ಜಗ್ಗುದಾದಾ ಡೈರೆಕ್ಟರ್ VS ಧ್ರುವ ಸರ್ಜಾ ; ಆಕ್ಷನ್ ಪ್ರಿನ್ಸ್ಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್
ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ವರ್ಷಕ್ಕೊಂದು ಚಿತ್ರ ಮಾಡ್ತಾರೆ ಅನ್ನುವ ಪ್ರೀತಿ ತುಂಬಿದ ತಕರಾರೊಂದು ಇವರ ಅಭಿಮಾನಿಗಳಲ್ಲಿದೆ. ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಇವರ ಭಕ್ತಗಣ ಮೇಲಿಂದ ಮೇಲೆ ಮನವಿ ಪತ್ರವನ್ನೂ ಸಲ್ಲಿಸಿದ್ದು ಇದೆ. ಧ್ರುವ ಕೂಡ ತಮ್ಮ VIP ಬಣದಿಂದ ಬಂದ ಈ ಮನವಿ ಪತ್ರವನ್ನ ಗಂಭೀರವಾಗಿ ಪರಿಗಣಿಸಿ ಕೆಲಸಕ್ಕೆ ಇಳಿದಿದ್ದಾರೆ ಕೂಡ.
ಆದರೂ ಅದ್ಯಾಕೋ.. ಈ ತ್ರೈವಾರ್ಷಿಕ ಯೋಜನೆ ಮಾತ್ರ ಧ್ರುವ ಸರ್ಜಾ ಅವರನ್ನ ನೆರಳಿನಂತೆ ಹಿಂಬಾಲಿಸುತ್ತಾನೇ ಇದೆ. ಇದಕ್ಕೆ ಪೂರಕವಾಗಿ ಧ್ರುವ ಅಭಿನಯದ ''ಕೆಡಿ'' ಮುಹೂರ್ತ ಭಾಗ್ಯ ಕಂಡು ಮೂರುವರೆ ವರ್ಷಗಳಾಗಿವೆ. ಆದರೂ ಬಿಡುಗಡೆಯ ಭಾಗ್ಯ ಮಾತ್ರ ಇನ್ನೂ ಸಿಕ್ಕಿಲ್ಲ.

ಇಂಥಾ ಧ್ರುವಾ ಸರ್ಜಾ ಅವರ ವಿರುದ್ಧ ಕಳೆದ ಆಗಸ್ಟ್ನಲ್ಲಿ ''ಜಗ್ಗುದಾದಾ'' ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಕೆರಳಿ ಕೆಂಡವಾಗಿದ್ದರು. ಸಿನಿಮಾ ಮಾಡುವುದಾಗಿ ಹೇಳಿ 3.10 ಕೋಟಿ ಹಣವನ್ನು ಕೂಡ ಪಡೆದು 2018ರಿಂದ ಧ್ರುವಾ ನನ್ನನ್ನೂ ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿದ್ದಾರೆ ಎಂದು ಗುಡುಗಿದ್ದರು. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 316(2) (ಅಪರಾಧಿ ನಂಬಿಕೆ ಉಲ್ಲಂಘನೆ) ಮತ್ತು 318(4) (ವಂಚನೆ ಹಾಗೂ ಆಸ್ತಿ ಹಸ್ತಾಂತರಕ್ಕೆ ಅಪ್ರಾಮಾಣಿಕ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಹೀಗೆ ಧ್ರುವ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ಧ್ರುವ ಸರ್ಜಾ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದರು. 2018 ರಲ್ಲಿ ರಾಘವೇಂದ್ರ ಹೆಗಡೆ ಅವರು ''ಸೋಲ್ಜರ್'' ಚಿತ್ರವನ್ನು ಮಾಡಲು ಮುಂದಾಗಿದ್ದು ನಿಜಾ. ಅಡ್ವಾನ್ಸ್ ಹಣ ನೀಡಿದ್ದು ಕೂಡ ನಿಜಾ ಎಂದು ಹೇಳಿದ್ದರು. ಆದರೆ.. ಆ ಸಮಯದಲ್ಲಿ ರಾಘವೇಂದ್ರ ಹೆಗಡೆ ಈ ಚಿತ್ರವನ್ನು ಬೇರೆ ಭಾಷೆಗಳಲ್ಲಿ ಮಾಡಲು ಬಯಸಿದ್ದರು. ಆಗ ಧ್ರುವಾ ಕನ್ನಡಕ್ಕೆ ಆಧ್ಯತೆಯನ್ನು ಕೊಡುವಂತೆ ಹೇಳಿದ್ದರು ಎಂದು ಹೇಳಿದ್ದ ಧ್ರುವ ಸರ್ಜಾ ಅವರ ಮ್ಯಾನೇಜರ್ ಕಥೆ ರೆಡಿ ಮಾಡಿಕೊಂಡು ಬಂದು ಮತ್ತೆ ಸಿಗುವುದಾಗಿ ಹೇಳಿ ಹೋದವರು ಆ ನಂತರ ನಮ್ಮ ಕೈಗೆ ಸಿಗಲಿಲ್ಲ ಎಂದು ಹೇಳಿದ್ದರು. ಈಗ ನೋಡಿದರೆ ನ್ಯಾಯಾಲಯದಿಂದ ನೊಟೀಸ್ ಕಳಿಸಿದ್ದಾರೆ. ಅದಕ್ಕೆ ನಾವು ಕೂಡ ನ್ಯಾಯಾಲಯದ ಮೂಲಕವೇ ಉತ್ತರ ನೀಡುತ್ತೇವೆ ಎಂದು ಕೂಡ ಹೇಳಿದ್ದರು.
ಇದರ ನಂತರ ಧ್ರುವ ಸರ್ಜಾ ಪರ ವಕೀಲರು ಮುಂಬೈ ಹೈಕೋರ್ಟ್ನ ಮೊರೆ ಹೋಗಿದ್ದರು. ಹೀಗಾಗಿ ಇಂದು (ಸೆಪ್ಟೆಂಬರ್10) ಪ್ರಕರಣದ ವಿಚಾರಣೆಯನ್ನು ನಡೆಸಿದ ಮುಂಬೈನ ಉಚ್ಚ ನ್ಯಾಯಾಲಯ ಮುಂದಿನ ವಿಚಾರಣೆಯವರೆಗೆ ಧ್ರುವ ಸರ್ಜಾ ವಿರುದ್ಧ ಚಾರ್ಜ್ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಇಷ್ಟೇ ಅಲ್ಲದೇ ಈ ಪ್ರಕರಣ ಸಿವಿಲ್ ಮೊಕದ್ದಮೆಯಾಗಿದ್ದು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದೆ. ಈ ಹಿನ್ನೆಲೆ ಸದ್ಯ ಧ್ರುವ ಸರ್ಜಾಗೆ ಈ ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಮತ್ಯಾವ ತಿರುವು ಪಡೆಯುತ್ತೆ..? ರಾಘವೇಂದ್ರ ಹೆಗಡೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಪ್ರತಿಕ್ರಿಯೆ ನೀಡುತ್ತಾರಾ ? ಧ್ರುವ ಸರ್ಜಾ ಮತ್ತು ರಾಘವೇಂದ್ರ ಹೆಗಡೆ ರಾಜಿ ಮಾಡಿಕೊಳ್ಳುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications










