ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾ ವೀಕ್ಷಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್ಲಾರ್ಡ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ ನಟನೆಯ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಬೆಂಬಲಿಸಬೇಕಿದೆ. ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ಚಿತ್ರದ ವೀಕ್ಷಿಸಲಿದ್ದಾರೆ.
'ಲ್ಯಾಂಡ್ಲಾರ್ಡ್' ಚಿತ್ರತಂಡ ಇಂದು(ಜನವರಿ 24) ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ವೇಳೆ ತಾವು ಕೂಡ ಸಿನಿಮಾ ವೀಕ್ಷಿಸುವುದಾಗಿ ಸಿಎಂ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಲ್ಯಾಂಡ್ ಲಾರ್ಡ್' ಚಿತ್ರತಂಡದವರು ಇಂದು ನನ್ನನ್ನು ಭೇಟಿಯಾಗಿ, ತಮ್ಮ ಚಿತ್ರ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಎಲ್ಲರೂ ನೋಡಲೇಬೇಕಾದ ಚಿತ್ರವಿದು. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ, ನೀವೂ ನೋಡಿ" ಎಂದು ಬರೆದುಕೊಂಡಿದ್ದಾರೆ.

"ಈ ಚಿತ್ರದ ಮೂಲಕ ಸಮಾಜದಲ್ಲಿನ ಜಾತಿ ಅಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವಂತಹ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಥಾಹಂದರದ ಸಿನಿಮಾಗಳು ಮೂಡಿಬರುತ್ತಿರುವುದು ಅಪರೂಪ. ನಿಜಕ್ಕೂ ಇದೊಂದು ದಿಟ್ಟ ಪ್ರಯತ್ನ, ಇದಕ್ಕಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ದುನಿಯಾ ವಿಜಯ್ ನಟನೆಯ 'ಲ್ಯಾಂಡ್ ಲಾರ್ಡ್' ಸಿನಿಮಾ ಶತದಿನೋತ್ಸವವನ್ನು ಪೂರೈಸಲಿ" ಎಂದು ಶುಭ ಕೋರಿದ್ದಾರೆ.
80, 90ರ ದಶಕದಲ್ಲಿ ಕೆಳವರ್ಗದವರ ಮೇಲೆ ಮೇಲ್ವರ್ಗದವರ ದಬ್ಬಾಳಿಕೆಯನ್ನು 'ಲ್ಯಾಂಡ್ ಲಾರ್ಡ್' ಚಿತ್ರದಲ್ಲಿ ಹೇಳಲಾಗಿದೆ. ಕೂಲಿ ಕಾರ್ಮಿಕರಿಗೆ ಜಮೀನು ಸಿಗದಂತೆ ಮಾಡಿ ಅವರನ್ನು ಜೀತದಾಳುಗಳಂತೆ ದುಡಿಸಿಕೊಂಡು ಅನಿಷ್ಟ ಪದ್ದತಿಗಳ ಆಚರಣೆ, ಮೂಢನಂಬಿಕೆಗಳನ್ನು ಅವರ ಮೇಲೆ ಹೇರುತ್ತಾ ದೌರ್ಜನ್ಯ ನಡೆಸುತ್ತಿದ್ದ ವಿಷಯಗಳನ್ನು ತೆರೆಗೆ ತಂದಿದ್ದಾರೆ.
ದುಷ್ಟ ಜಮೀನ್ದಾರನ ವಿರುದ್ಧ ಕೊಡಲಿ ಹಿಡಿದು ಕೂಲಿ ಕಾರ್ಮಿಕ ರಾಚಯ್ಯ ನಡೆಸುವ ಹೋರಾಟ ಚಿತ್ರದ ತಿರುಳು. ಅದರ ಸುತ್ತಾ ಸಾಕಷ್ಟು ವಿಚಾರಗಳನ್ನು ಹೆಣೆಯಲಾಗಿದೆ. ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಚಿತ್ರವನ್ನು ನೋಡುಗರಿಗೆ ನಾಟುವಂತೆ ಜಡೇಶ್ ಕಟ್ಟಿಕೊಟ್ಟಿದ್ದಾರೆ. ಕಲಾವಿದರೆಲ್ಲಾ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ದುನಿಯಾ ವಿಜಯ್ ಎದುರು ರಾಜ್ ಬಿ ಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದಾರೆ.
ದುನಿಯಾ ವಿಜಯ್ ಪತ್ನಿ ಪಾತ್ರದಲ್ಲಿ ರಚಿತಾ ರಾಮ್ ಹಾಗೂ ತಾಯಿ ಪಾತ್ರದಲ್ಲಿ ಉಮಾಶ್ರೀ ಬಣ್ಣಹಚ್ಚಿದ್ದಾರೆ. ವಿಜಯ್ ಪುತ್ರಿ ರಿತನ್ಯಾ ಕೂಡ ಚಿತ್ರದಲ್ಲಿ ಮಗಳಾಗಿಯೇ ನಟಿಸಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಬಲ ತುಂಬಿದೆ. ವರ್ಷದ ಮೊದಲ ಸ್ಟಾರ್ ಸಿನಿಮಾ ಎನಿಸಿಕೊಂಡಿರುವ 'ಲ್ಯಾಂಡ್ಲಾರ್ಡ್' ಚಿತ್ರಕ್ಕೆ ಮೊದಲ ದಿನ ಸಾಧಾರಣ ಓಪನಿಂಗ್ ಸಿಕ್ಕಿತ್ತು. ಆದರೆ ಮೊದಲ ದಿನ ಸಿನಿಮಾ ನೋಡಿದವರು ಮೆಚ್ಚಿಕೊಂಡಾಡಿದ್ದಾರೆ. ಹಾಗಾಗಿ ನಿಧಾನವಾಗಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿದ್ದಾರೆ. ಮೊದಲ ದಿನಕ್ಕಿಂತ 2ನೇ ದಿನ ರೆಸ್ಪಾನ್ಸ್ ಚೆನ್ನಾಗಿದೆ. ಮೂರನೇ ದಿನವಾದ ಭಾನುವಾರ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಗೆಲ್ಲಿಸಬೇಕಿದೆ.
ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ ವಿ ಸತ್ಯಪ್ರಕಾಶ್ ಮತ್ತು ಕೆ ಎಸ್ ಹೇಮಂತ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಾಳಿಪಟ ಭಾವನಾ ರಾವ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಣ್ಣಪುಟ್ಟ ತಪ್ಪುಗಳ ಹೊರತಾಗಿ ಸಿನಿಮಾ ಸೊಗಸಾಗಿ ಮೂಡಿಬಂದಿದೆ. ವಿಮರ್ಶಕರು ಕೂಡ ಸಿನಿಮಾ ನೋಡಿ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಎದುರು ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ಕೂಡ ಬಿಡುಗಡೆ ಆಗಿದೆ. ಮುಂದೆ 'ಲ್ಯಾಂಡ್ಲಾರ್ಡ್' ದರ್ಬಾರ್ ಹೇಗಿರುತ್ತದೆ ಕಾದು ನೋಡಬೇಕು.


Click it and Unblock the Notifications











