ವಿಷ್ಣು ಅಳಿಯ ಅನಿರುದ್ಧ್ ಮಾತಿಗೆ ಆಕ್ರೋಶಗೊಂಡ ಸಿಎಂ ಕುಮಾರಸ್ವಾಮಿ
Recommended Video

ಡಾ ವಿಷ್ಣುವರ್ಧನ್ ಸ್ಮಾರಕ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಸರ್ಕಾರ ಮತ್ತು ವಿಷ್ಣುವರ್ಧನ್ ಕುಟುಂಬದ ನಡುವೆ ವಾಗ್ವಾದ ಶುರುವಾಗಿದೆ. ಮುಖ್ಯಮಂತ್ರಿಗಳ ವಿರುದ್ಧ ವಿಷ್ಣು ಅಳಿಯ ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದು, ''ಮಾನ ಮರ್ಯಾದೆ ಇದ್ದರೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಿ, ಸಿಎಂ ಉಡಾಫೆ ಆಗಿ ಮಾತಾಡ್ತಾರೆ'' ಎಂದು ಕಿಡಿಕಾರಿದ್ದರು.
ಅನಿರುದ್ಧ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈಗ ಆಕ್ರೋಶಗೊಂಡಿದ್ದಾರೆ. 'ಸ್ಮಾರಕ ವಿಚಾರವಾಗಿ ಸರ್ಕಾರ ಏನೂ ಮಾಡಿದೆ ಎಂಬುದು ಸರಿಯಾಗಿ ತಿಳಿದುಕೊಂಡು ಮಾತನಾಡಲಿ, ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಡಿ' ಎಂದು ಪ್ರತಿಕ್ರಿಯಿಸಿದ್ದಾರೆ.
'ವಿಷ್ಣುವರ್ಧನ್ ಅವರ ವಿಷ್ಯದಲ್ಲಿ ಏನಾಗುತ್ತಿದೆ ಎಂಬುದು ನಾನು ಚೆನ್ನಾಗಿ ಬಲ್ಲೆ, ಆ ಬಗ್ಗೆ ನಾನು ಆಮೇಲೆ ಮಾತಾಡ್ತೀನಿ'' ಎಂದು ಹೇಳಿ, ವಿಷ್ಣು ಸಾವಿನ ದಿನ ಏನಾಯಿತು ಎಂದು ಕುಮಾರಸ್ವಾಮಿ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಮುಖ್ಯಮಂತ್ರಿ ಹೇಳಿದ ಕಥೆಯೇನು.?

ವಿಷ್ಣು ನಿಧನದ ವೇಳೆ ನಾನು ಅಧಿಕಾರದಲ್ಲಿರಲಿಲ್ಲ
''ಡಾ ರಾಜ್ ಕುಮಾರ್ ನಂತರ ಅವರ ಅಂತಹ ಸ್ಥಾನದಲ್ಲಿದ್ದರು. ಚಿತ್ರರಂಗಕ್ಕೆ ಅವರದ್ದೇ ಆದ ಕೊಡುಗೆಗಳನ್ನ ನೀಡಿದ್ದರು. ಅದನ್ನ ಗೌರವಿಸಬೇಕಾಗಿತ್ತು. ವಿಷ್ಣುವರ್ಧನ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನಾನು ಬೆಳಿಗ್ಗೆ ಆರು ಗಂಟೆಗೆ ಅವರ ಮನೆ ಬಳಿ ಹೋದೆ. ಆಗ ನಾನು ಅಧಿಕಾರದಲ್ಲಿ ಇರಲಿಲ್ಲ. ಅಷ್ಟೋತ್ತಗಾಗಲೇ ವಿಷ್ಣು ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಕುಟುಂದವರು ನಿರ್ಧರಿಸಿದ್ದರು'' ಎಂದು ಹಿನ್ನೆಲೆ ವಿವರಿಸಿದ್ದಾರೆ ಸಿಎಂ

ಅಂತ್ಯಕ್ರಿಯೆ ಸ್ಥಳ ನಿಗದಿಯಾಗಿತ್ತು
'ವಿಷ್ಣು ಅವರ ಅಂತ್ಯಸಂಸ್ಕಾರಕ್ಕೆ ಮೊದಲೇ ಜಾಗ ನಿಗದಿಯಾಗಿತ್ತು. ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ಕುಟುಂಬದವರು ನಿರ್ಧರಿಸಿದ್ದರು. ಆದ್ರೆ, ನಾನೇ ಬೇಡ, ವಿಷ್ಣು ಅವರೊಬ್ಬ ನಟ, ಚಿತ್ರರಂಗಕ್ಕೆ ಅವರ ಸಾಧನೆ ಹೆಚ್ಚಿದೆ. ಅವರಿಗೆ ಸರಿಯಾದ ಗೌರವ ನೀಡಬೇಕು ಎಂದು ಹೇಳಿ, ಅಂದಿನ ಯಡಿಯೂರಪ್ಪ ಸರ್ಕಾರದ ಗಮನಕ್ಕೆ ತಂದು, ಸರ್ಕಾರದಿಂದ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಯಿತು'

ಕುಟುಂಬದವರೆಲ್ಲಾ ಇದ್ದಾರೆ ಕೇಳಿ
''ಆಗ ಭಾರತಿ ಅವರ ಬಳಿ, ಹಿರಿಯ ನಟ ಶಿವರಾಂ ಅವರಿದ್ದರು ಅವರ ಬಳಿಯೂ ಈ ಬಗ್ಗೆ ಮಾತನಾಡಿದ್ದೆ. ನಂತರ ಅಂಬರೀಶ್ ಅವರಿಗೆ ಫೋನ್ ಮಾಡಿ, ಸರ್ಕಾರದ ಬಳಿ ವಿಷ್ಣು ಅಂತ್ಯಕ್ರಿಯೆ ಬಗ್ಗೆ ಚರ್ಚೆ ಮಾಡಿ ಅಂತ ನಾನೇ ಹೇಳಿದ್ದೆ. ಆಗ ನಾನು ಕೂಡ ಸ್ವತಃ ಯಡಿಯೂರಪ್ಪ ಅವರ ಬಳಿ ಫೋನ್ ನಲ್ಲಿ ಮಾತನಾಡಿದ್ದೆ'' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಎಷ್ಟು ವರ್ಷ ಕಾಯಬೇಕು.?
ಈ ಬಗ್ಗೆ ಮಾತನಾಡಿದ ಅನಿರುದ್ಧ ''ಸಿಎಂ ಕುಮಾರಸ್ವಾಮಿ ಒಬ್ಬರ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಂದಿನಿಮದ ಇಂದಿನವರೆಗೂ ಬಂದ ಎಲ್ಲಾ ಸರ್ಕಾರಗಳು ಕಾಯಿಸುತ್ತಲೇ ಬರ್ತಿದೆ. ಐದಾರು ಜಾಗಗಳನ್ನ ಬದಲಾಯಿಸುತ್ತಿದೆ. ನಾವು ಎಷ್ಟು ಕಛೇರಿಗಳನ್ನ ಅಲೆಯಬೇಕು'' ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications











