ಬಡವರ ಮಕ್ಳು ಬೆಳೀಬೇಕು ಎನ್ನುತ್ತಲೇ ಪ್ರೇಮ್ ಮಗಳಿಗೆ ಅವಕಾಶ: ಡಾಲಿ ಉತ್ತರ ಏನು?
ನಟ ಧನಂಜಯ್, ಯಾವುದೇ ಸಿನಿಮಾ ಹಿನ್ನೆಲೆ, ಹಣದ ಹಿನ್ನೆಲೆ ಇಲ್ಲದೆ ಕೇವಲ ಆಸಕ್ತಿ, ಪ್ರತಿಭೆ, ಪರಿಶ್ರಮದಿಂದ ಚಿತ್ರರಂಗಕ್ಕೆ ಕಾಲಿಟ್ಟು ತಮ್ಮದೇ ಆದ ನೆಲೆಯನ್ನು ಕಟ್ಟಿಕೊಂಡವರು.
ನಾಯಕ ನಟನಾಗಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಧನಂಜಯ್, ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬರುವವರಿಗೆ ಸ್ಪೂರ್ತಿಯೂ ಹೌದು. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ, ಯಾವುದೇ ಹಿನ್ನೆಲೆ ಇಲ್ಲದೆ, ಬಡ ಕುಟುಂಬ ವರ್ಗದ ಯುವಕರು ತಮ್ಮ ತಮ್ಮ ಇಷ್ಟದ ಕ್ಷೇತ್ರಗಳಲ್ಲಿ ಸಾಧಿಸಲು ಧನಂಜಯ್ ಸ್ಪೂರ್ತಿಯಾಗಿದ್ದಾರೆ.
ಅವರೇ ನಿರ್ಮಿಸಿ, ನಟಿಸಿದ್ದ 'ಬಡವ ರಾಸ್ಕಲ್' ಸಿನಿಮಾದ 'ಬಡವರ ಮಕ್ಳನ್ನ ಬೆಳೆಯೋಕೆ ಎಲ್ ಬಿಡ್ತೀರ' ಡೈಲಾಗ್ ಅಂಥೂ ಸಾಧಿಸಲು ಹೊರಟ ಬಡಮನೆಯ ಮಕ್ಳಿಗೆ ಬಹು ಇಷ್ಟದ ಡೈಲಾಗ್. ಈ ಡೈಲಾಗ್ ಅನ್ನೇ ತಿದ್ದಿ 'ಬಡವರ ಮನೆ ಮಕ್ಳನ್ ಬೆಳೆಯೋಕೆ ಬಿಡ್ರಯ್ಯ' ಎಂದು ಬದಲಾಯಿಸಲಾಗಿದೆ. ಆದರೆ ಹೀಗೆ ಬಡವರ ಮನೆ ಮಕ್ಳ ಸ್ಪೂರ್ತಿಯಾಗಿದ್ದ ಧನಂಜಯ್ ಅವರೇ ತಮ್ಮ ನಿರ್ಮಾಣದ ಹೊಸ ಸಿನಿಮಾದಲ್ಲಿ ಖ್ಯಾತ ನಾಯಕ ನಟ ಪ್ರೇಮ್ರ ಮಗಳಿಗೆ ಅವಕಾಶ ನೀಡಿರುವುದು ಟೀಕೆಗೆ ಗುರಿಯಾಗಿದೆ.

ಹೊಸಬರಿಗೆ ಅವಕಾಶ ನೀಡುವ ಧನಂಜಯ್
ಹೊಸಬರಿಗೆ ಅವಕಾಶ ನೀಡಲೆಂದೇ ಧನಂಜಯ್ 'ಡಾಲಿ ಪಿಕ್ಚರ್ಸ್' ಹೆಸರಿನ ನಿರ್ಮಾಣ ಸಂಸ್ಥೆ ತೆರೆದಿದ್ದು, ಅವರ ನಿರ್ಮಾಣದ ಹೊಸ ಸಿನಿಮಾದಲ್ಲಿ ನಟ ಪ್ರೇಮ್ರ ಪುತ್ರಿ ಅಮೃತಾ ಅವರಿಗೆ ನಾಯಕಿಯಾಗಿ ನಟಿಸಲು ಅವಕಾಶ ನೀಡಿದ್ದಾರೆ. ಅಮೃತಾ ಅವರಿಗೆ ನಟನೆಯ ತರಬೇತಿಯಾಗಲಿ, ರಂಗಭೂಮಿ ಕೃಷಿಯಾಗಲಿ ಇಲ್ಲ. ಆದರೆ ಪ್ರೇಮ್ ಪುತ್ರಿಯೆಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡಲಾಗಿದೆ. ಯಾವುದೇ ಹಿನ್ನೆಲೆ ಇಲ್ಲದೆ ಬಂದ ಧನಂಜಯ್ ಈಗ ನೆಪೊಟಿಸಮ್ಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳನ್ನು ಕೆಲವು ನೆಟ್ಟಿಗರು ಆಡಿದ್ದಾರೆ.

ಟ್ವೀಟ್ ಮೂಲಕ ಧನಂಜಯ್ ಉತ್ತರ
ಈ ಬಗ್ಗೆ ಧನಂಜಯ್ಗೆ ಟ್ವೀಟ್ ಮಾಡಿದ ವ್ಯಕ್ತಿಯೊಬ್ಬರಿಗೆ ಟ್ವೀಟ್ ಮೂಲಕವೇ ಉತ್ತರ ನೀಡಿರುವ ಧನಂಜಯ್, 'ಆ ಸಿನಿಮಾದ ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿ ಕೆಲಸ ಮಾಡಿದ್ದಾತ' ಎಂದು ಹೇಳಿದ್ದಾರೆ. ಹೌದು, ಅಮೃತಾ ಪ್ರೇಮ್ ನಾಯಕಿಯಾಗಿ ನಟಿಸುತ್ತಿರುವ 'ಗಟರು ಪಲ್ಯ' ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಉಮೇಶ್ ಕೆ ಕೃಪಾ. ಅವರು ಈ ಹಿಂದೆ ಸೆಟ್ ಬಾಯ್ ಕೆಲಸ ಮಾಡಿದವರು. ಆ ಬಳಕ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಈಗ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ನೀಡಿದ್ದು ಧನಂಜಯ್.

ನಾಗಭೂಷಣ್ ನಾಯಕ
'ಟಗರು ಪಲ್ಯ' ಸಿನಿಮಾದಲ್ಲಿ ನಾಯಕ ನಟರಾಗಿ ನಟಿಸುತ್ತಿರುವುದು ನಟ ನಾಗಭೂಷಣ್. ಧನಂಜಯ್ರ ಗೆಳೆಯರಾಗಿರುವ ನಾಗಭೂಷಣ್, ಯೂಟ್ಯೂಬ್ ವಿಡಿಯೋಗಳ ಮೂಲಕ ನಟನೆ ಆರಂಭಿಸಿದವರು. ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ನಾಗಭೂಷಣ್ 'ಟಗರು ಪಲ್ಯ' ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಅಂದಹಾಗೆ ನಾಗಭೂಷಣ್ ಇದಕ್ಕೂ ಮುನ್ನ ಲಾಕ್ಡೌನ್ ಸಿನಿಮಾ 'ಇಕ್ಕಟ್'ನಲ್ಲಿಯೂ ನಾಯಕನಾಗಿ ನಟಿಸಿದ್ದರು. ಬಳಿಕ 'ಹನಿಮೂನ್' ಹೆಸರಿನ ವೆಬ್ ಸರಣಿಯಲ್ಲೂ ನಾಯಕ ನಾಗಿ ನಟಿಸಿದ್ದರು. ಇವರು ಧನಂಜಯ್ರ ಬಾಲ್ಯದ ಗೆಳೆಯ ಸಹ ಹೌದು.

ಪ್ರೇಮ್ರ ಇಬ್ಬರು ಮಕ್ಕಳು ನಟನೆಗೆ ಎಂಟ್ರಿ
ಪ್ರೇಮ್ರ ಪುತ್ರ ಏಕಾಂತ್ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆದ 'ಗುರು-ಶಿಷ್ಯರು' ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಈಗ ಪ್ರೇಮ್ರ ಪುತ್ರಿ ಅಮೃತಾ ಒಂದೇ ಬಾರಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಪ್ರೇಮ್, ನಾಯಕ ನಟನಾಗಿ ಬೇಡಿಕೆಯಲ್ಲಿರುವಾಗಲೇ ಮಗಳು ನಾಯಕಿಯಾಗಿರುವುದು ವಿಶೇಷ. ಆದರೆ ನೆಪೊಟಿಸಮ್ ಪ್ರತಿರೋಧಿಸಿ ಚಿತ್ರರಂಗದಲ್ಲಿ ಬೆಳೆದ ಧನಂಜಯ್, ಈಗ ಯಾವುದೇ ಅಭಿನಯದ ಹಿನ್ನೆಲೆಯೇ ಇರದ ಪ್ರೇಮ್ ಪುತ್ರಿಗೆ ಅವಕಾಶ ನೀಡಿರುವುದು ಟೀಕೆಗೆ ಗುರಿಯಾಗಿದೆ.


Click it and Unblock the Notifications











