ಅಪ್ಪು ಮನೆಗೆ ಬಂದ ಸಿಎಂ: ಮುಂದಿನ ಕಾರ್ಯದ ಬಗ್ಗೆ ಚರ್ಚೆ
ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ, ಅಂತಿಮ ಕಾರ್ಯಗಳು ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮತ್ತೆ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ಮಾಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಇಂದು ಸಂಜೆ ವೇಳೆಗೆ ಸಚಿವ ಆರ್.ಅಶೋಕ್, ಅಶ್ವತ್ಥನಾರಾಯಣ ಹಾಗೂ ಇತರರೊಂದಿಗೆ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಆಗಮಿಸಿದ ಸಿಎಂ ಪುನೀತ್ ಪತ್ನಿ ಅಶ್ವಿನಿ ಅವರೊಟ್ಟಿಗೆ ಮಾತನಾಡಿದರು. ಅವರಿಗೆ ಸಾಂತ್ವನದ ನುಡಿಗಳನ್ನು ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ''ಅಪ್ಪು ಸರ್ವರಿಗೂ ಪ್ರಿಯರಾದವರು, ಅವರ ಕುಟುಂಬ ಅತೀವ ದುಃಖದಲ್ಲಿದೆ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಅವರಿಗೆ ಭರವಸೆ ನೀಡಿದ್ದೇವೆ. ಸರ್ಕಾರ ಅವರಿಗೆ ನೀಡಿದ ಭರವಸೆಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಆದರೆ ಅದು ನಮ್ಮ ಕರ್ತವ್ಯವಾಗಿತ್ತು'' ಎಂದು ಹೇಳಿದರು.

''ಅಪ್ಪು ಅವರಿಗೆ ಸಲ್ಲಬೇಕಾದ ಗೌರವಗಳನ್ನು ನೀಡಲು ಸರ್ಕಾರ ತಯಾರಿದೆ ಎಂಬುದನ್ನು ಅವರ ಕುಟುಂಬ ಸದಸ್ಯರಿಗೆ ಹೇಳಿದ್ದೇವೆ. ಈಗ ನವೆಂಬರ್ 16 ರಂದು ಫಿಲಂ ಚೇಂಬರ್ನವರು ಅಪ್ಪು ನಮನ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ನಾಳೆ ಸಭೆಯೊಂದನ್ನು ಇಟ್ಟುಕೊಂಡಿದ್ದಾರೆ. ಅವರಿಗೆ ಅಗತ್ಯವಾದ ಭದ್ರತೆ ಇನ್ನಿತರೆ ನೆರವುಗಳನ್ನು ಸರ್ಕಾರ ನೀಡಲಿದೆ'' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
''ನವೆಂಬರ್ 16ರ ಬಳಿಕ ಪುನೀತ್ ಕುಟುಂಬದವರೆಲ್ಲ ಕುಳಿತು ಚರ್ಚಿಸಿ ಮುಂದಿನ ಕಾರ್ಯಗಳನ್ನು ನಿರ್ಧರಿಸಲಿದ್ದಾರೆ. ಅವರು ತಮ್ಮ ತೀರ್ಮಾನವನ್ನು ಹೇಳಿದ ಬಳಿಕ ಸರ್ಕಾರ ಅದಕ್ಕೆ ಅಗತ್ಯವಾದ ಅನುಕೂಲಗಳನ್ನು ಮಾಡಿಕೊಡಲಿದೆ'' ಎಂದರು.
ಅಪ್ಪು ಸಾವಿನ ತನಿಖೆ ಆಗಬೇಕೆಂದು ಕೆಲವರ ಒತ್ತಾಯದ ಬಗ್ಗೆ ಮಾತನಾಡಿದ ಸಿಎಂ, ''ಈಗ ಅವರ ಕುಟುಂಬದ ಸದಸ್ಯರು ಬಹಳ ದುಃಖದಲ್ಲಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡಿಲ್ಲ. ನವೆಂಬರ್ 16 ರ ಕಾರ್ಯಕ್ರಮದ ಬಳಿಕ ನಾನು ಅವರೊಟ್ಟಿಗೆ ಮಾತನಾಡುತ್ತೇನೆ'' ಎಂದರು.

''ಅಪ್ಪು ಸರ್ವಸಮ್ಮತವಾದ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಕುರಿತಾದ ಯಾವುದೇ ನಿರ್ಣಯ ತೆಗೆದುಕೊಂಡರು ಸರ್ವಸಮ್ಮತವಾಗಿರುತ್ತದೆ. ಜನರ ಮತ್ತು ಪುನೀತ್ ಅಭಿಮಾನಿಗಳ ಆಶಯದಂತೆ ನಿರ್ಣಯ ಇರುತ್ತದೆ'' ಎಂಬ ಭರವಸೆಯನ್ನು ಬಸವರಾಜ ಬೊಮ್ಮಾಯಿ ನೀಡಿದರು.


Click it and Unblock the Notifications











