ನಟ ವಿನೋದ್ ಪ್ರಭಾಕರ್ ನಿವಾಸಕ್ಕೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ
ರಾಜರಾಜೇಶ್ವರಿ ನಗರ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿರುವ ಆರ್ ಆರ್ ನಗರ ಚುನಾವಣೆಯಲ್ಲಿ ಸಿನಿಮಾ ಸ್ಟಾರ್ಸ್ ಸಹ ಭಾಗಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಕನ್ನಡದ ಸ್ಟಾರ್ ನಟರು ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಬೆನ್ನಲ್ಲೆ ಕಾಂಗ್ರೆಸ್ ಪಾಳಯದಲ್ಲೂ ಅಂತಹದೊಂದು ಬೆಳವಣಿಗೆ ಕಂಡು ಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರ್ ಆರ್ ನಗರದಲ್ಲಿರುವ ಸಿನಿಮಾ ಕಲಾವಿದರ ಮನೆಗೆ ಭೇಟಿ ನೀಡಿ ಕುತೂಹಲ ಕೆರಳಿಸುತ್ತಿದ್ದಾರೆ.

ಆರ್ ಆರ್ ನಗರದಲ್ಲಿ ವಿನೋದ್ ಪ್ರಭಾಕರ್ ನಿವಾಸಕ್ಕೆ ಇಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಭೇಟಿ ನೀಡಿದ್ದು, ಪ್ರಭಾಕರ್ ಮನೆಯಲ್ಲಿಯೇ ಭೋಜನ ಸಹ ಸವಿದರು. ಈ ಭೇಟಿ ಹಿಂದಿನ ಅಸಲಿ ಕಾರಣ ಏನು ಎಂಬುದು ತಿಳಿದಿಲ್ಲ ಆದರೂ ಚುನಾವಣೆ ಸಮಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಳೆದ ವಾರ ನಟ ನೆನಪಿರಲಿ ಪ್ರೇಮ್ ಅವರ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ನಾಗರಭಾವಿಯಲ್ಲಿರುವ ಪ್ರೇಮ್ ನಿವಾಸಕ್ಕೆ ಡಿಕೆಶಿ ಹೋಗಿದ್ದರು. ಆಗಲೂ ಇದು ಚುನಾವಣೆ ಉದ್ದೇಶಕ್ಕಾಗಿ ಎಂದು ಹೇಳಲಾಗಿತ್ತು.


Click it and Unblock the Notifications











