ಸ್ನೇಹಿತ್ ಚಿನ್ನ..ಮುಗ್ಧ: ಮಗನ ಮೇಲಿನ ಆರೋಪಕ್ಕೆ ರೇಖಾ ಜಗದೀಶ್ ಸ್ಪಷ್ಟನೆ
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ನಟ ಸ್ನೇಹಿತ್ ಹೆಸರು ಇತ್ತೀಚಿನ ದಿನಗಳಲ್ಲಿ ಗೂಂಡಾಗಿರಿ, ಪುಂಡಾಟಿಕೆ, ಬೆದರಿಕೆ ಇಂತಹ ವಿಚಾರಗಳಲ್ಲೇ ಹೆಚ್ಚಾಗಿ ಕೇಳಿ ಬರುತ್ತಿದೆ. ಬೆಂಗಳೂರಿನ ಖ್ಯಾತ ಉದ್ಯಮಿ ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಹಾಗೂ ಕುಟುಂಬಸ್ಥರು ಈ ಹಿಂದೆ ಕೂಡ ನಟ ಸ್ನೇಹಿತ್ ವಿರುದ್ಧ ಆರೋಪ ಮಾಡಿದ್ದು, ಇದೀಗ ಮತ್ತೆ ದೂರು ನೀಡಿದ್ದಾರೆ.
ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ತನ್ನ ತಂಡದೊಂದಿಗೆ ಕಾರಿನಲ್ಲಿ ಬಂದು ರಜತ್ ಹಾಗೂ ಅವರ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಜಾಸ್ತಿ ಮಾತನಾಡಬೇಡಿ ಎಂದು ರಜತ್ ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಗನ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಲು ನಿರ್ಮಾಪಕ ಸೌಂದರ್ಯ ಜಗದೀಶ್ ಹಾಗೂ ಅವರ ಪತ್ನಿ ರೇಖಾ ಜಗದೀಶ್ ಸುದ್ದಿಗೋಷ್ಟಿ ನಡೆಸಿದ್ದು, ನಮ್ಮ ಮಗ ಚಿನ್ನ..ಮುಗ್ಧ.. ಅವನ ಬಗ್ಗೆ ಸುಮ್ಮನೆ ಆರೋಪ ಮಾಡಿದ್ದಾರೆ. ನಮ್ಮನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೇಖಾ ಜಗದೀಶ್, ರಜತ್ ಹಾಗೂ ಕುಟುಂಬಸ್ಥರು ನಮಗೆ ತುಂಬಾ ಮೋಸ ಮಾಡಿದರು. ಅವರು ಸುಮ್ಮನೆ ಸುಳ್ಳು ದೂರು ಕೊಡುವುದು ನಮಗೆ ನೋವು ಕೊಡುವುದು ಮಾಡುತ್ತಿದ್ದಾರೆ. ಅವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರ ಈ ರೀತಿಯ ವರ್ತನೆಯ ಹಿಂದೆ ಏನು ಉದ್ದೇಶ ಇದೆ ಎನ್ನುವುದು ಗೊತ್ತಿಲ್ಲ. ನನ್ನ ಮಗನ ಬಗ್ಗೆ ಹೇಳಬೇಕು ಎಂದರೆ ಅವನು ಚಿನ್ನ, ನಾವೆಷ್ಟು ಪುಣ್ಯ ಮಾಡಿದ್ದೇವೆ ಎಂದರೆ ನಮ್ಮನ್ನು ಪಡಿಯೋಕೆ ಅವನು ಎಷ್ಟು ಪುಣ್ಯ ಮಾಡಿದ್ದಾನೋ, ಅವನನ್ನು ಪಡಿಯಲು ನಾವು ಅಷ್ಟೇ ಪುಣ್ಯ ಮಾಡಿದ್ದೇವೆ ಎಂದರು.
ತಮ್ಮ ಮಗನ ಬಗ್ಗೆ ಮಾತನಾಡಿದ ಅವರು, ಅವನಿಗೆ ಒಂದು ಕೆಟ್ಟ ಅಭ್ಯಾಸ ಇಲ್ಲ. ಅವನ ಮುಂದಿನ ಭವಿಷ್ಯಕ್ಕೆ ಏನು ಬೇಕು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಯಾರದೇ ವಿಷಯ ಬಂದರೂ ಸ್ನೇಹಿತ್ ಜಗದೀಶ್ ಎಂದು ಅವನ ಮೇಲೆ ಆರೋಪ ಮಾಡುತ್ತಾರೆ. ಅವನು ಇನ್ನು ಸ್ಟೂಡೆಂಟ್, ಮುಗ್ಧ ಅವನು, ಅವನು ಇನ್ನೂ ಬೆಳೆಯೋದಿದೆ. ಅವನಿಗೆ ಒಂದು ಬದುಕಿದೆ. ಅವನು ಕೆಟ್ಟವನಲ್ಲ, ಅವನು ತುಂಬಾ ಒಳ್ಳೆಯವನು, ಚಿನ್ನ ಅವನು ಅಂತವನ ಬಗ್ಗೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇವರಿಂದದ ನಮಗೆ ಬದುಕೋಕೆ ಆಗುತ್ತಿಲ್ಲ ಎಂದರು.
ಮಾತು ಮುಂದುವರಿಸಿದ ರೇಖಾ ಜಗದೀಶ್ ಸ್ನೇಹಿತ ತುಂಬಾ ಪಾಪ, ಅವನು ಸಿನಿಮಾಗೆ ರೆಡಿಯಾಗುತ್ತಿದ್ದಾನೆ. ಜೊತೆಗೆ ವಿದ್ಯಾಭ್ಯಾಸ ಕೂಡ ಮಾಡುತ್ತಿದ್ದಾನೆ. ಅವನು ಕೆಲಸ ಎಷ್ಟು ಅಷ್ಟು ಮಾಡಿಕೊಂಡಿರುತ್ತಾನೆ. ಬೆಳಗ್ಗೆ ಕಾಲೇಜಿಗೆ ಹೋದರೆ ಸಂಜೆ ವಾಪಸ್ ಬರುತ್ತಾನೆ. ಅವನಾಯ್ತು ಅವನ ಕೆಲಸ ಆಯ್ತು ಎಂದುಕೊಂಡು ಇರುತ್ತಾನೆ. ಅಂತಹ ಮಕ್ಕಳನ್ನು ಪಡಿಯೋಕೆ ನಾವು ಪುಣ್ಯ ಮಾಡಿದ್ದೇವೆ. ಸ್ನೇಹಿತ್ ತುಂಬಾ ಮುಗ್ಧ. ಒಂದು ಮಗು ತರ ಅವನು, ಯಾರಿಗೂ ಬೇಧ ಭಾವ ಮಾಡಲ್ಲ. ಎಲ್ಲರನ್ನೂ ಪ್ರೀತಿ ಮಾಡುತ್ತಾನೆ. ಎಲ್ಲರಿಗೂ ಪ್ರೀತಿ ತೋರಿಸುತ್ತಾನೆ ಎಂದು ಹೇಳಿದರು.
ಇನ್ನು ಅವನ ಪಾಡಿಗೆ ಅವನಿದ್ದಾನೆ ಆದರೂ ಅವರು ಬಿಡುತ್ತಿಲ್ಲ. ಅವರು ನಮಗೆ ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಕಳೆದ ಬಾರಿಯೂ ಮೂರು ತಿಂಗಳು ಅನುಭವಿಸಿದ್ದೇವೆ. ನಾವು ನಮ್ಮ ಬ್ಯುಸಿನೆಸ್ ನೋಡಿಕೊಂಡು ಹೋಗುತ್ತಿದ್ದೇವೆ. ಅಂತಹ ಕೆಟ್ಟ ಜನರ ಸಹವಾಸಕ್ಕೆ ನಾವು ಹೋಗಿಲ್ಲ. ನಮಗೆ ಇವರ ಕಾಟ ಸಾಕಾಗಿದೆ. ಇದರಿಂದ ಹೊರಬಂದರೆ ಸಾಕಾಗಿದೆ ಎಂದು ಈಸ್ಟ್ ವೆಸ್ಟ್ ಗ್ರೂಪ್ ಮಾಲೀಕ ರಜತ್ ಹಾಗೂ ಕುಟುಂಬಸ್ಥರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


Click it and Unblock the Notifications











