'ಮೈಸೂರು ಮಲ್ಲಿಗೆ' ಚಿತ್ರ ಬಿಡುಗಡೆಗೆ ಕೋರ್ಟ್ ತಡೆ
ಜಗದ್ವಿಖ್ಯಾತ ಮೈಸೂರು ದಸರಾ ಸಂಭ್ರಮ ಸಡಗರದ ಸಮಯದಲ್ಲಿಯೇ 'ಮೈಸೂರ ಮಲ್ಲಿಗೆ' ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ಈ ಚಿತ್ರ ಶೀರ್ಷಿಕೆ ಹಾಗೂ ಬಿಡುಗಡೆಗೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಚಿತ್ರದ ಶೀರ್ಷಿಕೆ ವಿರುದ್ಧ ನಿರ್ದೇಶಕ ಟಿಎಸ್ ನಾಗಾಭರಣ, ನಿರ್ಮಾಪಕ ಹರಿ ಖೋಡೆ ಹಾಗೂ ಕೆಎಸ್ ನರಸಿಂಹ ಸ್ವಾಮಿ ಪ್ರತಿಷ್ಠಾನ ಚಿತ್ರದ ಶೀರ್ಷಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿತ್ತು.
ಈ ಹಿಂದೆ ಚಿತ್ರದ ಶೀರ್ಷಿಕೆಗೆ ವಿರೋಧ ವ್ಯಕ್ತಪಡಿಸಿದ ಫಿಲಂ ಚೇಂಬರ್ ಮೆಟ್ಟಿಲೇರಿದ್ದರು ನಾಗಾಭರಣ. ಆದರೆ ನಿಯಮ ನಿಬಂಧನೆಗಳ ಪ್ರಕಾರ ಚಿತ್ರದ ಶೀರ್ಷಿಕೆಯನ್ನು ನೀಡಲಾಗಿದೆ ಫಿಲಂ ಚೇಂಬರ್ ಕೈತೊಳೆದುಕೊಂಡಿತ್ತು. ಬಳಿಕ ನಾಗಾಭರಣ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಕೋರ್ಟ್ ತನ್ನ ಮುಂದಿನ ಆದೇಶದವರೆಗೆ ಚಿತ್ರದ ಶೀರ್ಷಿಕೆಗೆ ತಡೆ ನೀಡಿದೆ.
ಈಗ ಇದೇ ಹೆಸರಿನಲ್ಲಿ ಮತ್ತೊಂದು ಮೈಸೂರು ಮಲ್ಲಿಗೆ ಚಿತ್ರ ಸೆಟ್ಟೇರಿದೆ. ಆಸ್ಕರ್ ಕೃಷ್ಣ ನಿರ್ದೇಶಿಸಿರುವ 'ಮೈಸೂರು ಮಲ್ಲಿಗೆ' ಚಿತ್ರದ ನಾಯಕಿ ರೂಪಾ ನಟರಾಜ್. ಹತ್ತು ವರ್ಷಗಳ ಬಳಿಕ ಅದೇ ಶೀರ್ಷಿಕೆಯನ್ನು ಬಳಸಿಕೊಳ್ಳಬಹುದು. ನಾಗಾಭರಣ ನಿರ್ದೇಶನದ ಮೈಸೂರು ಮಲ್ಲಿಗೆ ಬಂದು 20 ವರ್ಷಗಳೇ ಕಳೆದುಹೋಗಿದೆ. ಈಗ ಮತ್ತೆ ಅದೇ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ ಅವರಿಗೆ ಕೊಂಚ ಅಸಮಾಧಾನವಿದೆ.

ಆ ಮೈಸೂರು ಮಲ್ಲಿಗೆ ಎಲ್ಲಿ ಇದು ಎಲ್ಲಿ?
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಘಮಘಮ ವಾಸನೆ ಬೀರಿದ ಚಿತ್ರ 'ಮೈಸೂರು ಮಲ್ಲಿಗೆ'. 1992ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಟಿ.ಎಸ್. ನಾಗಾಭರಣ ಆಕ್ಷನ್ ಕಟ್ ಹೇಳಿದ್ದರು. ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವನಗಳನ್ನು ಆಧರಿಸಿ ತಯಾರಿಸಿದ ಈ ಚಿತ್ರ ಇಂದಿಗೂ ಜನಮನ್ನಣೆಗೆ ಪಾತ್ರವಾಗಿದೆ.

ನಾಗಾಭರಣ ಅಸಮಾಧಾನಕ್ಕೆ ಕಾರಣ
ಇಂದಿನ ನಿರ್ದೇಶಕರಿಗೆ ಸ್ವಲ್ಪವೂ ಸೌಜನ್ಯವಿಲ್ಲ. ಮೈಸೂರು ಮಲ್ಲಿಗೆ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ಮಿಸಬೇಕಾದರೆ ತಮಗೂ ಒಂದು ಮಾತು ತಿಳಿಸಬೇಕಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಅಷ್ಟೂ ಸೌಜನ್ಯವಿಲ್ಲವೇ ಎಂಬುದೇ ಅವರ ಅಸಮಾಧಾನಕ್ಕೆ ಕಾರಣ.

ದಂಪತಿಗಳ ಪಿಸು ಮಾತಿನಷ್ಟೇ ಸೊಗಸಿನ ಚಿತ್ರ
ಅಂದಿನ 'ಮೈಸೂರು ಮಲ್ಲಿಗೆ' ಚಿತ್ರ ದಂಪತಿಗಳ ಪಿಸು ಮಾತಿನಷ್ಟೆ ಸೊಗಸಾಗಿತ್ತು. ವರಕವಿ ಬೇಂದ್ರೆ ಅವರು 'ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ, ಇದು ಈ ಮಣ್ಣು ನಲದಿಂದ ಬರಲು ಸಾಧ್ಯವೇ?' ಎಂದದ್ದು ಸುಮ್ಮನೆಯೇ?

ಕಾವ್ಯ ರಸಿಕರ ಹೃದಯಕ್ಕೇ ಲಗ್ಗೆಹಾಕಿದ ಗೀತೆಗಳು
ಬಳೆಗಾರ ಚೆನ್ನಯ್ಯ , ಒಂದಿರುಳು ಕನಸಿನಲಿ, ರಾಯರು ಬಂದರು ಮಾವನ ಮನೆಗೆ ಹಾಡುಗಳಂತೂ ಕಾವ್ಯ ರಸಿಕರ ಹೃದಯಕ್ಕೇ ಲಗ್ಗೆಹಾಕಿದ ಕವಿತೆಗಳು. ಈ ಕವಿತೆಗಳಲ್ಲಿ ಬರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರು.

ಈಗಿನ ಮೈಸೂರು ಮಲ್ಲಿಗೆಯ ಕಥಾವಸ್ತು ಏನು?
ಆದರೆ ಈಗಿನ ಮೈಸೂರು ಮಲ್ಲಿಗೆಯ ಕಥಾವಸ್ತು ಏನು? ಇದು ಒಳ್ಳೆಯ ಅಭಿರುಚಿ ಚಿತ್ರವೇ ಅಲ್ಲವೆ ಎಂಬ ಬಗ್ಗೆಯೂ ನಾಗಾಭರಣ ಅವರ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆಯಂತೆ.

ಆಸ್ಕರ್ ಕೃಷ್ಣ ಆಕ್ಷನ್ ಕಟ್ ಹೇಳಿರುವ ಚಿತ್ರ
ಈ ಹಿಂದೆ 'ಆಸ್ಕರ್' ಎಂಬ ವಿನೂತನ ಶೈಲಿಯ ಚಿತ್ರ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ 'ಮೈಸೂರು ಮಲ್ಲಿಗೆ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.

ಒಂಟಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ
ಒಂಟಿ ಹೆಣ್ಣಿನ ಮೇಲೆ ಪ್ರತಿನಿತ್ಯ ನಡೆಯುತ್ತಿರುವ ವಿಲಕ್ಷಣ ಶೋಷಣೆಯ ಕಥೆ ಹೊಂದಿದೆ. ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.


Click it and Unblock the Notifications











