Basavaraj Bommai: ದೊಡ್ಮನೆ ಕನಸಿನ 'ಶಕ್ತಿಧಾಮ'ಕ್ಕೆ 5 ಕೋಟಿ ನೆರವು ಘೋಷಿಸಿದ ಸಿಎಂ
ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ರೂ. ನೆರವು ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದರು.
ನಗರದ ಊಟಿ ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ನೋವಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಶೋಷಿತರು, ದುರ್ಬಲರನ್ನು ಸಮಾಜ ಮತ್ತು ಸರಕಾರ ಕೈ ಹಿಡಿದು ನಿಲ್ಲಿಸಬೇಕು. ಪ್ರೀತಿ ವಿಶ್ವಾಸವನ್ನು ಸಮಾಜಕ್ಕೆ ಕೊಟ್ಟರೇ ಅದೇ ಪ್ರೀತಿ ಗೌರವ ನಮಗೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಒಳ್ಳೆಯದನ್ನೇ ಮಾಡಬೇಕು. ಒಳ್ಳೆಯದನ್ನೇ ಯೋಚಿಸಬೇಕೆಂದರು.

ಶಕ್ತಿಧಾಮ ಎಂಬುದು ಸರಿಯಾದ ಹೆಸರು. ಸ್ತ್ರೀ ಎಂದರೆ ಶಕ್ತಿ. ಭಗವಂತ ಸೃಷ್ಟಿ ಮಾಡುವ ಅಮೂಲ್ಯ ಗುಣವನ್ನು ಹೆಣ್ಣಿಗೆ ನೀಡಿದ್ದಾನೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಏನೆಲ್ಲಾ ಮಾಡಿದರೂ ಒಂದು ಮಗುವಿಗೆ ಜನ್ಮ ನೀಡುವ ಶಕ್ತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇಂದು ಸರಕಾರ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ. ಹಾಗಾಗಿ ಬಜೆಟ್ನಲ್ಲಿ ಇದಕ್ಕೆ ವಿಶೇಷ ನೆರವು ಘೋಷಿಸಲಾಗಿದೆ ಎಂದರು.
ನಮ್ಮ ಸರಕಾರ ಹೆಣ್ಣುಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜೊತೆಗೆ ಆರೋಗ್ಯ, ಶಿಕ್ಷಣಕ್ಕೆಂದೆ 40 ಸಾವಿರ ಕೋಟಿ ಮೀಸಲಿಡಲಾಗಿದೆ. ಆಸಿಡ್ ದಾಳಿಗೆ ಒಳಗಾದವರಿಗೆ 2 ಸಾವಿರ ಇದ್ದ ಸಹಾಯಧನವನ್ನು 10 ಸಾವಿರಕ್ಕೆ ವಿಸ್ತರಣೆ ಮಾಡಲಾಗಿದೆ. ಅಲ್ಲದೆ ನಿರಾಶ್ರಿತರಿಗೆ ಹೊಸ ಬದುಕು ಕಟ್ಟಿಕೊಡುತ್ತಿರುವ ಸಂಘಸಂಸ್ಥೆಗಳಿಗೂ ನಮ್ಮ ಸರಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರನ್ನೂ ನೆನಪಿಸಿಕೊಂಡ ಸಿಎಂ ಬೊಮ್ಮಾಯಿ, ಅಪ್ಪು ಸಾವಿರಾರು ಮಂದಿಗೆ ಸಹಾಯ ಮಾಡಿದ್ದರು ಅವರ ಆದರ್ಶವನ್ನು ನಾವು ಪಾಲನೆ ಮಾಡಬೇಕಿದೆ ಎಂದರು. ಅಪ್ಪು ತಮಗೆ ಅತ್ಯಾಪ್ತರಾಗಿದ್ದ ಬಗ್ಗೆಯೂ ಸಿಎಂ ಬೊಮ್ಮಾಯಿ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ''ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ರೀತಿ ಎಂದು ವರ್ತಿಸಲಿಲ್ಲ. ಅವರೊಬ್ಬ ಕಾಮನ್ ಮ್ಯಾನ್. ಸಿಎಂ ಅವರು ನಮ್ಮ ಕುಟುಂಬದ ಮೇಲೆ ಅಪ್ಪು ಅವರು ಅಗಲಿದಾಗಿನಿಂದಲೂ ಇಟ್ಟಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಭಾವನೆಯನ್ನು ನಾಟಕ ಮಾಡಲು ಆಗಲ್ಲ. ಹೀಗಾಗಿ ಅವರ ಭಾವನಾತ್ಮಕತೆ ನಮಗೆ ಸ್ಪೂರ್ತಿಯಾಗಿದ್ದು, ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದರು.
ಪುನೀತ್ ರಾಜ್ಕುಮಾರ್ ನಿಧನರಾದಾಗ ಸಿಎಂ ಬೊಮ್ಮಾಯಿ, ಬಹಳ ಭಾವುಕರಾಗಿದ್ದರು. ಅಂತಿಮ ದರ್ಶನ, ಅಂತ್ಯಕ್ರಿಯೆ ಇನ್ನಿತರೆ ಕಾರ್ಯಗಳಿಗೆ ಸರ್ಕಾರದಿಂದ ಸಕಲ ನೆರವನ್ನೂ ನೀಡಿದರು. ದೊಡ್ಮನೆ ಕುಟುಂಬದ ಸದಸ್ಯರಂತೆ ನಿಂತು ಎಲ್ಲ ಕಾರ್ಯಗಳನ್ನು ಹತ್ತಿರವಿದ್ದು ನೋಡಿಕೊಂಡಿದ್ದರು. ಅಪ್ಪು ಅಂತ್ಯಕ್ರಿಯೆಗೆ ಮುನ್ನ ಭಾವುಕರಾಗಿ ಹಣೆಗೆ ಮುತ್ತಿಟ್ಟು ಅಪ್ಪುವನ್ನು ಕಳಿಸಿಕೊಟ್ಟಿದ್ದರು.
ಇಂದಿನ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಉಪಾಧ್ಯಕ್ಷ ಸಾಜು ಮ್ಯಾಥ್ಯೂ, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ, ಸುತ್ತೂರು ಮಠ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಡಿಸಿ ಡಾ.ಬಗಾದಿ ಗೌತಮ್, ಸಂದೇಶ್ ನಾಗರಾಜ್, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಗುಂಡ್ಲುಪೇಟೆ ಶಾಸಕ ನಿರಂಜನ್, ಡಾ.ಜಿ.ಎಸ್.ಜಯದೇವ ಸೇರಿದಂತೆ ಇತರರು ಇದ್ದರು.
Recommended Video



Click it and Unblock the Notifications











