'ಕೆಜಿಎಫ್' ರಿಲೀಸ್ ಗೆ ತಡೆ: ಸಿವಿಲ್ ಕೋರ್ಟ್ ಆದೇಶ
ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕೆ.ಜಿ.ಎಫ್ ಚಿತ್ರದ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಬೆಂಗಳೂರಿನ 10ನೇ ಸಿಟಿ ಸಿವಿಎಲ್ ಕೋರ್ಟಿನಿಂದ ಕೆಜಿಎಫ್ ಚಿತ್ರದ ಬಿಡುಗಡೆಗೆ ಗುರುವಾರ(ಡಿಸೆಂಬರ್ 19) ಮಧ್ಯಂತರ ತಡೆ ನೀಡಿದೆ. ಜನವರಿ 07, 2019ರ ತನಕ ಚಿತ್ರದ ಬಿಡುಗಡೆಗೆ ತಡೆ ನೀಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ವೆಂಕಟೇಶ್ ಎಂಬುವರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ರೌಡಿ ತಂಗಂ ಹಕ್ಕು ಪಡೆದಿದ್ದ ವೆಂಕಟೇಶ್, 'ಕೆ.ಜಿ.ಎಫ್' ರೌಡಿ ತಂಗಂ ಜೀವನಾಧಾರಿತ ಚಿತ್ರ ಎಂದು ಆರೋಪಿಸಿ ಕೋರ್ಟ್ ಮೊರೆ ಹೋಗಿದ್ದರು. ರಾಜೇಶ್ವರಿ ಕಂಬೈನ್ಸ್ ನ ವೆಂಕಟೇಶ್ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.

ಇನ್ನೂ ಚಿತ್ರದಿಂದ ಕೋಲಾರ ಗೋಲ್ಡ್ ಫೀಲ್ಡ್ಸ್(ಕೆಜಿಎಫ್) ನ ಹೆಸರು ದುರ್ಬಳಕೆಯಾಗುತ್ತಿದೆ. ಈ ಚಿತ್ರದಲ್ಲಿ ಹಿಂಸೆ, ರಕ್ತಪಾತವನ್ನು ತೋರಿಸಲಾಗಿದೆ. ಇದರಿಂದ ಕೆಜಿಎಫ್ ಹೆಸರಿಗೆ ಧಕ್ಕೆ ಉಂಟಾಗುತ್ತಿದೆ ಎಂದು ರತನ್ ಮತ್ತು ಲೋಹಿತ್ ಎಂಬುವರು ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಯಶ್ ಅಭಿನಯದ ಚಿತ್ರದ ಹೆಸರು ಬದಲಾಯಿಸುವ ತನಕ ಬಿಡುಗಡೆ ಮಾಡದಂತೆ ಕೋರಲಾಗಿದೆ.
ಡಿಸೆಂಬರ್ 21ರಂದು ವಿಶ್ವದೆಲ್ಲೆಡೆ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಕೆಜಿಎಫ್ ಚಿತ್ರದ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿದೆ.


Click it and Unblock the Notifications











