ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ವಿರುದ್ಧದ ದೂರು ಹಿಂತೆಗೆತ
ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಹಾಗೂ ಗೆಳೆಯರ ಮೇಲೆ ನೀಡಲಾಗಿದ್ದ ದೂರನ್ನು ಶಿಕ್ಷಕಿ ಮಂಗಳಾ ಹಿಂಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತೇಶ್ ತಮ್ಮ ಪಕ್ಕದ ಮನೆಯಲ್ಲಿ ಕೆಲಸ ಮಾಡುವ ಮಹಿಳೆಗೆ ಕ್ಷುಲ್ಲಕ ಕಾರಣಕ್ಕೆ ಹೊಡೆದಿದ್ದ. ಅವರ ಸೀರೆ ಎಳೆದು ರಂಪಾಟ ಮಾಡಿದ್ದ. ಅದರ ವಿರುದ್ಧ ಮಹಿಳೆ ಮಂಜುಳಾ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಾದ ಬಳಿಕ ಸ್ನೇಹಿತೇಶ್ ಅನ್ನು ಬಂಧಿಸಿರಲಿಲ್ಲ. ನಂತರ ಪೊಲೀಸ್ ಆಯುಕ್ತ ಕಮಲ್ ಪಂಥ್ ಇಂದ ಒತ್ತಡ ಬಂದ ಬಳಿಕ ಸ್ನೇಹಿತೇಶ್ ಮನೆಗೆ ಧಾವಿಸಿದ ಪೊಲೀಸರು ನೋಟಿಸ್ ನೀಡಿದ್ದರು. ನಂತರ ಸ್ನೇಹಿತೇಶ್ ಮನೆಯ ಸೆಕ್ಯೂರಿಟಿ ಗಾರ್ಡ್ ಬಾಲಾಜಿ ಎಂಬುವನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಇದೀಗ ದೂರು ನೀಡಿದ್ದ ಮಂಜುಳಾ ದೂರನ್ನು ಹಿಂಪಡೆದಿದ್ದು, ಸ್ನೇಹಿತೇಶ್ ಕುಟುಂಬದೊಂದಿಗೆ ರಾಜಿ-ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದೂರು ಹಿಂಪಡೆದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮಂಜುಳಾ, ''ನನಗೆ ದೊಡ್ಡೋರು ಬುದ್ಧಿ ಹೇಳಿದ್ದಾರೆ. ನಾನು ಈ ನಾಲ್ಕೈದು ದಿವಸ ಮಾಡಿರುವುದೇ ಆ ಹುಡುಗನಿಗೆ ಬುದ್ಧಿ ಬಂದಿರುತ್ತದೆ. ಮತ್ತೆ ಆ ಹುಡುಗ ಹೀಗೆ ಮಾಡುವುದಿಲ್ಲ. ನೀನು ದೊಡ್ಡ ಮನಸ್ಸಿನಿಂದ ಯೋಚಿಸು' ಎಂದು ಹೇಳಿದ್ದಾರೆಂದಿದ್ದಾರೆ.
''ಅವರ ತಂದೆಯೂ ನನ್ನ ಬಳಿ ಬಂದು ಮನವಿ ಮಾಡಿಕೊಂಡಿದ್ದಾರೆ. ನಾನು ಸಹ ಸಾವಿರಾರು ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯಾಗಿ ಯುವಕನೊಬ್ಬನ ಭವಿಷ್ಯ ಹಾಳು ಮಾಡುವುದು ಸರಿಯಲ್ಲವೆಂದು ಯೋಚಿಸಿ ದೂರು ಹಿಂಪಡೆದಿದ್ದೇನೆ. ಇನ್ನು ಮುಂದೆ ನನ್ನ ಮಗನಿಂದ ಎಂದೂ, ಎಲ್ಲಿಯೂ ಈ ರೀತಿಯ ಸಮಸ್ಯೆ ಆಗುವುದಿಲ್ಲವೆಂದು ಮಾತು ನೀಡಿದ್ದಾರೆ'' ಎಂದಿದ್ದಾರೆ.
ದೂರು ನೀಡಿದ ಬಳಿಕ ಸ್ನೇಹಿತೇಶ್ ವಿರುದ್ಧ ರುದ್ರೆಯಾಗಿದ್ದ ಇದೇ ಮಂಜುಳಾ ಈಗ ಅವನೂ ನನ್ನ ಮಗನಂತೆ ಎಂದಿದ್ದು, ''ಆ ಹುಡುಗನ ತಂದೆ ತೋರಿಸಿದ ವಿಡಿಯೋದಲ್ಲಿ ಸ್ನೇಹಿತೇಶ್ ಹೊಡೆದೇ ಇಲ್ಲ'' ಎಂದಿದ್ದಾರೆ. ''ಆ ಹುಡುಗ ಅವತ್ತು ಜಗಳ ಬಿಡಿಸಲು ಬಂದಿದ್ದ ಎಂದು ಅವರ ತಂದೆ ಜಗದೀಶ್ ಹೇಳಿದ್ದಾರೆ. ವಿಡಿಯೋವನ್ನು ತೋರಿಸಿದ್ದಾರೆ. ಹಾಗಾಗಿ ನಾನು ಸಹ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದೇನೆ. ಆ ವಿಡಿಯೋಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಅವರು ಜಗಳ ಬಿಡಿಸಲು ಅಲ್ಲಿಗೆ ಬಂದಿದ್ದರಂತೆ'' ಎಂದಿದ್ದಾರೆ ಮಂಜುಳಾ. ಆ ಮೂಲಕ ಸ್ನೇಹಿತೇಶ್ ಹಾಗೂ ಗೆಳೆಯರು ಹಲ್ಲೆಯನ್ನೇ ಮಾಡಿಲ್ಲ ಬದಲಿಗೆ ಜಗಳ ಬಿಡಿಸಲು ಬಂದಿದ್ದಾರೆ ಎಂದು ಪ್ರಕರಣವನ್ನೇ ತಿರುಗಿಸಿದ್ದಾರೆ ಮಂಜುಳಾ.
''ನಾನು ದೂರನ್ನು ವಾಪಸ್ ಪಡೆದಿಲ್ಲ'' ಎಂದಿರುವ ಮಂಜುಳಾ, ''ಸ್ನೇಹಿತೇಶ್ ಹಾಗೂ ಆತನ ಸಹೋದರಿ ಹಲ್ಲೆ ಮಾಡಿಲ್ಲ, ಆದರೆ ಉಳಿದ ಬೌನ್ಸರ್ಗಳು ಹೊಡೆದಿದ್ದಾರೆ ಅವರು ಹಲ್ಲೆ ಮಾಡಿದ್ದಾರೆ. ಅಂದಿನಿಂದ ಇಂದಿನ ವರೆಗೆ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಅದರ ಬಗ್ಗೆ ಗಮನ ಹರಿಸಿ ಎಂದು ಪೊಲಿಸರಿಗೆ ಹೇಳಲು ಬಂದಿದ್ದೇನೆ ಅಷ್ಟೆ'' ಎಂದು ಮಾಧ್ಯಮಗಳ ಬಳಿ ಹೇಳಿದ್ದಾರೆ ಮಂಜುಳಾ.
''ನನಗೂ ಆರೋಗ್ಯ ಸರಿಯಿಲ್ಲ. ಇಷ್ಟೋಂದು ದೊಡ್ಡವರ ಮೇಲೆ ಪ್ರಕರಣ ದಾಖಲಿಸಿ ಅದರ ಒತ್ತಡ ಸಹಿಸಲು ಆಗುವುದಿಲ್ಲ. ದೊಡ್ಡವರ ಮೇಲೆ ಪ್ರಕರಣ ದಾಖಲಿಸಿ ಪ್ರಚಾರ ಪಡೆಯಬೇಕೆಂಬ ಹಪಹಪಿ ನನಗಿಲ್ಲ. ಆ ಉದ್ದೇಶದಿಂದ ನಾನು ದೂರು ನೀಡಿರಲಿಲ್ಲ. ಪ್ರಕರಣ ನಡೆದು ಐದು ದಿನವಾಯ್ತು. ಇದು ಬಹಳ ದೊಡ್ಡ ಸಮಯ. ಅವರು ನನ್ನ ಬಳಿ ಬಂದು ಕ್ಷಮೆ ಕೇಳಿ ಮುಂದೆ ಹೀಗೆ ಆಗುವುದಿಲ್ಲವೆಂದು ವಚನ ನೀಡಿದ್ದಾರೆ. ಇದೇ ಕೆಲವನ್ನು ಅವರು ಮುಂಚೆಯೇ ಮಾಡಿಬಿಟ್ಟಿದ್ದರೆ ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಮೇಯವೇ ಬರುತ್ತಿರಲಿಲ್ಲ'' ಎಂದಿದ್ದಾರೆ ಮಂಜುಳಾ.


Click it and Unblock the Notifications











