ಅಣ್ಣಾವ್ರ ಹುಟ್ಟುಹಬ್ಬ: ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ
ಇವತ್ತು (ಏಪ್ರಿಲ್ 24) ಇಡೀ ಕರ್ನಾಟಕಕ್ಕೆ ಸಂಭ್ರಮದ ಹಬ್ಬ. ಯಾಕಂದ್ರೆ ಇವತ್ತು ನಿಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕ ರತ್ನ.. ಅಭಿಮಾನಿಗಳ ಆರಾಧ್ಯ ದೈವ.. ಡಾ.ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬ.
ಡಾ.ರಾಜ್ ಉತ್ಸವವನ್ನ ಎಲ್ಲರೂ ರಾಜ್ಯೋತ್ಸವದ ರೀತಿ ಆಚರಿಸುತ್ತಿದ್ದಾರೆ. ವರನಟನಿಗೆ ತಮ್ಮದೇ ರೀತಿಯಲ್ಲಿ ಎಲ್ಲರೂ ಶುಭಾಶಯಗಳನ್ನ ಕೋರುತ್ತಿದ್ದಾರೆ.

ಅಭಿಮಾನಿಗಳ ಆರಾಧನೆ
ಅಣ್ಣಾವ್ರು ಅಭಿಮಾನಿಗಳನ್ನ ದೇವರು ಅಂದಿದ್ರು. ಅದೇ ರೀತಿ ಅಭಿಮಾನಿಗಳು ಸಹ ರಾಜ್ ಕುಮಾರ್ ಅವರನ್ನ ದೇವರಾಗಿ ಕಾಣ್ತಾರೆ. ಈ ಹುಟ್ಟುಹಬ್ಬಕ್ಕೆ ಕರ್ನಾಟಕ ರಾಜ್ಯಾದ್ಯಂತ ಇರುವ ಕೊಟ್ಯಂತರ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗೆ ಶುಭಾಶಯ ಕೋರಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ರಾಜ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಗೂಗಲ್ ಸ್ಪೆಷಲ್
ವರನಟನ ಈ ಹುಟ್ಟುಹಬ್ಬವನ್ನ ಗೂಗಲ್ ಸಹ ಸಂಭ್ರಮಿಸುತ್ತಿದೆ. ಗೂಗಲ್ ಹೋಮ್ ಪೇಜ್ ನಲ್ಲಿ ಡಾ.ರಾಜ್ ಭಾವಚಿತ್ರ ಹಾಕಿ ರಾಜಣ್ಣನ ಆರಾಧನೆ ಮಾಡಿದೆ.

ಸಿಎಂ ಶುಭಾಶಯ
ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ಡಾ.ರಾಜ್ ಜಯಂತೋತ್ಸವದ ಶುಭಾಶಯವನ್ನ ತಿಳಿಸಿದ್ದಾರೆ. ಜೊತೆಗೆ ಗೃಹ ಸಚಿವ ಪರಮೇಶ್ವರ್ ಮುಂದಿನ ವರ್ಷದಿಂದ ರಾಜ್ ಕುಮಾರ್ ಜೀವನ ಚರಿತ್ರೆಯನ್ನ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಸಚಿವ ಆಂಜನೇಯ ಸಹ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಚಿತ್ರರಂಗದ ಆಚರಣೆ
ಚಿತ್ರರಂಗದ ಅನೇಕ ಗಣ್ಯರು ಅಣ್ಣಾವ್ರಿಗೆ ತಮ್ಮದೆ ಆದ ರೀತಿಯಲ್ಲಿ ವಿಶ್ ಮಾಡಿದ್ದಾರೆ. ನಟ ಜಗ್ಗೇಶ್ ಅಣ್ಣವ್ರ ಹಾಡನ್ನ ಹಾಡಿ ಅವರ ನೆನಪು ಮಾಡಿಕೊಂಡ್ರು. ವಿಶೇಷ ಅಂದ್ರೆ ತೆಲುಗಿನ ಪವನ್ ಕಲ್ಯಾಣ್ ಫ್ಯಾನ್ಸ್ ಗ್ರೂಪ್ ಗಳು ಸಹ ಟ್ವಿಟ್ಟರ್ ನಲ್ಲಿ ವಿಶ್ ಮಾಡ್ತಿದ್ದಾರೆ.

ಬಬ್ರುವಾಹನ ರೀ ರಿಲೀಸ್
ಡಾ.ರಾಜ್ ರವರ ಹುಟ್ಟುಹಬ್ಬದ ಪ್ರಯುಕ್ತ ಪ್ರತಿ ವರ್ಷ ಅವ್ರ ಯಾವುದಾದ್ರೂ ಒಂದು ಸಿನಿಮಾ ರೀ ರಿಲೀಸ್ ಆಗೋದು ಸಾಮಾನ್ಯ. ಈ ವರ್ಷ 'ಬಬ್ರುವಾಹನ' ಸಿನಿಮಾ ಮತ್ತೆ ತೆರೆಗೆ ಬಂದಿದೆ.


Click it and Unblock the Notifications