ನಟ ಶಿವರಾಜ್ ಕುಮಾರ್ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ
ಬೆಂಗಳೂರಿನಲ್ಲಿ ಟ್ರಾಫಿಕ್ ನಿಂದ ತೊಂದರೆ ಅನುಭವಿಸದವರೇ ಇಲ್ಲ.! ಇನ್ನು ನಟ ಶಿವರಾಜ್ ಕುಮಾರ್ ಕೂಡ ಟ್ರಾಫಿಕ್ ನಿಂದ ಹೈರಾಣಾಗಿ ಹೋಗಿದ್ದಾರೆ. ಜೊತೆಗೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಶಿವಣ್ಣ ಮನವಿ ಮಾಡಿದ್ದರು.
ನಟ ಶಿವರಾಜ್ ಕುಮಾರ್ ಮನವಿಗೆ ಇದೀಗ ರಾಜ್ಯ ಸರ್ಕಾರ ಸ್ಪಂದಿಸಿದೆ. ಶಿವಣ್ಣ ನಿವಾಸದ ಬಳಿಯ ಮಾನ್ಯತಾ ಟೆಕ್ ಪಾರ್ಕ್ ಸುತ್ತ ಮುತ್ತ ಭೇಟಿ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ ಈಗ ಸೂಕ್ತ ಕ್ರಮವನ್ನು ಕೈಗೊಂಡಿದ್ದಾರೆ. ಮುಂದೆ ಓದಿ...

ಶಿವಣ್ಣ ಮನವಿ
ಮೂರು ದಿನಗಳ ಹಿಂದೆ ಶಿವರಾಜ್ ಕುಮಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಹೆಬ್ಬಾಳ ಸಮೀಪದ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಸಂಚಾರ ದಟ್ಟಣೆಯ ಬಗ್ಗೆ ಅಲ್ಲಿನ ನಿವಾಸಿಗಳ ಪರವಾಗಿ ವಿವರಿಸಿದ್ದರು.

ಏಕಮುಖ ಸಂಚಾರ
ಶಿವಣ್ಣ ಮನವಿಗೆ ಇದೀಗ ಸರ್ಕಾರ ಸ್ಪಂದಿಸಿದೆ. ಜೊತೆಗೆ ''ಈ ಭಾಗದಲ್ಲಿ ಸಂಜೆ 5.30 ರಿಂದ 8.30ರ ಅವಧಿಯಲ್ಲಿ ಏಕಮುಖ ಸಂಚಾರವನ್ನು ನಿಗದಿ ಪಡಿಸಲಾಗಿದೆ'' ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.

ಜನರಿಗೆ ಸಮಸ್ಯೆಯಾಗಬಾರದು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಿವಣ್ಣ ''ಇದು ನಮ್ಮ ವೈಯಕ್ತಿಕ ವಿಚಾರವಲ್ಲ. ಯಾರಿಗೂ ತೊಂದರೆಯಾಗದಂತೆ ಎಲ್ಲರೂ ಆರಾಮಾಗಿ ಇರಬೇಕು ಎನ್ನುವುದು ನಮ್ಮ ದೃಷ್ಟಿ. ಮಾನ್ಯತಾ ಟೆಕ್ ಪಾರ್ಕ್ ವಿರುದ್ಧ ಯಾವುದು ಆರೋಪ ಮಾಡ್ತಿಲ್ಲ. ಟೆಕ್ ಪಾರ್ಕಿನಿಂದ ಬರುವ ವಾಹನಗಳು ಇಲ್ಲಿ ಕೆಲವು ಗಂಟೆಗಳ ಕಾಲ ಸಂಚರಿಸುತ್ತವೆ. ಸಂಚಾರ ದಟ್ಟಣೆಯಿಂದ ಜನರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶ ಅಷ್ಟೇ'' ಎಂದು ಪ್ರತಿಕ್ರಿಯಿಸಿದ್ದರು.

34,095ಕ್ಕೂ ಅಧಿಕ ವಾಹನಗಳ ಓಡಾಟ
ಈ ಭಾಗದ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ''ಮಾನ್ಯತಾ ಟೆಕ್ ಪಾರ್ಕಿನಲ್ಲಿ ಸುಮಾರು 53 ಕಂಪನಿಗಳಿದ್ದು, ಸಾವಿರಾರು ಉದ್ಯೋಗಿಗಳು ದಿನನಿತ್ಯ ಇಲ್ಲಿ ಸಂಚರಿಸುತ್ತಾರೆ. 19,787 ದ್ವಿಚಕ್ರ ವಾಹನಗಳು, 9,387 ಕಾರುಗಳು, 4,499 ಕ್ಯಾಬ್ಸ್, 303 ಟೆಂಪೋ ಟ್ರಾವೆಲ್ಲರ್ಸ್, 24 ಕಂಪನಿ ಬಸ್ ಗಳು, 95 ಬಿಎಂಟಿಸಿ ಸೇರಿದಂತೆ 5 ರಿಂದ 9 ಗಂಟೆ ಅವಧಿಯಲ್ಲಿ ಒಟ್ಟು 34,095ಕ್ಕೂ ಅಧಿಕ ವಾಹನಗಳು ಓಡಾಡುತ್ತವೆ'' ಎಂದರು.

ತಾತ್ಕಾಲಿಕ ವ್ಯವಸ್ಥೆ
ಮಾನ್ಯತಾ ಟೆಕ್ ಪಾರ್ಕಿನ ಗೇಟ್ ನಂ. 1, 2 ಹಾಗೂ 3ರಿಂದ ಹಾದು ಗೇಟ್ 05 ರಿಂದ ಹೊರ ಹೋಗುತ್ತವೆ. ಗೇಟ್ 3 ಹಾಗೂ 05ರ ಭಾಗದಲ್ಲಿ ವಸತಿ ಸಮುಚ್ಚಯಗಳಿವೆ. ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ಸ್ಥಳೀಯರಿಗೆ ಭಾರಿ ತೊಂದರೆಯಾಗುತ್ತಿದೆ. ಗೇಟ್ 03 ಹಾಗೂ 05 ರ ಭಾಗದಲ್ಲಿ ಸಂಜೆ 5.30 ರಿಂದ 8.30ರ ಅವಧಿಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ.


Click it and Unblock the Notifications











