ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತು
ಪ್ರಧಾನಿ ಮೋದಿ ಕುರಿತಾದ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಡಾಕ್ಯುಮೆಂಟರಿ ಭಾರಿ ಸದ್ದು ಮಾಡುತ್ತಿದೆ. ಗುಜರಾತ್ ಹತ್ಯಾಕಾಂಡ ಕುರಿತಾದ ಈ ಡಾಕ್ಯುಮೆಂಟರಿಯ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ನಿಷೇಧ ಹೇರಿದ್ದು, ಡಾಕ್ಯುಮೆಂಟರಿಯ ಲಿಂಕ್ಗಳನ್ನೊಳಗೊಂಡ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಸಹ ಡಿಲೀಟ್ ಮಾಡುತ್ತಿದೆ.
ಇದರ ಬೆನ್ನಲ್ಲೆ ಜಾಮಿಯಾ ವಿವಿ, ಜೆಎನ್ಯು, ಹೈದರಾಬಾದ್ ವಿವಿ ಇನ್ನಿತರೆ ಕೆಲವು ವಿಶ್ವ ವಿದ್ಯಾನಿಲಯಗಳಲ್ಲಿ ಮೋದಿ ಕುರಿತಾದ ಬಿಬಿಸಿಯ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡುವ ಪ್ರಯತ್ನಗಳನ್ನು ವಿದ್ಯಾರ್ಥಿಗಳು ಮಾಡಿದ್ದು, ಇದಕ್ಕೆ ಪೊಲೀಸರಿಂದ, ವಿವಿಯ ಆಡಳಿತಮಂಡಳಿಯಿಂದ ವಿರೋಧ ವ್ಯಕ್ತವಾಗಿದೆ. ಕೆಲವು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಜೆಎನ್ಯುನಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆಯೂ ನಡೆದಿದೆ.
ಇದರ ಬೆನ್ನಲ್ಲೆ ಹಲವು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷವು ಈ ಡಾಕ್ಯುಮೆಂಟರಿಯನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದು, ಕರ್ನಾಟಕದಲ್ಲಿ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ''ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಸತ್ಯವನ್ನು ತಿರುಚಲಾಗಿದೆ. ಇದು ಪ್ರಧಾನಿ ಮೋದಿ ಅವರಿಗೆ ಉಂಟು ಮಾಡಿರುವ ಅಗೌರವವಲ್ಲ. ದೇಶಕ್ಕೆ ತೋರಿದ ಅಗೌರವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಾಕ್ಷ್ಯಚಿತ್ರದ ಬಗ್ಗೆ ಬೊಮ್ಮಾಯಿ ಮಾತು
ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ''ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಚರಿತ್ರೆಯ ಬದಲಾವಣೆ ಮಾಡಲಾಗಿದೆ. ಸಿದ್ದರಾಮಯ್ಯ ಇಂತಹ ವಿಚಾರ ಬಂದಾಗ ದೇಶದ ಪರವಾಗಿ ನಿಲ್ಲುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆದರೆ, ಅವರಿಗೆ ಅಂತಹ ಮನಸ್ಥಿತಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

'ಸಾಕ್ಷ್ಯಚಿತ್ರ ವಿಚಾರ ಇದು ಇಡೀ ದೇಶದ ಗೌರವದ ಪ್ರಶ್ನೆ'
ಸಾಕ್ಷ್ಯಚಿತ್ರ ವಿಚಾರ ಇದು ಇಡೀ ದೇಶದ ಗೌರವದ ಪ್ರಶ್ನೆ. ಉದ್ದೇಶಪೂರ್ವಕವಾಗಿ ಚರಿತ್ರೆ ಬದಲಾವಣೆ ಮಾಡಿ, ದೇಶದ ಚಾರಿತ್ರ್ಯ ಹರಣ ಮಾಡುವಾಗ ಜನ ಸಹಜವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಸತ್ಯ ತಿರುಚಿ ಮಾಡಿರುವ ಈ ಸಾಕ್ಷ್ಯಚಿತ್ರವನ್ನು ಸಿದ್ದರಾಮಯ್ಯನವರೂ ವಿರೋಧ ಮಾಡಬೇಕು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ದೇಶ ಗೌರವ ವಿಚಾರದಲ್ಲಿ ರಾಜಕೀಯ ಎಲ್ಲ ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಬೊಮ್ಮಾಯಿ ಹೇಳಿದರು.

'ಐಂಡಿಯಾ: ದಿ ಮೋದಿ ಕ್ವೆಶ್ಚನ್'
ಬಿಬಿಸಿಯು 'ಐಂಡಿಯಾ: ದಿ ಮೋದಿ ಕ್ವೆಶ್ಚನ್' ಹೆಸರಿನ ಡಾಕ್ಯುಮೆಂಟರಿ ನಿರ್ಮಣ ಮಾಡಿ ಡಾಕ್ಯುಮೆಂಟರಿಯ ಮೊದಲ ಭಾಗವನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಆದ ಗುಜರಾತ್ ಗಲಭೆಯ ಚಿತ್ರಣದ ಜೊತೆಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ನಡುವಿನ ಸಾಮರಸ್ಯ ಹಾಳಾಗಲು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಕಾರಣ ಎಂಬ ಆರೋಪವನ್ನು ಡಾಕ್ಯುಮೆಂಟರಿಯಲ್ಲಿ ಮಾಡಲಾಗಿದೆ.

ತುರ್ತು ಪರಿಸ್ಥಿತಿ ನಿಯಮ ಬಳಸಿ ಡಾಕ್ಯುಮೆಂಟರಿ ನಿಷೇಧ
ಆದರೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆಯು ತುರ್ತು ಪರಿಸ್ಥಿತಿ ನಿಯಮಗಳ ಅಡಿಯಲ್ಲಿ ಈ ಡಾಕ್ಯುಮೆಂಟರಿಯನ್ನು ನಿಷೇಧ ಮಾಡಿದೆ. ಅಲ್ಲದೆ ಈ ಡಾಕ್ಯುಮೆಂಟರಿಯ ಲಿಂಕ್ಗಳನ್ನು ಹೊಂದಿರುವ ಟ್ವಿಟ್ಟರ್, ಫೇಸ್ಬುಕ್ ಪೋಸ್ಟ್ಗಳನ್ನು ಸಹ ಡಿಲೀಟ್ ಮಾಡಿದೆ. ಆದರೆ ಡಾಕ್ಯುಮೆಂಟರಿಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ವಿಚಾರಣೆ ನಡೆಯಲಿದೆ.


Click it and Unblock the Notifications











