'777 ಚಾರ್ಲಿ' ಸಿನಿಮಾ ನೋಡಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಸ್ವಭಾವತಃ ಮೃದು ವ್ಯಕ್ತಿತ್ವವುಳ್ಳ ಭಾವುಕ ಜೀವಿ. ಸಿನಿಮಾ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಬಗ್ಗೆ ಅಪಾರ ಪ್ರೀತಿ, ಗೌರವುಳ್ಳ ಸಿಎಂ ನಿನ್ನೆ ಒರಾಯಿನ್ ಮಾಲ್ನಲ್ಲಿ '777 ಚಾರ್ಲಿ' ಸಿನಿಮಾ ವೀಕ್ಷಿಸಿದ್ದಾರೆ.
ಪ್ರಾಣಿ ಪ್ರೇಮಿ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೆಲವು ತಿಂಗಳ ಹಿಂದಷ್ಟೆ ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡಿದ್ದರು. ತಮ್ಮ ಪ್ರೀತಿಯ ನಾಯಿ ತೀರಿಕೊಂಡ ದಿನ ಕುಟುಂಬ ಸದಸ್ಯನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿದ್ದ ಸಿಎಂ, ನಿನ್ನೆ ರಾತ್ರಿ '777 ಚಾರ್ಲಿ' ನೋಡಿ ಅಗಲಿದ ತಮ್ಮ ಪ್ರೀತಿಯ ನಾಯಿಯನ್ನು ನೆನದು ಕಣ್ಣೀರು ಹಾಕಿದ್ದಾರೆ. ಸಿಎಂ ಕಣ್ಣೀರು ಹಾಕಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಿನಿಮಾವನ್ನು ಮಧ್ಯಂತರದವರೆಗೆ ನೋಡಿ ಬಂದು ಮಾಧ್ಯಮ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ''ಈಗಿನನ್ನೂ ಅರ್ಧ ಸಿನಿಮಾ ನೋಡಿದ್ದೇವೆ. ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಹೇಳಲಾಗಿದೆ. ಅದರಲ್ಲಿಯೂ ಶ್ವಾನ, ಮನುಷ್ಯನನ್ನು ಅತಿಯಾಗಿ ಪ್ರೀತಿಸುವ ಪ್ರಾಣಿ, ಅದರ ಬಗ್ಗೆ ಕತೆ ಮಾಡಲಾಗಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಮಾರ್ಮಿಕವಾಗಿ, ಸೂಕ್ಷ್ಮವಾಗಿ ಹಾಗೂ ಭಾವನಾತ್ಮಕವಾಗಿ ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ'' ಎಂದಿದ್ದಾರೆ.
Recommended Video


ಒಳ್ಳೆಯ ಸಂದೇಶ ಸಿನಿಮಾದಲ್ಲಿದೆ: ಸಿಎಂ
''ಪ್ರಾಣಿಗಳನ್ನು ಹಿಂಸಿಸಬಾರದು, ದೂಷಿಸಬಾರದು, ನೋಯಿಸಬಾರದು. ಪ್ರಾಣಿಗಳನ್ನು ರಕ್ಷಣೆ ಮಾಡಬೇಕು, ಸಾಧ್ಯವಾದರೆ ಅನಾಥ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕು, ಇದರಿಂದ ನಮಗೆ ಹೆಚ್ಚು ಪ್ರೀತಿ, ಸಂತೋಶ ಧಕ್ಕುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬ ಸಂದೇಶ ಸಿನಿಮಾದಲ್ಲಿದೆ'' ಎಂದ ಸಿಎಂ, ರಕ್ಷಿತ್ ಶೆಟ್ಟಿಯನ್ನು ಹೊಗಳುತ್ತಾ, ''ನಾಯಿಯೊಂದಿಗೆ ನಟಿಸುವಾಗ ಬಹಳ ತಾಳ್ಮೆ ಇರಬೇಕಾಗುತ್ತದೆ, ಅದರ ಮನಸ್ಥಿತಿ ಅರ್ಥ ಮಾಡಿಕೊಂಡು ನಟಿಸಬೇಕಾಗುತ್ತದೆ. ಅದನ್ನು ರಕ್ಷಿತ್ ಶೆಟ್ಟಿಯವರು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ'' ಎಂದಿದ್ದಾರೆ.

''ಭಾವುಕ ಸಿನಿಮಾ ಮಾಡಿಯೂ ಗೆಲ್ಲಬಹುದೆಂದು ತೋರಿಸಿದ್ದಾರೆ''
''ಕನ್ನಡ ಚಿತ್ರರಂಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಾ ಇದೆ. 'ಕೆಜಿಎಫ್ 2' ನಂತರ ಕೇವಲ ಮಾಸ್ ಸಿನಿಮಾ ಅಲ್ಲ, ಅರ್ಥಪೂರ್ಣವಾದ, ಭಾವುಕ ಅಂಶವುಳ್ಳ ಸಿನಿಮಾಗಳನ್ನು ಸಹ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಬಹುದು ಎಂಬುದನ್ನು ರಕ್ಷಿತ್ ಶೆಟ್ಟಿ ಮತ್ತು ಬಳಗ ತೋರಿಸಿಕೊಟ್ಟಿದೆ. ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕು. ಎಲ್ಲರೂ ಪ್ರಾಣಿ ಪ್ರೇಮಿಗಳಾಗಬೇಕು ಎಂದು ಕರೆ ಕೊಡುತ್ತೀನಿ'' ಎಂದರು ಸಿಎಂ.

ನನ್ನ ಬಳಿಯೂ ಚಾರ್ಲಿಯಂಥಹಾ ನಾಯಿ ಇದೆ: ಸಿಎಂ
''ಸಿನಿಮಾ ನೋಡುವಾಗ ನನ್ನ ಅಗಲಿದ ನಾಯಿ ನೆನಪು ಬಂತು'' ಎಂದ ಸಿಎಂ, ಮಾಧ್ಯಮ ಸಂಸ್ಥೆಯೊಬ್ಬರು ನನಗೆ ಹೆಣ್ಣು ನಾಯಿಯೊಂದನ್ನು ಉಡುಗೊರೆಯಾಗಿ ನೀಡಿದ್ದು, ಅದರ ಹೆಸರು ದಿಯಾ, ಅದು ಸಹ ಸಿನಿಮಾದಲ್ಲಿರುವ ಚಾರ್ಲಿಯಂತೆಯೇ ಇದೆ. ಅದೂ ಸಹ ಸಿನಿಮಾದ ಚಾರ್ಲಿಯ ರೀತಿಯಲ್ಲಿಯೇ ಓಡಿ ಬಂದು ತಬ್ಬಿಕೊಳ್ಳುತ್ತದೆ'' ಎಂದರು. ಅಲ್ಲದೆ, ''ಸಿನಿಮಾದ ಟ್ರೇಲರ್ ನೋಡಿಯೇ ನನಗೆ ಈ ಸಿನಿಮಾ ವಿಶೇಷವಾಗಿರಲಿದೆ ಎನಿಸಿತ್ತು. ಹಾಗಾಗಿ ಸಿನಿಮಾ ನೋಡುತ್ತಿದ್ದೇನೆ'' ಎಂದಿದ್ದಾರೆ.

ಬೀದಿ ನಾಯಿಗಳ ಸುರಕ್ಷತೆಗೆ ಯೋಜನೆ: ಸಿಎಂ
''ನಾಯಿಗಳ ರಕ್ಷಣೆಗೆ ಕೇಂದ್ರಗಳನ್ನು ಮಾಡುತ್ತಿರುವವರಿಗೆ ವಿಶೇಷ ನೆರವನ್ನು ನೀಡುವ ಕಾರ್ಯವನ್ನು ಮಾಡಬೇಕೆಂಬ ಯೋಚನೆ ನನಗೆ ಇದೆ. ಇದನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರಲಿದ್ದೇನೆ. ಬೀದಿ ನಾಯಿಗಳನ್ನು ಸಹ ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವ ಬಗ್ಗೆಯೂ ಯೋಜನೆ ಜಾರಿಗೆ ತರುವ ಬಗ್ಗೆಯೂ ತಜ್ಞರೊಟ್ಟಿಗೆ ಮಾತನಾಡುವ ಆಲೋಚನೆ ಇದೆ'' ಎಂದರು. ಸಿಎಂ ಜೊತೆಗೆ ಸಚಿವರಾದ ಆರ್.ಅಶೋಕ್, ಸುಧಾಕರ್, ಬಿ ಸಿ ನಾಗೇಶ, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಿರ್ದೇಶಕ ಕಿರಣ್ ರಾಜ್, ನಟಿ ಸಂಗೀತಾ ಶೃಂಗೇರಿ ಮತ್ತು ಇತರರು ಸಿನಿಮಾ ನೋಡಿದರು.


Click it and Unblock the Notifications











