ಶಿವಣ್ಣನ ನಿವಾಸಯಲ್ಲಿ ಗುಪ್ತ್ ಗುಪ್ತ್ ಮೀಟಿಂಗ್; ಅಷ್ಟಕ್ಕೂ ಏನಾಯ್ತು?
ನಾಗವಾರದ ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ ಶಿವಣ್ಣನ ಶ್ರೀಮುತ್ತು ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಸದ್ದಿಲ್ಲದೇ ನಡೆದಿರುವ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯಿತು ಎನ್ನುವ ಬಗ್ಗೆ ಈಗ ಮಾಹಿತಿ ಲಭ್ಯವಾಗುತ್ತಿದೆ. ಕನ್ನಡ ಚಿತ್ರರಂಗದ ಸದ್ಯ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.
ಕನ್ನಡ ಚಿತ್ರರಂಗದ ಕೆಲ ನಟರು, ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರು, ವಿತರಕರು ಸೇರಿದಂತೆ ಹಲವರು ಭಾಗಿಯಾಗಿದ್ದರು. ನಟರಾದ ದುನಿಯಾ ವಿಜಯ್, ಗಣೇಶ್, ಧ್ರುವ ಸರ್ಜಾ ಇದರಲ್ಲಿ ಪ್ರಮುಖರು. ಶೀಘ್ರದಲ್ಲೇ ಚಿತ್ರರಂಗದ ಪ್ರಮುಖರು ಸಿಎಂ ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅದಕ್ಕೂ ಮುನ್ನ ಮತ್ತೊಮ್ಮೆ ಚಿತ್ರರಂಗದ ಪ್ರಮುಖರೆಲ್ಲಾ ಸೇರಿ ಸಭೆ ನಡೆಸಿ ಚರ್ಚಿಸಲು ತೀರ್ಮಾನಿಸಲಾಗಿದೆ.

ಕನ್ನಡ ಚಿತ್ರರಂಗ ಒಂದರ್ಥದಲ್ಲಿ ಕೋಮಾ ಸ್ಥಿತಿ ತಲುಪಿದೆ. ದೊಡ್ಡ ಸಿನಿಮಾಗಳು ಬರ್ತಿಲ್ಲ. ಸಣ್ಣ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಆಸಕ್ತಿ ತೋರಿಸುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಟಿಕೆಟ್ ಬೆಲೆ ವಿಚಾರ, ದಿನೇ ದಿನೇ ಕಡಿಮೆ ಆಗುತ್ತಿರೋ ಕನ್ನಡ ಸಿನಿಮಾಗಳು, ನಿರ್ಮಾಪಕರು, ವಿತರಕರು-ಪ್ರದರ್ಶಕರ ಸಂಕಷ್ಟ ಹೀಗೇ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಬಳಿಕ ಸಿಎಂ ಭೇಟಿ ಮಾಡಲು ನಿರ್ಧರಿಸಲಾಗಿದೆ.
ನಿಜಕ್ಕೂ ಕನ್ನಡ ಚಿತ್ರರಂಗದ ಸ್ಥಿತಿ ಬಹಳ ಶೋಚನೀಯವಾಗಿದೆ. ಅದರಲ್ಲೂ ಚುನಾವಣೆ, ಐಪಿಎಲ್ ಟೂರ್ನಿ ವೇಳೆ ಎರಡ್ಮೂರು ತಿಂಗಳು ದೊಡ್ಡ ಸಿನಿಮಾಗಳು ಬರುವುದಿಲ್ಲ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಸಣ್ಣ ಸಿನಿಮಾಗಳು ನಿರ್ಮಾಣ ಆಗುತ್ತಿಲ್ಲ. ದೊಡ್ಡ ಚಿತ್ರಗಳ ನಿರ್ಮಾಣ ತಡವಾಗುತ್ತಿದೆ. ನಿಯಮಿತವಾಗಿ ಒಳ್ಳೆ ಸಿನಿಮಾಗಳು ಬರೆದೇ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ.
ಯಶ್, ಸುದೀಪ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಿನಿಮಾ ಮಾಡುವ ಸ್ಪೀಡ್ ಕಮ್ಮಿ ಆಗಿದೆ. ಎರಡು ವರ್ಷ, 3 ವರ್ಷಕ್ಕೆ ಒಂದು ಸಿನಿಮಾ ಎನ್ನುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚುವ ಸ್ಥಿತಿ ತಲುಪಿದೆ. ಕಳೆದ ವರ್ಷ ಕೊನೆಗೆ 'ಮ್ಯಾಕ್ಸ್' ಹಾಗೂ 'ಯುಐ' ಸಿನಿಮಾಗಳು ಸದ್ದು ಮಾಡಿದ್ದವು. ಬಳಿಕ 5 ತಿಂಗಳಲ್ಲಿ ಒಂದೇ ಒಂದು ಕನ್ನಡ ಸಿನಿಮಾ ಹಿಟ್ ಆಗಲಿಲ್ಲ.
ಈ ವರ್ಷ 'ಕಾಂತಾರ-1, 'ಎಕ್ಕ', 'ಕೆಡಿ' ಹಾಗೂ '45' ಬಿಟ್ಟರೆ ಯಾವುದೇ ಸಿನಿಮಾ ನಿರೀಕ್ಷೆ ಗುಟ್ಟಾಕ್ಕಿಲ್ಲ. ಸದ್ಯ ಐಪಿಎಲ್ ಫೀವರ್ ಮುಗಿದಿಲ್ಲ. ಹಾಗಾಗಿ ಇನ್ನು ಒಂದು ತಿಂಗಳು ಯಾವುದೇ ದೊಡ್ಡ ಸಿನಿಮಾ ಬರಲ್ಲ. ಅಂದರೆ ವರ್ಷದ ಆರೇಳು ತಿಂಗಳು ದೊಡ್ಡ ಸಿನಿಮಾಗಳಿಲ್ಲದೇ ಚಿತ್ರತಂಡ ಬಡವಾಗುತ್ತಿದೆ. ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ಇತ್ತು. ಆದರೆ 'ಕೃಷ್ಣಂ ಪ್ರಣಯ ಸಖಿ', 'ಭೀಮ', 'ಭಗೀರ', 'ಭೈರತಿ ರಣಗಲ್', 'ಮ್ಯಾಕ್ಸ್' ಚಿತ್ರಗಳು ಬಳಿಕ ಸದ್ದು ಮಾಡಿದ್ದವು.
ಈ ವರ್ಷ ಯಾವುದೇ ಸಿನಿಮಾ ಸದ್ಯಕ್ಕೆ ತೆರೆಗೆ ಬಂದು ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಗುತ್ತಿಲ್ಲ. 'ಎಕ್ಕ' ಸಿನಿಮಾ ರಿಲೀಸ್ ಡೇಟ್ ಮುಂದೂಡುವ ಸಾಧ್ಯತೆಯಿದೆ. ವರಲಕ್ಷ್ಮಿ ಹಬ್ಬಕ್ಕೆ 'ಕೆಡಿ' ಸಿನಿಮಾ ಬರುವ ಸಾಧ್ಯತೆಯಿದೆ. '45' ಆಗಸ್ಟ್ 15ಕ್ಕೆ ತೆರೆಗೆ ಬರಬೇಕಿದೆ. 'ಕಾಂತಾರ-1' ಅಕ್ಟೋಬರ್ ಮೊದಲ ವಾರ ಬಿಡುಗಡೆ ಆಗಲಿದೆ. ಹಾಗಾಗಿ ಸದ್ಯಕ್ಕೆ ಚಿತ್ರರಂಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಓಟಿಟಿ, ಪೈರಸಿ ಕೂಡ ಚಿತ್ರರಂಗಕ್ಕೆ ಸಮಸ್ಯೆ ತಂದೊಡ್ಡಿದೆ. ಜನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಚಿತ್ರಮಂದಿರಗಳನ್ನೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ಚಿತ್ರಮಂದಿರಗಳನ್ನು ನೆಲಸಮ ಮಾಡಿ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲಾಗಿದೆ. ಇನ್ನುಳಿದ ಕೆಲವು ಚಿತ್ರಮಂದಿರಗಳಿಗೂ ಉಳಿಗಾಲ ಇಲ್ಲ ಎನ್ನುವಂತಾಗಿದೆ.


Click it and Unblock the Notifications











