ನಟ ಜಗ್ಗೇಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು
ನವರಸನಾಯಕ ಜಗ್ಗೇಶ್ ವಿರುದ್ಧ ಬೆಂಗಳೂರಿನ ಬನಶಂಕರಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರನ್ನು ಅವಹೇಳನೆ ಮಾಡಲಾಗಿದ ಎಂಬ ಆರೋಪದಡಿ ಈ ದೂರು ಸಲ್ಲಿಸಲಾಗಿದೆ.
Recommended Video
ಕಾಂಗ್ರೆಸ್ ಪಕ್ಷದ ಐಟಿ ಸೆಲ್ನ ಮುಖ್ಯಸ್ಥ ಸಂದೀಪ್ ಅಣಬೇರು ಸೋಮವಾರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ತಿರುಚಿದ ಫೋಟೋಗಳನ್ನು ಜಗ್ಗೇಶ್ ಮತ್ತು ಬಿಜೆಪಿಗರು ಪೋಸ್ಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು ನಗರ ಸಾಕಾಯಿತು. ಬಿಜೆಪಿ ಸರ್ಕಾರದ ಸಹವಾಸ ಸಾಕು ಎಂದು ಯುವಕರೊಬ್ಬರು ಟಿವಿ ಚಾನೆಲ್ಗೆ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಫೋಟೊ ಕೂಡ ವೈರಲ್ ಆಗಿತ್ತು. ಆ ಎರಡರಲ್ಲಿಯೂ ಇರುವ ವ್ಯಕ್ತಿ ಒಬ್ಬರೇ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಮುಂದೆ ಓದಿ...

ವಲಸೆ ಕಾರ್ಮಿಕನಂತೆ ಮಾತು
ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಉಸ್ತುವಾರಿಯೊಬ್ಬ ಜಿಪ್ಸಿ ವ್ಯಾನ್ನಲ್ಲಿ ಬಂದು ತಾನು 15 ಸಾವಿರ ಸಂಬಳ ಪಡೆಯುವ ವಲಸೆ ಕಾರ್ಮಿಕನಂತೆ ಮಾತನಾಡಿದ್ದಾನೆ. ಬಿಜೆಪಿಯನ್ನು ತೆಗಳಿ ಹಳ್ಳಿಗೆ ಹೋಗುವವನಂತೆ ನಟಿಸಿದ್ದಾನೆ ಎಂಬ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಅದರಲ್ಲಿ ಸಂದೀಪ್ ಅಣಬೇರು ಅವರ ಸಾಮಾಜಿಕ ಜಾಲತಾಣದ ಖಾತೆ ಮತ್ತು ಅವರು ಮಲ್ಲಿಕಾರ್ಜುನ ಖರ್ಗೆ ಜತೆಗಿರುವ ಫೋಟೊಗಳನ್ನು ಬಳಸಲಾಗಿತ್ತು.

ಅನ್ಯಪಕ್ಷದ ಕಾರ್ಯಕರ್ತ
ಈ ಪೋಸ್ಟ್ಯನ್ನು ಶೇರ್ ಮಾಡಿದ್ದ ನಟ ಜಗ್ಗೇಶ್, ಮೊನ್ನೆ ಊರು ಬಿಟ್ಟು ಹೋಗುವವನು ನನಗೆ ಪಟ್ಟಣ ಹಾಗು ಭಾಜಪ ಸರ್ಕಾರದ ಸಹವಾಸ ಸಾಕು ಊರಿಗೆ ಹೋಗಿ ಜಮೀನಿನಲ್ಲಿ ಜೀವನಮಾಡುವೆ ಎಂದುಬಿಟ್ಟ! ಅದು viral ಆಯಿತು! ಈಗ ನೋಡಿದರೆ ಈತ well planed! ಅನ್ಯ ಪಕ್ಷದ ಕಾರ್ಯಕರ್ತ! ಆದರು ಸಹೋದರ ಎಷ್ಟೆ ಯತ್ನಿಸಿದರು ನರೇಂದ್ರ ಮೋದಿ, ಬಿಜೆಪಿ ಜನರ ಮನಸ್ಸಿನಲ್ಲಿ ಜಾಗಪಡೆದಿದೆ ಎಂದು ಬರೆದಿದ್ದರು.

ಅವರಿಗೂ ನನಗೂ ಸಂಬಂಧವಿಲ್ಲ
ಈಗ ಈ ಪೋಸ್ಟ್ ವಿರುದ್ಧ ಸಂದೀಪ್ ಅಣಬೇರು ಪೊಲೀಸರಿಗೆ ದೂರು ನೀಡಿದ್ದಾರೆ. 'ಟಿವಿ ಚಾನೆಲ್ಗೆ ಹೇಳಿಕೆ ನೀಡಿದ ವ್ಯಕ್ತಿ ಚಿಕ್ಕಮಗಳೂರಿನವರು. ಅವರಿಗೂ ನನಗೂ ಸಂಬಂಧವಿಲ್ಲ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿ ಹಾಕಲು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಇದರಲ್ಲಿ ಸಣ್ಣಪುಟ್ಟ ವ್ಯಕ್ತಿಗಳು ಮಾಡಿದ್ದರೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಆದರೆ ಎಂಎಲ್ಸಿಯಾಗಿ, ಕೆಎಸ್ಆರ್ಟಿಸಿಯ ಅಧ್ಯಕ್ಷರಾಗಿ ಉತ್ತಮ ಸ್ಥಾನದಲ್ಲಿದ್ದ ಚಿತ್ರನಟ, ಬಿಜೆಪಿ ಮುಖಂಡ ಜಗ್ಗೇಶ್ ಈ ರೀತಿ ಪೋಸ್ಟ್ ಮಾಡಿದ್ದಾರೆ. ತಪ್ಪು ಸಂದೇಶ ಕೊಡುವ ಮೂಲಕ ರಾಜ್ಯದ ಜನೆತೆಗೆ ದಾರಿ ತಪ್ಪಿಸಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

ಎಲ್ಲ ಜಿಲ್ಲೆಗಳಲ್ಲೂ ಮಾನನಷ್ಟ ಮೊಕದ್ದಮೆ
ಈ ಕೂಡಲೇ ಜಗ್ಗೇಶ್ ತಮ್ಮ ಟ್ವೀಟ್ ಡಿಲೀಟ್ ಮಾಡಿ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದ 30 ಜಿಲ್ಲೆಗಳಲ್ಲಿಯೂ ಮಾನನಷ್ಟ ಮೊಕದ್ದಮೆ ಹಾಕಿ ವರ್ಷಪೂರ್ತಿ ಓಡಾಡುವಂತಹ ಕೆಲಸವನ್ನು ಮಾಡುತ್ತೇವೆ. ಅದಕ್ಕೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎಲ್ಲರ ಸಹಕಾರ ಇದೆ ಎಂದು ಅವರು ಹೇಳಿದ್ದಾರೆ.

ಹೋರಾಟದ ಎಚ್ಚರಿಕೆ
ಬನಶಂಕರಿ ಪೊಲೀಸ್ ಠಾಣೆಯ ಸೈಬರ್ ಕ್ರೈಂನಲ್ಲಿ ದೂರು ನೀಡಿದ್ದೇವೆ. ನೋಟಿಸ್ ಕಳಿಸಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ, ಬಿಜೆಪಿ ಸರ್ಕಾರದವರು ಇದನ್ನು ಯಾವ ರೀತಿ ರಾಜಕೀಯವಾಗಿ ತೆಗೆದುಕೊಳ್ಳುತ್ತಾರೆ ಎಂದು ನೋಡುತ್ತೇವೆ. ದೂರು ಪರಿಗಣಿಸದೆ ಹೋದರೆ ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಸಂದೀಪ್ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











