'ಸೈನಿಕ' ಹೆಣೆದ 'ಚಕ್ರವ್ಯೂಹ' ಭೇದಿಸುವಲ್ಲಿ ವಿಫಲವಾದ 'ಅಭಿಮನ್ಯು', 'ನಿಖಿಲ್' ಎದುರು 'ಸಿಪಿವೈ' ಗೆಲ್ಲಲು 'ಕಾರಣ'ಗಳೇನು..?
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ. ಇದಕ್ಕೆ ಒಂದು ಉದಾಹರಣೆ ಗಂಧದಗುಡಿಯ ಸೈನಿಕ ಸಿಪಿ ಯೋಗೇಶ್ವರ್.
ಹೌದು, ಹೆಚ್ಚೇನ್ ಇಲ್ಲ. ಎರಡೂವರೆ ವರ್ಷದ ಹಿಂದೆ.. ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ದ ಸೋಲು ಕಂಡಿದ್ದ ಸೈನಿಕ ಯೋಗೇಶ್ವರ್ ಈ ಬಾರಿಯ ಉಪಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಸಿ.ಪಿ.ಯೋಗೇಶ್ವರ್ಗೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವಂತೆ ಎಚ್.ಡಿ.ಕುಮಾರಸ್ವಾಮಿ ಅವರು ಆಫರ್ ಕೂಡ ನೀಡಿದ್ದರು. ಇದಕ್ಕೆ ಕೇಂದ್ರ ನಾಯಕರು ಸಹ ಒಪ್ಪಿಗೆ ಸೂಚಿಸಿದ್ದರು. ಆದರೆ, ಪ್ರತಿಕಾರದ ಜ್ವಾಲೆಯಲ್ಲಿ ಬೇಯುತ್ತಿದ್ದ ಸಿ.ಪಿ.ಯೋಗೇಶ್ವರ್ ಈ ಆಫರ್ ತಿರಸ್ಕರಿಸಿದ್ದರು. ತಮ್ಮ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಆ ನಂತರ ಅದೇನಾಯ್ತೋ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿಪಿವೈ ಘರ್ ವಾಪಸಿ ಮಾಡಿದರು. ತಮ್ಮ ಮಾತೃ ಪಕ್ಷ ಸೇರಿಕೊಂಡಿದ್ದರು. ಕುಮಾರಣ್ಣನ ಕುಮಾರ ಕಂಠೀರವ ನಿಖಿಲ್ ಗೆ ಸವಾಲು ಹಾಕಿ ತೊಡೆ ತಟ್ಟಿದ್ದರು.

ನಿಜಾ. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಸಹಜ. ಚನ್ನಪಟ್ಟಣದಲ್ಲಿ ಲೋಕಸಭೆ ಚುನಾವಣೆಯಲ್ಲಿ 85 ಸಾವಿರ ಮತಗಳು ಬಂದಿದ್ದವು. ನಾನು ಹಾಗೂ ಕಾಂಗ್ರೆಸ್ ನಾಯಕರು ಚನ್ನಪಟ್ಟಣದಲ್ಲಿ ಸತತವಾಗಿ ಸಂಘಟನೆ ಮಾಡಿದ್ದೇವೆ. ಕ್ಷೇತ್ರದಲ್ಲಿ ನಮ್ಮ ಕಾಲು ಮೇಲೆ ನಿಂತುಕೊಳ್ಳುವ ಶಕ್ತಿ ತಂದು ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು.
ಇಂಥಾ ಸಿ.ಪಿ.ಯೋಗೇಶ್ವರ್ ಹೆಣೆದ ಚಕ್ರವ್ಯೂಹವನ್ನು ಭೇದಿಸುವಲ್ಲಿ ಈ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಮತದಾರ ಪ್ರಭು ಆದೇಶದ ಮೇರೆಗೆ ಸಿ.ಪಿ.ಯೋಗೇಶ್ವರ್ ಮುಂದೆ ತಲೆ ಬಾಗಿದ್ದಾರೆ. ಈ ಮೂಲಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎರಡೂವರೆ ವರ್ಷದ ಹಿಂದಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಭರ್ಜರಿಯಾಗಿ ಗೆದ್ದು ಬೊಂಬೆ ನಗರಿ ಚನ್ನಪಟ್ಟಣದಲ್ಲಿ ರಣಕೇಕೆಯನ್ನು ಕೂಡ ಕನ್ನಡ ಚಿತ್ರರಂಗದ ಅಂದಕಾಲತ್ತಿಲ್ನ ಸೈನಿಕ ಸಿ.ಪಿ.ಯೋಗೇಶ್ವರ್ ಹಾಕಿದ್ದಾರೆ. ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ 25.413 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗಾರಿ ಬಾರಿಸಿದ್ದಾರೆ.
ಇನ್ನುಳಿದಂತೆ ಈ ಹಿಂದೆ ಮಂಡ್ಯದಲ್ಲೊಮ್ಮೆ, ರಾಮನಗರದಲ್ಲೊಮ್ಮೆ ಸೋಲನ್ನು ಅನುಭವಿಸಿದ್ದ ನಿಖಿಲ್ ಮೂರನೇ ಬಾರಿ ಸೋಲನ್ನು ಕಂಡಿದ್ದಾರೆ. ಸೋಲಿನ ಆತ್ಮವಲೋಕನ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಸಿಪಿವೈಗೆ ಪ್ರಬಲ ಒಕ್ಕಲಿಗ ಸಮಾಜದ ಬೆಂಬಲ, ಒಕ್ಕಲಿಗ ನಾಯಕರಾದ ಡಿಕೆ ಸಹೋದರರ ಬೆಂಬಲ ಆನೆ ಬಲ ತುಂಬಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ. ಸಿಪಿ ಯೋಗೇಶ್ವರ್ ಪರ ಡಿಕೆ ಸುರೇಶ್- ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಅಬ್ಬರದ ಪ್ರಚಾರ ನಿಖಿಲ್ ಕುಮಾರ ಸ್ವಾಮಿಯನ್ನು ಹಿಂದಿಕ್ಕುವಲ್ಲಿ ಸಹಕಾರಿಯಾಯ್ತು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಇನ್ನೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಅಂತಿಮಕ್ಕೆ ವಿಳಂಬ ಮಾಡಿದ್ದೂ, ಕೊನೇ ಕ್ಷಣದಲ್ಲಿ ಸಿಪಿವೈ ಪಕ್ಷಾಂತರ ಮಾಡುವಂತಾಗಿದ್ದು . ಪ್ರತಿಷ್ಠೆಯಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿ ನಿಲ್ಲುವಂತಾಗಿದ್ದು, ಎಲ್ಲವನ್ನೂ ಈಗ ಅನೇಕರು ಪರಿಗಣಿಸುತ್ತಿದ್ದಾರೆ. ಚನ್ನಪಟ್ಟಣ ಅಭಿವೃದ್ಧಿಗೆ ಹಲವಾರು ಯೋಜನೆಗಳ ಸರ್ಕಾರ ಘೋಷಣೆ ಮಾಡಿದ್ದು, ಆಡಳಿತ ಪರ ಅಲೆಯಿಂದ ಗೆಲುವಿಗೆ ಪ್ರಬಲ ಬೆಂಬಲವಾಯಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.ಕುಮಾರಸ್ವಾಮಿ ಈ ಹಿಂದೆ ಶಾಸಕರಾಗಿದ್ದರೂ ಕೂಡಾ ಅಭಿವೃದ್ಧಿ ಕೆಲಸ ಮಾಡದ ಕಾರಣ, ಸ್ಥಳೀಯವಾಗಿ ಯೋಗೇಶ್ವರ್ ಕೆಲಸಕ್ಕೆ ಜನರ ಬೆಂಬಲ ವ್ಯಕ್ತವಾಗಿದೆ ಎಂದು ಚನ್ನಪಟ್ಟಣದ ಜನ ಮಾತನಾಡುತ್ತಿದ್ದಾರೆ.


Click it and Unblock the Notifications











