D57 Update: "ನಾವು ಯಾವುದೇ ಪೋಸ್ಟರ್ ಬಿಟ್ಟಿಲ್ಲ": ಮಿಲನಾ ಪ್ರಕಾಶ್ ಪ್ರತಿಕ್ರಿಯೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕಾಟೇರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊನೆ ಹಂತದ ಚಿತ್ರೀಕರಣ ನಡೀತಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. 'ಕಾಟೇರ' ಬಳಿಕ ದರ್ಶನ್ ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೋಗಿ ಪ್ರೇಮ್ ಜೊತೆಗೂ ಒಂದು ಸಿನಿಮಾ ಘೋಷಣೆಯಾಗಿದೆ.
ಮಿಲನಾ ಪ್ರಕಾಶ್ ಈ ಹಿಂದೆ ದರ್ಶನ್ ಜೊತೆ 'ತಾರಕ್' ಸಿನಿಮಾ ಮಾಡಿದ್ದರು. ಆ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆದ್ದಿತ್ತು. ಅದೇ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಪ್ಲ್ಯಾನ್ ಮಾಡಲಾಗುತ್ತಿದೆ. ಇನ್ನು ಹೆಸರಿಡದ ಈ ಚಿತ್ರವನ್ನು ಸದ್ಯಕ್ಕೆ D57 ಅಂತ ಕರೆಯಲಾಗುತ್ತಿದೆ. ಇತ್ತೀಚೆಗೆ D57 ಫ್ಯಾನ್ ಮೇಡ್ ಪೋಸ್ಟರ್ವೊಂದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಭಿಮಾನಿಗಳು 'ತಾರಕ್' ರೀತಿಯ ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ದರ್ಶನ್ ಜೊತೆಗಿನ ತಮ್ಮ ಮುಂದಿನ ಸಿನಿಮಾ ಬಗ್ಗೆ ಫಿಲ್ಮಿಬೀಟ್ಗೆ ನಿರ್ದೇಶಕ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. " ಆ ಪೋಸ್ಟರ್ ಯಾರು ಮಾಡಿದರು ಎನ್ನುವುದು ಗೊತ್ತಿಲ್ಲ. ನಾವು ಅಂತೂ ಯಾವುದೇ ಪೋಸ್ಟರ್ ಇನ್ನು ರಿಲೀಸ್ ಮಾಡಿಲ್ಲ. ಸದ್ಯಕ್ಕೆ 'ಕಾಟೇರ' ಸಿನಿಮಾ ಕೆಲಸಗಳು ನಡೀತಿದೆ. ಈಗ ಮುಂದಿನ ಸಿನಿಮಾ ಬಗ್ಗೆ ಮಾತನಾಡುವುದು ಬೇಡ. ಆ ಸಿನಿಮಾ ಮುಗಿದ ಬಳಿಕವೇ ನಮ್ಮ ಸಿನಿಮಾ ಆರಂಭವಾಗುತ್ತದೆ" ಎಂದಿದ್ದಾರೆ.
D57 ಸಿನಿಮಾ ಯಾವ ಹಂತದಲ್ಲಿದೆ ಎನ್ನುವ ಪ್ರಶ್ನೆಗೆ " ಸ್ಕ್ರಿಪ್ಟ್ ಫೈನಲ್ ಆಗಿದೆ. ಕಾಸ್ಟಿಂಗ್ ನಡೀತಿದೆ. ಶೂಟಿಂಗ್ಗಾಗಿ ಶೆಡ್ಯೂಲ್ ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ನಮ್ಮ ಸಿನಿಮಾ ಶೂಟಿಂಗ್ ಆರಂಭವಾಗುತ್ತದೆ. ಅದಕ್ಕೂ ಮುನ್ನ 'ಕಾಟೇರ' ಸಿನಿಮಾ ಮುಗಿಯಬೇಕು" ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
20 ವರ್ಷಗಳ ಹಿಂದೆ 'ಖುಷಿ' ಸಿನಿಮಾ ಮೂಲಕ ಪ್ರಕಾಶ್ ಚಿತ್ರರಂಗಕ್ಕೆ ಬಂದರು. ಬಳಿಕ ಏಳೆಂಟು ಸಿನಿಮಾಗಳನ್ನು ಮಾತ್ರ ನಿರ್ದೇಶನ ಮಾಡಿದ್ದಾರೆ. 'ತಾರಕ್' ಸಿನಿಮಾ ಬಂದು 6 ವರ್ಷ ಕಳೀತು. ಆದರೆ ಈವರೆಗೆ ಬೇರೆ ಸಿನಿಮಾ ಮಾಡಿಲ್ಲ. ಕೊರೋನಾ ಕಾರಣದಿಂದ ತಡವಾಗುವಂತಾಯಿತು. 'ತಾರಕ್' ಬಳಿಕ ಮತ್ತೆ ದರ್ಶನ್ ಜೊತೆಗೆ ಪ್ರಕಾಶ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕ್ರೇಜಿ ಕಾಂಬಿನೇಷನ್ನಲ್ಲಿ ಒಂದೊಳ್ಳೆ ಸಿನಿಮಾ ನಿರೀಕ್ಷೆ ಮಾಡಲಾಗುತ್ತಿದೆ.

ದಸರಾ ವೇಳೆಗೆ 'ಕಾಟೇರ' ಸಿನಿಮಾ ತೆರೆಗೆ ತರಲು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಚಿತ್ರತಂಡ ಕೇರಳದಲ್ಲಿ ಸಾಂಗ್ ಶೂಟಿಂಗ್ ಮಾಡಿ ಬಂದಿತ್ತು. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಶ್ರುತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಇನ್ನು ತಾತ ಮೊಮ್ಮಗನ ಬಾಂಧವ್ಯದ 'ತಾರಕ್' ಸಿನಿಮಾ ಸಿನಿರಸಿಕರು ಮನಗೆದ್ದಿತ್ತು. ಲಕ್ಷಣ ದುಷ್ಯಂತ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ದರ್ಶನ್ ತಾತನ ಪಾತ್ರದಲ್ಲಿ ದೇವರಾಜ್ ನಟಿಸಿದ್ದರು. ಶ್ರುತಿ ಹರಿಹರನ್ ಹಾಗೂ ಶಾನ್ವಿ ಶ್ರೀವತ್ಸವ್ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದರು. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು.
'ರಿಷಿ', 'ಮಿಲನಾ', 'ವಂಶಿ' ಹೀಗೆ ಎಲ್ಲಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಪ್ರಕಾಶ್ ಗೆದ್ದಿದ್ದಾರೆ. ಫ್ಯಾಮಿಲಿ ಎಮೋಷನ್ಸ್ ಜೊತೆಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ದರ್ಶನ್ ಅಭಿಮಾನಿಗಳಿಗೂ ಇಷ್ಟವಾಗುವಂತೆ ಒಂದೊಳ್ಳೆ ಚಿತ್ರಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.


Click it and Unblock the Notifications











