ಕಣ್ಮುಚ್ಚಿದ ಬಿಚ್ಚು ನುಡಿಯ ಮಾತಿನ ಮಲ್ಲ...
ಣೆಯ ಮೇಲೆ ವಿಭೂತಿ ಇಟ್ಟು, ಗುರುವೇ... ತಿಪ್ಪೇಸಾ... ಅದೇನೋ ಹೇಳ್ತಾರಲ್ಲ.. ಕಾಮಾಲೆ ಕಣ್ಣಿಗೆ ಕಂಡಿದ್ದೇಲ್ಲಾ ಹಳದಿ ಅಂತಾ.. ಹಾಂಗಾ ಎಂದು ಪಕ್ಕಾ ಬೆಳವಲದ ಭಾಷೇಲಿ ರಾಗ ಎಳೆಯುತ್ತಿದ್ದ ಮಾತಿನ ಮಲ್ಲ ಧೀರೇಂದ್ರ ಗೋಪಾಲ್, ಕಾಮಾಲೇ ರೋಗಕ್ಕೇ ಬಲಿಯಾಗಿ ಹೋದರು.
ಗೋಪಾಲ್ ಹುಟ್ಟಿದ್ದು ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಜೋಡಿ ಗುಬ್ಬಿಯಲ್ಲಾದ್ರೂ ಮಾತು, ವರಸೆಯಲ್ಲಿ ಬೆಳೆದ ಪರಿಸರ - ಹರಿಹರದ ಕಡೆ ಪ್ರಭಾವ ಎದ್ದು ಕಾಣುತ್ತಿತ್ತು. 1971ರಲ್ಲಿ ಚಿತ್ರದುರ್ಗದಲ್ಲಿ ಚಿತ್ರೀಕರಿಸಲ್ಪಟ್ಟ ಹಾಗೂ ನಾಯಕ ನಟ ವಿಷ್ಣುವರ್ಧನ್ರಿಗೆ ಬ್ರೇಕ್ ಕೊಟ್ಟ ಪುಟ್ಟಣ್ಣ ಕಣಗಾಲ್ರ ನಾಗರಹಾವು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಪಡೆದ ಧೀರೇಂದ್ರ ಗೋಪಾಲ್ ಸುಮಾರು 200 ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.
ಪಡುವಾರಹಳ್ಳಿ ಪಾಂಡವರು, ಸಾಹಸ ಸಿಂಹ, ಸಿಂಹ ಜೋಡಿ ಚಿತ್ರಗಳಿಂದ ಹೆಸರು ಮಾಡಿದರು. ರಾಘವೇಂದ್ರ ರಾಜ್ಕುಮಾರ್ ಅಭಿನಯದ ಬಹುತೇಕ ಎಲ್ಲ ಚಿತ್ರಗಳಲ್ಲೂ ಧೀರೇಂದ್ರ ಗೋಪಾಲ್ ನಟಿಸಿದ್ದರು. ಗಜಪತಿ ಗರ್ವಭಂಗ, ನಂಜುಂಡಿ ಕಲ್ಯಾಣ, ಟುವ್ವಿ ಟುವ್ವಿ ಟುವ್ವಿ, ಭೂತಯ್ಯನ ಮಗ ಅಯ್ಯು, ನಾನೊಬ್ಬ ಕಳ್ಳ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಮಾತುಗಾರಿಕೆಯಿಂದಲೇ ಜನಮನಗೆದ್ದಿದ್ದ ಗೋಪಾಲ್ ಒಲವೆಲ್ಲಾ ರಂಗ ಭೂಮಿ ಹಾಗೂ ಕ್ಯಾಸೆಟ್ ಕ್ಷೇತ್ರದತ್ತಲೇ ಇತ್ತು.
ರಂಗಭೂಮಿಯ ಗೀಳು : 14 ವರ್ಷದವರಾಗಿದ್ದಾಗಲೇ ನಾಟಕದ ಗೀಳು ಅಂಟಿಸಿಕೊಂಡ ಗೋಪಾಲ್, ಸ್ಕೂಲಿಗೆ ಗುಡ್ಬೈ ಹೇಳಿ, ಗುಡಿಗೇರಿ ಬಸವರಾಜ್ ಅವರ ನಾಟಕದ ಕಂಪ್ನಿ ಸೇರಿದರು. ಆನಂತರ ನಾಡಿನ ಪ್ರಖ್ಯಾತ ನಾಟಕ ಕಂಪನಿಗಳಲ್ಲಿ ಒಂದಾದ ಗುಬ್ಬಿ ವೀರಣ್ಣನವ ಕಂಪನಿ, ಕೆ.ಬಿ.ಆರ್. ಡ್ರಾಮಾ ಕಂಪನಿ, ಹುಚ್ಚೇಶ್ವರ ನಾಟ್ಯ ಸಂಘ, ವಸಂತ ಕಲಾ ನಾಟಕ ಮಂಡಳಿಯೇ ಮೊದಲಾದ ಕಂಪನಿಗಳಲ್ಲಿ ಕಲಾವಿದರಾಗಿ ಸುಮಾರು 8 ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಪಾತ್ರ ವಹಿಸಿದ್ದರು.
ಮುದುಕನ ಮದುವೆ, ಟಿಪ್ಪೂ ಸುಲ್ತಾನ್, ಗೌಡ್ರ ಗದ್ಲ, ರಂಗಭೂಮಿಯಲ್ಲಿ ಗೋಪಾಲ್ರಿಗೆ ಹೆಸರು ತಂದುಕೊಟ್ಟರೆ, ಭಂಡಬಡ್ಡಿ ಮಗ, ಬಂಡಲ್ ನನ್ ಮಗ, ಮಾತಿನ ಮಲ್ಲ, ಕಾಡಿನಲ್ಲಿ ಕಣ್ಮರೆ, ಛತ್ರಿ ನನ್ಮಗ ಮುಂತಾದ 200ಕ್ಕೂ ಹೆಚ್ಚು ಜನಪ್ರಿಯ ಕ್ಯಾಸೆಟ್ ನಾಟಕಗಳ ಮೂಲಕ ಮನೆ ಮಾತಾದರು.
ನಿರ್ಭೀಡೆಯ ಮಾತುಗಳು, ಬೈಗುಳದ ಆ ಶೈಲಿ, ಬಿಚ್ಚು ನುಡಿ, ಸಮಾಜದ ಓರೆ ಕೋರೆಗಳ ಬಗ್ಗೆ ಗೋಪಾಲರ ವಿಡಂಬನೆ, ಕುಚೋದ್ಯ ಒಂದು ವರ್ಗದ ಕೇಳುಗರನ್ನು ಹಾಗೂ ಅಭಿಮಾನಿ ವರ್ಗವನ್ನೇ ಹುಟ್ಟು ಹಾಕಿತ್ತು. ಧೀರೇಂದ್ರ ಗೋಪಾಲ್ ಅವರ ನಿಜವಾದ ಹೆಸರು ಎಚ್.ಎನ್. ಗೋಪಾಲರಾವ್ ಆದರೂ ಅವರು ಧೀರೇಂದ್ರ ಗೋಪಾಲ್ ಎಂದೇ ಹೆಸರಾಗಿದ್ದರು.


Click it and Unblock the Notifications