ದರ್ಶನ್ ಹಾಸಿಗೆ ದಿಂಬು ಆದೇಶ ಮುಂದೂಡಿಕೆ; ಆರೋಪಿಗಳನ್ನು ಖುದ್ದು ಹಾಜರುಪಡಿಸುವಂತೆ ಕೋರ್ಟ್ ಸೂಚನೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹಾಸಿಗೆ, ದಿಂಬು ಕೇಳಿ ದರ್ಶನ್ ವಕೀಲರ ಮೂಲಕ ಕೋರ್ಟ್ ಮೊರೆ ಹೋಗಿದ್ದರು. ಜೈಲಿನ ಕೈಪಿಡಿಯಂತೆ ಸೌಲಭ್ಯ ಒದಗಿಸುವಂತೆ ಕೋರ್ಟ್ ಹೇಳಿತ್ತು. ಕೋರ್ಟ್ ಆದೇಶದ ಬಳಿಕ ಕೂಡ ಸೌಲಭ್ಯ ಸಿಕ್ಕಿಲ್ಲ ಎಂದು ಆರೋಪಿಸಲಾಗಿತ್ತು. ಅದಕ್ಕೆ ಸಂಬಂಧ ಆದೇಶವನ್ನು ಸೆ. 25ಕ್ಕೆ ಕೋರ್ಟ್ ಮುಂದೂಡಿದೆ.
ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ನಟ ದರ್ಶನ್ ಸೇರಿ ಇತರೆ ಆರೋಪಿಗಳು ಆಗಸ್ಟ್ 14ರಂದು ಮತ್ತೆ ಜೈಲು ಸೇರುವಂತಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂ ಕೋರ್ಟ್ನಲ್ಲಿ ವಜಾ ಆಗಿತ್ತು. ಜೈಲಿನಲ್ಲಿ ದರ್ಶನ್ ನರಕಯಾತನೆ ಅನುಭವಿಸುತ್ತಿದ್ದು ಸರಿಯಾಗಿ ಹಾಸಿಗೆ ದಿಂಬು ಇಲ್ಲದೇ ಸಂಕಷ್ಟ ಪಡುವಂತಾಗಿದೆ. ದರ್ಶನ್ ಪರ ವಕೀಲರು ಹಾಸಿಗೆ, ದಿಂಬು ಮತ್ತು ಕಂಬಳಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿರ್ದೇಶನ ನೀಡುವಂತೆ ಕೋರಿ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು.

ಕಳೆದ ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರ ಎದುರು ದರ್ಶನ್ ತಮ್ಮ ನೋವು ತೋಡಿಕೊಂಡಿದ್ದರು. "ಜೈಲಿನಲ್ಲಿ ಯಾವುದೇ ಮೂಲಸೌಲಭ್ಯ ಕೊಡುತ್ತಿಲ್ಲ. ಬ್ಯಾರಕ್ನಿಂದ ಹೊರಗೆ ಓಡಾಡಲು ಆಗುತ್ತಿತ್ತು. ಸೂರ್ಯನ ಬಿಸಿಲು ಮೈಮೇಲೆ ಬೀಳದೇ ಕೈಯಲ್ಲಿ ಫಂಗಸ್ ಕಾಣಿಸಿಕೊಂಡಿದೆ. ನನಗೆ ಮಾತ್ರ ವಿಷ ಕೊಟ್ಟುಬಿಡಿ" ಎಂದು ದರ್ಶನ್ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು.
ವಿಚಾರಣೆ ಬಳಿಕ ಜೈಲಿನ ಕೈಪಿಡಿಯಂತೆ ಹಾಸಿಗೆ, ದಿಂಬು ಸೇರಿ ಮೂಲಭೂತ ಸೌಕರ್ಯ ಒದಗಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ನ್ಯಾಯಾಲಯ ಆದೇಶ ನೀಡಿದ ಬಳಿಕ ಕೂಡ ಆರೋಪಿ ದರ್ಶನ್ಗೆ ಜೈಲಿನಲ್ಲಿ ದಿಂಬು, ಹಾಸಿಗೆ ನೀಡಿಲ್ಲ ಎಂದು ಆರೋಪಿಸಿ 27ನೇ ಸಿಸಿಎಚ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯದ ಆದೇಶ ಇದ್ದರೂ ಜೈಲಿನ ಅಧಿಕಾರಿಗಳು ಅದನ್ನು ಲಘುವಾಗಿ ಪರಿಗಣಿಸಿದ್ದಾರೆ. ದರ್ಶನ್ ಅವರಿಗೆ ಹಿಂಸೆ ನೀಡಲಾಗುತ್ತಿದೆ" ಎಂದು ಅವರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ಜೈಲಿನ ಕೈಪಿಡಿಯಂತೆ ಆರೋಪಿ ದರ್ಶನ್ಗೆ ಎಲ್ಲಾ ಸೌಲಭ್ಯ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಸೌಲಭ್ಯ ನೀಡಿಲ್ಲ. ಈಗ ಕ್ವಾರಂಟೈನ್ ಸೆಲ್ ವ್ಯವಸ್ಥೆ ಇಲ್ಲ. 1 ಗಂಟೆ ಸಮಯ ವಾಕಿಂಗ್ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಿವರಣೆ ನೀಡಿದ್ದರು. ಇಂದು(ಸೆಪ್ಟೆಂಬರ್ 23) ಆದೇಶ ಹೊರಬೀಳಬೇಕಿತ್ತು. ಆದರೆ ಸೆಪ್ಟೆಂಬರ್ 25ಕ್ಕೆ ಮುಂದೂಡಿದ್ದು ಪ್ರಕರಣದ 7 ಆರೋಪಿಗಳು ಅಂದು ಖುದ್ದಾಗಿ ಕೋರ್ಟ್ಗೆ ಹಾಜರು ಪಡಿಸುವಂತೆ ಸೂಚಿಸಲಾಗಿದೆ. ಅದೇ ದಿನ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಯಾಗಲಿದೆ.


Click it and Unblock the Notifications











