ದರ್ಶನ್ ಹುಟ್ಟುಹಬ್ಬದ ವೇಳೆ ಪೊಲೀಸ್ ಪೇದೆಗೆ ಹಲ್ಲೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ
ನಟ ದರ್ಶನ್ ಹುಟ್ಟುಹಬ್ಬದ ವೇಳೆ ನಡೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈಗಾಗಲೇ ದರ್ಶನ್ ಪಕ್ಕದ ಮನೆಯವರು ದೂರು ನೀಡಿದ್ದು, ಮತ್ತೊಂದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹುಟ್ಟುಹಬ್ಬದ ದಿನ ದರ್ಶನ್ ಮನೆ ಬಳಿ ಇದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಲಾಗಿದೆ.
Recommended Video
ಜ್ಞಾನಭಾರತಿ ಠಾಣೆಯ ಕಾನ್ಸ್ ಸ್ಪೆಬಲ್ ಡಿ ಆರ್ ದೇವರಾಜ್ ಹಲ್ಲೆಗೆ ಒಳಗಾದ ಪೊಲೀಸ್ ಪೇದೆಯಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗಿದ್ದು, ದರ್ಶನ್ ಅಭಿಮಾನಿಗಳೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೇವರಾಜ್ ಆರೋಪ ಮಾಡಿದ್ದಾರೆ.

ಫೆಬ್ರವರಿ 15 ರಂದು ರಾತ್ರಿ
ದೇವರಾಜ್ ಕಳೆದ ಒಂದುವರೆ ವರ್ಷಗಳಿಂದ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಫೆಬ್ರವರಿ 15 ರಂದು ದರ್ಶನ್ ಹುಟ್ಟುಹಬ್ಬದ ನಿಮಿತ್ತ ಆರ್ ಆರ್ ನಗರದ ಅವರ ಮನೆ ಮುಂದೆ ನೇಮಿಸಲಾಗಿತ್ತು. ದರ್ಶನ್ ನೋಡಲು ರಾತ್ರಿ ಅವರ ಮನೆ ಬಳಿ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಈ ವೇಳೆ ಸರಿಯಾದ ವ್ಯವಸ್ಠೆ ಮಾಡದೆ ಇರುವ ಕಾರಣ, ನೂಕು ನುಗ್ಗಲು ಉಂಟಾಯಿತು ಎಂದು ದೇವರಾಜ್ ಆರೋಪಿಸಿದ್ದಾರೆ.

ಮೂಗು ಹಾಗೂ ಕಣ್ಣಿಗೆ ಹೊಡೆತ
ದರ್ಶನ್ ಮನೆ ಬಳಿ ಇದ್ದ ಸಾಕಷ್ಟು ಸಂಖ್ಯೆಯ ಜನರನ್ನು ನಿಯಂತ್ರಿಸುವ ಕೆಲಸವನ್ನು ದೇವರಾಜ್ ಮಾಡುತ್ತಿದ್ದರು. ಈ ವೇಳೆ ಅವರ ಮೂಗಿಗೆ ಯಾರೋ ಬಂದು ಜೋರಾಗಿ ಹೊಡೆದಿದ್ದಾರೆ. ಕಣ್ಣು ಹಾಗೂ ಮೂಗಿಗೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತ ಸೋರಿಕೆ ಆಗಿದೆ. ಹೀಗಾಗಿ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ
ಈಗಾಗಲೇ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ದರ್ಶನ್ ಹುಟ್ಟುಹಬ್ಬ ಆಯೋಜನೆ ಮಾಡಿದ್ದ ಆಯೋಜಕರು ಹಾಗೂ ಕೆಲವು ಅಭಿಮಾನಿಗಳು ಸೇರಿ ಈ ರೀತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲಾಗಿದೆ. ಅಪರಾಧ ಸಂಚು (ಐಪಿಸಿ 34) ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಪಕ್ಕದ ಮನೆಯವರಿಂದ ದೂರು
ಆರ್ ಆರ್ ನಗರದ ದರ್ಶನ್ ನಿವಾಸದ ಪಕ್ಕದ ಮನೆಯವರು ಕೂಡ ಹುಟ್ಟುಹಬ್ಬದಂದು ನಡೆದ ಘಟನೆ ಬಗ್ಗೆ ದೂರು ನೀಡಿದ್ದಾರೆ. ಹುಟ್ಟುಹಬ್ಬದಂದು ಭಾರಿ ಸಂಖ್ಯೆಯ ಜನ ಸೇರಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿಯಿತು. ಈ ವೇಳೆ ತಮ್ಮ ಕಾರ್ 40 ಸಾವಿರ ಮೌಲ್ಯದಷ್ಟು ಹಾನಿಯಾಗಿದೆ. ಎಂದು ರಾಮಪ್ರಸಾದ್ ದೂರು ನೀಡಿದ್ದಾರೆ.


Click it and Unblock the Notifications











