆ ಎಲ್ಲಿ ಹೋಯ್ತು? ಅನ್ನಿಸಿ ಬೇಸರ ವಾಗಿದ್ದು ನಿಜ.

ಆನಂತರ ...ದೊಡ್ಡ ದೊಡ್ಡ ಸಿನೇಮಾಗಳ ಗುರು..ಸೀಮಿತ ವಾಗಿದ್ದು..ತನ್ನ ಒನ್ ಲೈನ್ ಚಟಾಕಿಗಳ ಯೂಟ್ಯುಬ್ ಇಂಟರ್ವ್ಯೂವ್‌ಗಳಿಗೆ. ಆತನನ್ನು ಒಬ್ಬ ಯೌಟ್ಯುಬರ್..ತನಗೆ ಬೇಕಾದ ಹಾಗೆ ದುಡಿಸಿಕೊಳ್ಳುತಿದ್ದದ್ದನ್ನು ನೋಡಿ...ಇದು ಅದೇ ಗುರುನಾ? ಸಿನಿಮಾ ಮಾಡೋದು ಬಿಟ್ಟು.. ಇದ್ಯಾವ ಹಪ ಹಪಿ ಅನ್ನಿಸಿ ಬೇಸರ ವಾಗಿತ್ತು.ಆತನಿಗೆ ಬುದ್ಧಿ ಹೇಳದ ಜನರಿಲ್ಲ. ಆದರೆ ಬುದ್ದಿ ಹೇಳಿದ ಮರುದಿನ ಅವರು ಆತನ ವಲಯದಲ್ಲಿ ಇಲ್ಲ. ಹೀಗಾಗುತಿತ್ತು. ಆತನ ಯೋಚನಾ ಲಹರಿಯಲ್ಲಿ ಆದ ಬದಲಾವಣೆ ಕಂಡು.. ನಾನು "ಎರಡನೇ ಸಲ" ಸಿನೇಮಾದಿಂದ ಹೊರಗೆ ಬಂದೆ. ನಾನು ಆಗ ಗುರು ಹೀಗೆ ಬದಲಾಗಿದ್ದಾರೆ ಅಂದರೆ ಅವರ ಆತ್ಮೀಯ ಬಳಗದಲ್ಲಿ ಯಾರೂ ನಂಬುತ್ತಿರಲೇ ಇಲ್ಲ. ಅಂತಹ ಒಂದು ಇಂಪ್ರೆಷನ್ ಗುರು ಅವರೆಲ್ಲರಲ್ಲಿ ಬಿಟ್ಟಿದ್ದ.

ಇನ್ನು ವ್ಯೆಯುಕ್ತಿಕ ವಿಚಾರಗಳ ಬಗ್ಗೆ ನಾವಲ್ಲ ಯಾರೂ ಮಾತಾಡೋದು ತಪ್ಪು. ಅದು ಅವರ ಪರ್ಸನಲ್. ಅಲ್ಲಿ ತಪ್ಪೇನು ಒಪ್ಪೇನು ಆತ ಮತ್ತು ಆತನ ಜೊತೆಗೆ ಅನುಭವಿಸಿದವರಿಗೇ ಗೊತ್ತು. ನಾವು ಅತನ ಕೆಲಸ ಮತ್ತು ಆತನ ವ್ಯಸನಗಳ ಬಗ್ಗೆ ಮಾತಾಡಬಹುದು. ಅಷ್ಟೇ. ಮಾತಾಡೋದಾದರೂ ಏಕೆ? ಇವತ್ತು ನಾನೇಕೆ ಬರೆಯುತ್ತಾ ಇದ್ದೇನೆ ಅಂದರೆ...ಅದೇ ಸಂಕಟ. ಯಾರಾರೋ ..ಎಂತೆಂತಹುದೋ ಸಿನೇಮಾ ಮಾಡಿ...ತಕ್ಕ ಮಟ್ಟಕ್ಕೆ ಹಣ ಹೆಸರು ಮಾಡಿ..ಚೆನ್ನಾಗೇ ಇರುವಾಗ..ಇಷ್ಟೆಲ್ಲಾ ಟ್ಯಾಲೆಂಟ್ ಇದ್ದು..ವರ್ಷಕ್ಕೊಂದು ಸಿನಿಮಾ ಮಾಡಿದ್ದರೂ ಒಳ್ಳೇ ಹೆಸರೂ ಮಾಡಿ ಅನುಕೂಲವಾಗೇ ಇರಬಹುದಿತ್ತಲ್ಲಾ ಅನ್ನೋ ಸಂಕಟ.

ಪ್ರಪಂಚವನ್ನು ಅರಿತು ಕೊಂಡಿದ್ದ ವ್ಯಕ್ತಿ ..ಅದು ಹೇಗೆ ಆನ್ಲೈನ್ ಜೂಜಿನಂತಹ ವ್ಯಸನಕ್ಕೆ ಬಲಿಯಾದ್ರು? ಮದ್ಯಕ್ಕೆ ಮಿತಿ ಮೀರಿ ಸಮರ್ಪಿಸಿಕೊಂಡರು..ಅನ್ನೋದು ಈಗಲೂ ನಿಗೂಢ. ಗುರುವಿನ ಪ್ರತಿಭೆ ಒಪ್ಪಿಕೊಂಡಿದ್ದವರು ಈ ವ್ಯಸನ ನೋಡಿ ಬೆಚ್ಚಿ ಬೇಳಲೇ ಬೇಕು. ಅದೊಂದು ಪಾಠವೂ ಆಗ ಬೇಕು.ಇದು ಗುರು ವಿಚಾರದಲ್ಲೇ ಅಲ್ಲ.. ನಮ್ಮ ಕನ್ನಡದ ಜನ ಉದಾರ ಹೃದಯಿಗಳು. ನಮ್ಮ ಯೋಚನಾ ಪ್ರಪಂಚವನ್ನ ಆಳಿ ಹೋದ ಇಬ್ಬರು ಮಹಾನ್ ಪತ್ರಕರ್ತ ಪ್ರತಿಭೆಗಳು....ತೀರಿ ಹೋದಾಗ ಅವರ ಬಗ್ಗೆ ಒಳ್ಳೇಯದನ್ನೇ ನೆನಪಿಸಿಕೊಂಡು ಮಾತಾಡಿದರು. ಎಲ್ಲರಿಗೂ ಬುದ್ಧಿ ಹೇಳುತಿದ್ದ ಅವರಿಗೂ ಮಾನವ ಸಹಜ ದೌರ್ಬಲ್ಯಗಳು ವ್ಯಸನಗಳು ಇದ್ದವು ... ಅವರದೂ ಕಪ್ಪು ಚಾಪ್ಟರ್ ಗಳಿದ್ದವು ಅಂದರೂ..ನಮ್ಮ ಜನ ತಲೆ ಕೆಡಿಸಿಕೊಳ್ಳಲ್ಲೇ ಇಲ್ಲ. ಇದು ನಮ್ಮವರ ದೊಡ್ಡ ಗುಣ ಹೌದು. ಆದರೆ ಎಲ್ಲ ಆಯಾಮಗಳನ್ನು ನೋಡಿ..ಅರಗಿಸಿಕೊಳ್ಳುವ ಧೈರ್ಯ ನಮಗೂ ಬರಬೇಕು.

ನನಗೆ ಆಶ್ಚರ್ಯ ಏನಂದರೆ...ಇಷ್ಟೆಲ್ಲಾ ಗುರುವಿನ ಬಗ್ಗೆ ಬರೆಯೋ ಮಂದಿಯಲ್ಲಿ ಅರ್ಧದಷ್ಟು ಜನ ವಿಕ್ಟೋರಿಯಾ ಆಸ್ಪತ್ರೆಗೋ. ಅಥವ ವಿಲ್ಸನ್ ಗಾರ್ಡನ್ ಶವ ಸಂಸ್ಕಾರದ ಜಾಗಕ್ಕೋ ಬಂದಿದ್ದರೆ...ಲಾಠಿ ಚಾರ್ಜ್ ಆಗ್ತಿತ್ತೇನೋ..ಅಲ್ಲಿ ಅಂತಹ ಒಬ್ಬ ಅಭಿಮಾನಿ ಕಾಣಲಿಲ್ಲ ನನಗೆ. ಅವರಿಗೆ..ಗುರು ಒಂದು ಚುಟುಕು ಜೋಕು. ಫೊನ್ ನಲ್ಲಿ ನೋಡಿ ನಕ್ಕಿದ್ದ ಹಾಗೇ ಟೀವಿಯಲ್ಲಿ ದೇಹ ಕಾಣೋದು ಎಂಟರ್ಟೈನ್ಮೆಂಟ್ ನ ಅಂಗ ಅಷ್ಟೇ..ಇದು ಕಟು ಸತ್ಯ.ಅಲ್ಲಿದ್ದದ್ದು...ಆತನ ಹತ್ತಿರದ ಕುಟುಂಬ..ಮತ್ತು ಆತನ ಒಡನಾಡಿಗಳಾಗಿದ್ದ ನಾವು ಕೆಲವೇ ಮಂದಿ. ಆ ಶವಾಗಾರದ ಒಂದು ಸಣ್ಣ ಕೊಠಡಿಯಲ್ಲಿ ಎಲ್ಲರೂ ಸೇರಿದ್ರೂ ಅದು ತುಂಬಿರಲಿಲ್ಲ..ಇವರ ಅಭಿಮಾನ ಅಲ್ಲಿಯವರೆಗೂ ಬರಲಿಲ್ಲ..

ಯಾವ ದುನಿಯಾ ವಿಜಿಯನ್ನು ತನ್ನ ಎದ್ದೇಳು ಮಂಜುನಾಥ ಸಿನೇಮಾದ ಡೈಲಾಗ್ ನಲ್ಲಿ ಆಡಿಕೊಂಡು ಜನರನ್ನ ನಗಿಸಿದ್ದನೋ...ಅದೇ ದುನಿಯಾ ವಿಜಿ.. ಓಡೋಡಿ ಬಂದು ಎಲ್ಲವನ್ನೂ ಸಾಂಗವಾಗಿ ನಡೆಯಿಸಿದರು. ಅವರ ಜೊತೆಗೆ ಧನಂಜಯ...ಸತೀಶ್ ಇನ್ನೊಂದ್ ನಾಲ್ಕು ಜನ್ ಇಷ್ಟೇ ಇದ್ದದ್ದು.ಹೇಳ್ತಾ ಹೋದ್ರೆ...ಇನ್ನೂ ಎಷ್ಟೋ ಇದೆ. ಆತನನ್ನು ನಂಬಿ ಅವನೊಟ್ಟಿಗೆ ಕೆಲ್ಸ ಮಾಡಬೇಕು ಅನ್ನೋ ಖುಷಿಯಲ್ಲಿ ಆತನ ಟಾಯ್ಲೆಟ್ ಕ್ಲೀನ್ ಮಾಡಿಕೊಂಡು..ಬೇಕಾದಾಗ ಕಾಲು ಒತ್ತಿ ಸಿಗರೇಟ್ ಕೊಟ್ಟು..ನೋಡಿಕೊಂಡ ಕೆಲವು ಅಮಾಯಕ ಶಿಷ್ಯರನ್ನಾದರೂ ಆತ ಉಳಿಸಿಕೊಂಡಿದ್ದರೆ ....ತುಂಬಾ ಚೆನ್ನಾಗಿತ್ತು..ಅವರಲ್ಲಿ ಹಲವರಿಗೆ ಬೇಸರ ಮಾಡಿಯೇ ಹೋಗಿದ್ದು ಗುರು.

ನೆನಪಿದೆ... ಎದ್ದೇಳು ಮಂಜುನಾಥ ನೋಡಿ.."ಕೆಂಡಸಂಪಿಗೆ" ಅನ್ನೋ ಒಂದು ಪತ್ರಿಕೆಗೆಬರೆದಿದ್ದೆ. ಆತನ ಪ್ರತಿಭೆಯನ್ನು ಹೊಗಳಿದ್ದೆ. ಆದರೆ ಅದೇ ನಾನು ಇವತ್ತು ಇದನ್ನೂ ಬರೆಯೋ ಪರಿಸ್ಥಿತಿ ಬಂತು. ಬೇಸರದಲ್ಲೇ ಹೇಳುತಿದ್ದೇನೆ. [ಅಂದ ಹಾಗೆ. ನಾನು.. ಡೈರೆಕ್ಟರ್ ಸ್ಪೆಷಲ್ ಸಿನೇಮಾದ ಕ್ಯಾಮರ ಕೆಲಸ ಮಾಡಿದವನು. ಆ ಸಮಯದಲ್ಲಿ ಒಂದು ಐದಾರು ವರ್ಷ ಅತನೊಟ್ಟಿಗೆ ಒಡನಾಟ.ಸಿನೇಮಾರಂಗದಿಂದ ಮಾತ್ರವಲ್ಲ..ಆತನ ಕನಕಪುರದ ಸ್ನೇಹಿತ ವಲಯ ನನ್ನದೂ ಸ್ನೇಹಿತ ವಲಯ. ಹಾಗಾಗಿ..ಆತನ ಏಳು ಬೀಳನ್ನ ತುಂಬಾ ಹತ್ತಿರದಿಂದ ಕಂಡವರಲ್ಲಿ ನಾನೂ ಒಬ್ಬ. ಆತನ ಉತ್ತಮ ಕೃತಿಗಳ ಅಭಿಮಾನಿ ಕೂಡ....ಪೆನ್ ಹಿಡಿದು ನಿಂತ ಕಟೌಟಿಗೆ ತೆಗೆದ ಚಿತ್ರ ನನ್ನದೇ ಸ್ಟುಡಿಯೋದಲ್ಲಿ ತೆಗೆದದ್ದು. ]

More from Filmibeat

Read more about: guruprasad death sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X