ಡೇರ್ ಡೆವಿಲ್ ಮುಸ್ತಾಫಾಗೆ ತೆರಿಗೆ ವಿನಾಯಿತಿ ನೀಡುವಂತೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಪೂರ್ಣ ಚಂದ್ರ ತೇಜಸ್ವಿ ಅವರ ಕಾದಂಬರಿ ಅಬಚೂರಿನ ಪೋಸ್ಟಾಫೀಸು ಆಧಾರಿತವಾಗಿರುವ ಸಿನಿಮಾ 'ಡೇರ್ ಡೆವಿಲ್ ಮುಸ್ತಾಫಾ' ತೆರೆಕಂಡು ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ ಎಂಬುವವರ ನಿರ್ದೇಶನವಿದ್ದು, ಚಿತ್ರ ನೋಡಿದ ಸಿನಿ ರಸಿಕರು ಹಾಗೂ ಪೂಚಂತೇ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೋಮು ಸೌಹಾರ್ದತೆ ಸಾರುವ ಕಥೆಯುಳ್ಳ ಕಥೆಯನ್ನು ಹೊಂದಿರುವ ಚಿತ್ರವನ್ನು ಎಲ್ಲರೂ ನೋಡಬೇಕೆಂದು ಚಿತ್ರ ನೋಡಿದ ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದರು. ಅಷ್ಟೇ ಅಲ್ಲದೆ ಇಂತಹ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ರಾಜ್ಯ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಚಿತ್ರತಂಡ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಬಳಿ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು.

ಕಳೆದ 11ನೇ ತಾರೀಖಿನಂದು ನಿರ್ದೇಶಕರು ಸಲ್ಲಿಸಿದ್ದ ಈ ಮನವಿಗೆ ಸಿದ್ದರಾಮಯ್ಯನವರು ಇದೀಗ ಅಸ್ತು ಎಂದಿದ್ದು, ಚಿತ್ರತಂಡದ ಕೋರಿಕೆಗೆ ಒಪ್ಪಿಕೊಂಡಿದ್ದು, ಡೇರ್ ಡೆವಿಲ್ ಮುಸ್ತಾಫಾ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಶಶಾಂಕ್ ಸೋಗಾಲ ಅವರು ಸಲ್ಲಿಸಿದ್ದ ಮನವಿ ಪತ್ರದ ಮೇಲೆ 'ತೆರಿಗೆ ವಿನಾಯಿತಿ ನೀಡುವುದು' ಎಂದು ಬರೆಯಲಾಗಿದ್ದು, ಸಿದ್ದರಾಮಯ್ಯನವರ ಸಹಿ ಸಹ ಇದೆ. ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದನ್ನು ಕಂಡ ಚಿತ್ರ ಪ್ರೇಮಿಗಳು ಹಾಗೂ ಕನ್ನಡ ಪ್ರೇಮಿಗಳು ಸಿದ್ದರಾಮಯ್ಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಚಿತ್ರಗಳಿಗೆ ಇಂತಹ ಬೆಂಬಲ ನೀಡಿದ್ದು ಚಿತ್ರ ಇನ್ನಷ್ಟು ಹೆಚ್ಚಿನ ದಿನಗಳ ಕಾಲ ಪ್ರದರ್ಶನ ಕಾಣಲು ನೆರವಾಗುತ್ತೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಚಿತ್ರ 25 ದಿನಗಳ ಪ್ರದರ್ಶನವನ್ನು ಪೂರೈಸಿದ್ದು, ಐವತ್ತು ದಿನಗಳತ್ತ ಸಾಗಿದೆ. ಈ ನಡುವೆ ಚಿತ್ರತಂಡ ಕೇಕ್ ಕತ್ತರಿಸುವ ಮೂಲಕ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದು, ಸಿನಿ ರಸಿಕರೂ ಸಹ ಚಿತ್ರ ಈ ಮೈಲಿಗಲ್ಲನ್ನು ಮುಟ್ಟಿದ್ದರ ಬಗ್ಗೆ ಪೋಸ್ಟ್ ಹಾಕಿಕೊಂಡು ಸಂತಸ ಹೊರಹಾಕಿದ್ದರು.
ಖ್ಯಾತ ನಟ ಪ್ರಕಾಶ್ ರಾಜ್ ಸಹ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೂನ್ 12ರಂದು ಚಿತ್ರ ವೀಕ್ಷಿಸಿದ್ದ ಪ್ರಕಾಶ್ ರಾಜ್ "Wow #Dareಡೆವಿಲ್Musthafa.. ಒಂದು ಆಹ್ಲಾದಕರ ಸಿನೆಮಾ.. ಈ ಯುವತಂಡದ ಪ್ರಬುಧ್ಧತೆ.. ಸಾಮಾಜಿಕ ಕಳಕಳಿ.. ಕಂಡು ಮನತುಂಬಿ ಬಂತು .. ಇಂತಹ ನಮ್ಮ ನೆಲದ ಅದಮ್ಯ ಪ್ರತಿಭೆಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಹೊಣೆ.. ಇಂದೇ ನೋಡಿ.." ಎಂದು ಬರೆದುಕೊಂಡಿದ್ದರು.


Click it and Unblock the Notifications











