ಕಿರುತೆರೆ ರಿಯಾಲಿಟಿ ಶೋ; ರಮೇಶ್ ಅರವಿಂದ್, ಅನುಶ್ರೀ, ಪ್ರೇಮಾ ವಿರುದ್ಧ ದೂರು ದಾಖಲು
ಕನ್ನಡ ಕಿರುತೆರೆ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಆ ಶೋನಲ್ಲಿ ಬಳಸಿದ ಡೈಲಾಗ್ ಶ್ರಮಿಕ ವರ್ಗದವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಶೋ ನಿರ್ಮಾಪಕ, ನಿರ್ದೇಶಕ, ತೀರ್ಪುಗಾರರ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಗಗನಾ ಸ್ಕಿಟ್ ವೇಳೆ ಹೇಳಿದ್ದ ಡೈಲಾಗ್ ಬಗ್ಗೆ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್ಶಾಪ್ ಮಾಲೀಕರು ಹಾಗೂ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಕಾನಿಕ್ ಕೆಲಸ ಮಾಡುವ ಶ್ರಮಿಕ ವರ್ಗದವನ್ನು ಶೋನಲ್ಲಿ ಕೀಳಾಗಿ ನಿಂದಿಸಿದ್ದಾರೆ, ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

ಶೋನಲ್ಲಿ ತೀರ್ಪುಗಾರದಾದ ರಮೇಶ್ ಅರವಿಂದ್ ಸ್ಪರ್ಧಿಗಳಿಗೆ ಒಂದೊಂದು ಕಾನ್ಸೆಪ್ಟ್ ಕೊಟ್ಟು ಕೂಡಲೇ ನಟನೆ ಮಾಡಿ ತೋರಿಸುವಂತೆ ಹೇಳುತ್ತಾರೆ. ಕೂಡಲೇ ಡೈಲಾಗ್ ಸಿದ್ಧಪಡಿಸಿಕೊಂಡು ನಟಿಸಬೇಕು. ಸ್ಪರ್ಧಿ ಗಗನಾಗೆ ಮೆಕ್ಯಾನಿಕ್ ಲೈಫ್ ಬಗ್ಗೆ ಕಾನ್ಸೆಪ್ಟ್ ಕೊಟ್ಟಿದ್ದರು. ನಿಮ್ಮ ತಂಗಿ ಮೆಕ್ಯಾನಿಕ್ನ ಲವ್ ಮಾಡುತ್ತಿದ್ದರೆ ಏನು ಮಾಡುತ್ತೀಯಾ? ಎಂದಾಗ ಡೈಲಾಗ್ ಹೇಳುವ ಭರದಲ್ಲಿ "ಗ್ರೀಸ್ ತಿಂದು ಬದುಕಬೇಕಾಗುತ್ತದೆ" ಎಂದು ಗಗನಾ ಹೇಳಿದ್ದರು. ಆ ಡೈಲಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಇದೇ ಡೈಲಾಗ್ ಬಗ್ಗೆ ಈಗ KTWOTA ಸಹಯೋಗದೊಂದಿಗೆ ಫ್ರೆಂಡ್ಸ್ ದ್ವಿಚಕ್ರ ವಾಹನ ವರ್ಕ್ಶಾಪ್ ಮಾಲೀಕರು ಹಾಗೂ ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದವರು ದೂರು ದಾಖಲಿಸಿ ಕ್ಷಮೆ ಕೇಳುವಂತೆ ಹೇಳುತ್ತಿದ್ದಾರೆ. ಶ್ರಮಿಕ ವರ್ಗದ ಶ್ರಮದ ಬಗ್ಗೆ ಆ ವೃತ್ತಿಯ ಬಗ್ಗೆ ವ್ಯಂಗ್ಯ, ಕುಹಕ ಮಾತನಾಡಿರುವ ಗಗನಾ, ಆಕೆಗೆ ಉತ್ತೇಜನ ನೀಡುವಂತೆ ಮಾತನಾಡಿದ ನಟ ರಮೇಶ್ ಅರವಿಂದ್, ತೀರ್ಪುಗಾರರಾದ ಪ್ರೇಮಾ, ನಿರೂಪಕಿ ಅನುಶ್ರೀ, ನಿರ್ಮಾಪಕ ರಾಘವೇಂದ್ರ ಹುಣಸೂರು ಹಾಗೂ ನಿರ್ದೇಶಕರ ವಿರುದ್ದ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮೆಕ್ಯಾನಿಕ್ ಸಂಘದವರು ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ, ಶ್ರಮಿಕರನ್ನು ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ದಸಂದ ತಾಲ್ಲೂಕು ಸಂಚಾಲಕ ಸಿ. ಎಲ್ ಲಿಂಗದೇವರು, ಸಂಘದ ಅಧ್ಯಕ್ಷ ನಿಸಾರ್ ಅಹಮದ್, ಕಾರ್ಯದರ್ಶಿ ಮೋಮಿನ್, ನಿರ್ದೇಶಕ ಚಂದ್ರು, ಯೋಗೀಶ್ ಸೇರಿದಂತೆ ಹಲವರು ಈ ವೇಳೆ ಸ್ಥಳದಲ್ಲಿ ಹಾಜರಿದ್ದರು. ವಾಹಿನಿಯವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.
ಈ ರಿಯಾಲಿಟಿ ಶೋಗೆ ರಾಜ್ಯಾದ್ಯಂತ ಆಡಿಷನ್ ನಡೆದಿತ್ತು. ಫೈನಲ್ ರೌಂಡ್ನಲ್ಲಿ ಶಿರಸಿ, ಚಿತ್ರದುರ್ಗ, ಮಂಗಳೂರು, ಮೈಸೂರು, ಚಿಕ್ಕಮಗಳೂರಿನ ತರಿಕೆರೆ, ಬೆಂಗಳೂರು, ಶಿವಮೊಗ್ಗದ ತೀರ್ಥಹಳ್ಳಿ, ದಾವಣಗೆರೆಯ ಹೊನ್ನಾಳಿ, ರಾಜಸ್ಥಾನದ ಪ್ರತಿಭೆಗಳು ವೇದಿಕೆ ಏರಿ ತಮ್ಮ ಪ್ರತಿಭೆ ಪ್ರದರ್ಶಿಸಿ ಅವಕಾಶ ಪಡೆದಿದ್ದರು. ಚಿತ್ರದುರ್ಗದ ಗಗನಾ ಬಾರಿ ತಮ್ಮ ಉತ್ತಮ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಸ್ಪಾಟ್ನಲ್ಲೇ ಸಣ್ಣ ಸ್ಕಿಟ್ ಸಿದ್ಧಪಡಿಸಿಕೊಂಡು, ಡೈಲಾಗ್ಸ್ ಬರೆದುಕೊಂಡು ಗಗನಾ ಗಮನ ಸೆಳೆಯುತ್ತಿದ್ದಾರೆ. ಅಂಬಾನಿ ಮನೆ ಮದುವೆ ಸಂಭ್ರಮದಲ್ಲಿದ್ದೀರಾ, ಅಲ್ಲಿನ ವಾತಾವರಣ ವಿವರಿಸಿ ಎಂದಾಗ ಕೆಲವೇ ಕ್ಷಣಗಳಲ್ಲಿ ಡೈಲಾಗ್ಸ್ ಬರೆದುಕೊಂಡು ನಟಿಸಿದ್ದರು. ಶೋನಲ್ಲಿ ಇದ್ದ ಎಲ್ಲರೂ ಆಕೆಯ ನಟನೆಗೆ ಬಹುಪರಾಕ್ ಎಂದಿದ್ದರು. ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಆಕೆಯ ಪ್ರತಿಭೆಗೆ ತೀರ್ಪುಗಾರರಾದ ತರುಣ್ ಸುಧೀರ್ ಅಡ್ವಾನ್ಸ್ ಕೊಟ್ಟು ಭೇಷ್ ಎಂದಿದ್ದರು.


Click it and Unblock the Notifications











