ದರ್ಶನ್ಗಿಲ್ಲ ಅಭಿಮಾನಿಗಳ ಅಭಿಮಾನದ ಜಾತ್ರೆ ಕಣ್ತುಂಬಿಕೊಳ್ಳುವ ಸೌಭಾಗ್ಯ ; ಕಾಮನ್ ಡಿಪಿ ರಿಲೀಸ್ - ಸಮಾಜಮುಖಿ ಡಿ ಉತ್ಸವ
ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು.
ಇಷ್ಟೇ ಅಲ್ಲ. ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರವ್ಯಾಮೋಹಿ ಕೆಲಸಗಳನ್ನು ಮಾಡುವುದು ಕೂಡ ಅಭಿಮಾನವೇ. ಇಂಥಾ ಅಭಿಮಾನಿಗಳನ್ನು ಪಡೆದ ಕೆಲವೇ ಕೆಲ ಅದೃಷ್ಟವಂತ ಸ್ಟಾರ್ ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವವರು ದರ್ಶನ್.

ಆದರೆ. ದುರ್ದೈವ.. ಇಂತಹ ಅಭಿಮಾನಿಗಳನ್ನು ಪಡೆದ ದರ್ಶನ್ಗೆ ಈ ಅಭಿಮಾನದ ಮಳೆಯಲ್ಲಿ ಮಿಂದೇಳಲು ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳ ಅಭಿಮಾನದ ಜಾತ್ರೆಯನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯವೂ ಸಿಕ್ತಿಲ್ಲ. ನಿಜಾ.. ಕಳೆದ ವರ್ಷ ತಮ್ಮ ಬರ್ತ್ಡೇಯಂದು ದರ್ಶನ್ ಹೊರಗಡೆ ಇದ್ದರು. ತಾವು ಇದ್ದ ಜಾಗದಲ್ಲಿಯೇ ಕುಳಿತುಕೊಂಡು ಅಭಿಮಾನಿಗಳ ಅಭಿಮಾನ ಕಂಡು ತಲೆ ಬಾಗಿದ್ದರು.
ಆದರೆ ಈ ಬಾರಿ ಈ ಅದೃಷ್ಟ ಕೂಡ ಇಲ್ಲ. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಅ'ಪವಿತ್ರ' ಸಂಬಂಧಕ್ಕೆ ಹಾತೊರೆದು ಜೈಲು ಪಾಲಾದ ದರ್ಶನ್ಗೆ ಈ ಬಾರಿ ಜಾಮೀನು ಸಿಕ್ಕಿಲ್ಲ. ಈ ಹಿನ್ನೆಲೆ ಜೈಲಿನಲ್ಲಿಯೇ ತಮ್ಮ ಬರ್ತ್ಡೇ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ದರ್ಶನ್ ಇದ್ದಾರೆ. ಆದರೆ, ಆಗಲೇ ಹೇಳಿದಂತೆ ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ದರ್ಶನ್ ಒಳಗಡೆ ಇದ್ದರೂ ಕೂಡ ಹೊರಗಡೆ ದರ್ಶನ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ದೈವನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧರಾಗಿದ್ದಾರೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಕಾಮನ್ ಡಿಪಿ ಕೂಡ ಬಿಡುಗಡೆ ಮಾಡಿದ್ದಾರೆ.
ಇನ್ನೂ ಪ್ರತಿ ವರ್ಷ ದರ್ಶನ್ ಅವರ ಅಭಿಮಾನಿಗಳು ದರ್ಶನ್ ಅವರ ಹುಟ್ಟುಹಬ್ಬವನ್ನು ಕೇವಲ ಅದ್ಧೂರಿಯಾಗಿ ಆಚರಿಸುವುದಲ್ಲದೇ ಅರ್ಥಪೂರ್ಣವಾಗಿ ಕೂಡ ಆಚರಿಸಿಕೊಂಡು ಬರುವ ಪರಿಪಾಠವನ್ನು ಬೆಳಸಿಕೊಂಡು ಬಂದಿದ್ದಾರೆ. ಈ ವರ್ಷ ಕೂಡ ಈ ಅರ್ಥಪೂರ್ಣ ಉತ್ಸವ ನಡೆಯಲಿದ್ದು ಹಲವು ಸಮಾಜಮುಖಿ ಕೆಲಸಗಳನ್ನು ದರ್ಶನ್ ಅವರ ಅಭಿಮಾನಿಗಳು ಮಾಡುತ್ತಿದ್ಧಾರೆ.
ಉದಾಹರಣೆಗೆ ಜನಸ್ನೇಹಿ ನಿರಾಶ್ರಿತ ಅಶ್ರಮಕ್ಕೆ ಅಗತ್ಯ ವಸ್ತುಗಳನ್ನು ಮತ್ತು ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ದರ್ಶನ್ ಅಭಿಮಾನಿಗಳು ಹಮ್ಮಿಕೊಂಡಿದ್ದು ಶ್ರೀ ಸಾಯಿ ಸ್ನೇಹ ಫೌಂಡೇಷನ್ ಆಶ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದಾರೆ. ಕುಣಿಗಲ್ನ ಅಂದ ಮಕ್ಕಳ ಆಶ್ರಮದಲ್ಲಿ ಟಿ ಶರ್ಟ್ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ, ಕರುಣಾಲಯ ಸೇವಾ ಸಂಸ್ಥೆ ಅನಾಥಾಶ್ರಮಕ್ಕೆ ಅಗತ್ಯ ವಸ್ತುಗಳನ್ನು ವಿತರಣೆ ಕಾರ್ಯಕ್ರಮ, ಚೆನ್ನಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದಾಸೋಹಕ್ಕೆ ಅಗತ್ಯ ವಸ್ತುಗಳ ದಾನ ಮಾಡುವ ಕಾರ್ಯಕ್ರಮ, ಜನಧ್ವನಿ ನಿರಾಶ್ರಿತ ಅಶ್ರಮಕ್ಕೆ ಅಗತ್ಯ ವಸ್ತುಗಳ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ...
ಹೀಗೆ ಹಲವಾರು ಕಡೆ ಹಲವರು ರೀತಿಯ ಕಾರ್ಯಕ್ರಮಗಳನ್ನು ದರ್ಶನ್ ಅಭಿಮಾನಿ ಸಂಘ ''ಡಿ ಕಂಪನಿ'' ಹಮ್ಮಿಕೊಂಡಿದೆ. ಸಾಮಾಜಿಕ ಸೇವೆಯನ್ನು ಮುಂದುವರೆಸಿ, ಕರ್ನಾಟಕಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಇತರೆ ಅಭಿಮಾನಿ ಸಂಘಗಳಿಗೆ ದರ್ಶನ್ ಅವರ ಹುಟ್ಟುಹಬ್ಬಕ್ಕೂ ಮುನ್ನ ಡಿ ಕಂಪನಿ ಕರೆಯನ್ನು ಕೂಡ ನೀಡಿದೆ.
ಡಿ ಕಂಪನಿ ಮನವಿ
ಡಿ ಬಾಸ್ ಸೆಲೆಬ್ರಿಟಿಸ್ ಗಳೇ , ನಿಮ್ಮೆಲ್ಲರಿಗೂ ಹೃದಯ ತುಂಬಿ ಧನ್ಯವಾದಗಳು. ವರ್ಷದಿಂದ ವರ್ಷಕ್ಕೆ ನೀವು ಮಾಡುತ್ತಿರುವ ಸಾಮಾಜಿಕ ಸೇವೆಯ ಹಬ್ಬ ಈಗ ಕರ್ನಾಟಕದಲ್ಲೇ ಮಾದರಿಯಾಗಿದೆ. ಅನಾಥಾಶ್ರಮಗಳಲ್ಲಿ ಊಟ ವಿತರಣೆ, ಬಟ್ಟೆ-ಪುಸ್ತಕ ದಾನ, ರಕ್ತದಾನ ಶಿಬಿರಗಳು, ವೃದ್ಧಾಶ್ರಮಗಳಲ್ಲಿ ಸೇವೆ... ಇವೆಲ್ಲವೂ ಇಂದು #DBoss ಫ್ಯಾನ್ಸ್ ಅಂತ ಹೇಳಿಸಿಕೊಂಡಿರುವ ನಮ್ಮ ಕುಟುಂಬದ ನಿಜವಾದ ಗುರುತು.
ಈ ವರ್ಷ ನಮ್ಮ ಡಿ ಬಾಸ್ ಅವರ ಅನುಪಸ್ಥಿತಿಯಲ್ಲೂ, ಅವರ ವಿಚಾರಧಾರೆ ನಮ್ಮೊಳಗೇ ಇದೆ. ಅವರು ಯಾವಾಗಲೂ ಹೇಳಿದ್ದೂ ಇದೆ - ಹೂವು, ಕೇಕ್-ಕಟೌಟ್, ಪಟಾಕಿ ಗಳಿಗಿಂತ ಸಮಾಜಕ್ಕೆ ಸಹಾಯ ಮಾಡಿದರೆ ನಿಜವಾದ ಸಂಭ್ರಮ ಅಂತ.
ಆದ್ದರಿಂದ, ಈ ಬಾರಿ ಕೂಡ ನಮ್ಮ ಕೈಲಾದಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳೋಣ:
ನಿಮ್ಮ ತಾಲೂಕಿನ ಅನಾಥಾಶ್ರಮ, ವೃದ್ಧಾಶ್ರಮ, ವಿಶೇಷ ಮಕ್ಕಳ ಕೇಂದ್ರಗಳಲ್ಲಿ ಒಂದನ್ನು ಆಯ್ದುಕೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಊಟ, ಹಣ್ಣು, ಪುಸ್ತಕ, ಔಷಧಿ, ಸಮಯ ಏನಾದ್ರೂ ಕೊಡಿ.
ದೊಡ್ಡದಾಗಿರಬೇಕೆಂಬ ಒತ್ತಡ ಬೇಡ; 10 ಮಂದಿ ಮಕ್ಕಳ ನಗುವು, 5 ಹಿರಿಯರ ಆಶೀರ್ವಾದ, ಇದೇ ಡೀ ಬಾಸ್ ಗೆ ಕೊಡಬಹುದಾದ ದೊಡ್ಡ ಗೌರವ.
ತಮ್ಮ ಅಭಿಮಾನಿಗಳನ್ನು ಸದಾ "ಸೆಲೆಬ್ರಿಟೀಸ್" ಅಂತ ಡಿ ಬಾಸ್ ಸದಾ ಹೇಳಿಕೊಳ್ಳುವ ಕಾರಣ, ನೀವು ಯಾವಾಗಲೂ ಕಷ್ಟಕಾಲದಲ್ಲೂ ಜೊತೆಗೆ ನಿಂತಿದ್ದೀರಿ, ಸಮಾಜದ ಜೊತೆ ಕೂಡ ನಿಂತಿದ್ದೀರಿ ಎಂದಷ್ಟೇ .
ಇದೇ ರೀತಿಯಲ್ಲಿ ನಿಮ್ಮ ಹೆಮ್ಮೆಯ ಸಾಮಾಜಿಕ ಸೇವೆಯನ್ನು ಮುಂದುವರೆಸಿ, ಕರ್ನಾಟಕಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಜವಾಬ್ದಾರಿ ನಮ್ಮದಾಗಿದೆ.
ನಿಮ್ಮ ಒಗ್ಗಟ್ಟು, ನಿಮ್ಮ ಮಾನವೀಯತೆ, ನಿಮ್ಮ ಸೇವೆ, ಇವೇ ನಮ್ಮ #DBoss ಅವರ ನಿಜವಾದ ಶಕ್ತಿ.
ನಮ್ಮ ಕೆಲಸ ಮಾತಾಡಲಿ, ನಮ್ಮ ಸೇವೆ ಡಿ ಬಾಸ್ ನ ಮೇಲಿನ ಪ್ರೀತಿಯನ್ನು ಸದಾ ಜೀವಂತವಾಗಿಡಲಿ.


Click it and Unblock the Notifications










