'ಜಿಂಗೋ' ಧನಂಜಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರೇರಣೆ?
ನಟ ಡಾಲಿ ಧನಂಜಯ್ ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಕಷ್ಟು ಪ್ರಯೋಗಗಳಿಗೂ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನು 'ಟಗರು' ಚಿತ್ರದಲ್ಲಿ ವಿಲನ್ ಡಾಲಿ ಆಗಿ ಅಬ್ಬರಿಸಿದ್ದರು. ಆ ಬಳಿಕ ಕೂಡ ಕಥೆಗಳ ವಿಚಾರದಲ್ಲಿ ವಿಭಿನ್ನವಾಗಿ ಆಲೋಚಿಸುತ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಾಲಿ ಧನಂಜಯ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇದೇ ಸಮಯದಲ್ಲಿ ಧನು ನಟನೆಯ 'ಜಿಂಗೋ' ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿದೆ. ಕ್ರಾಂತಿಯ ಕಿಚ್ಚು ಹಚ್ಚುವ ನಾಯಕನಾಗಿ ಡಾಲಿ ನಟಿಸಿದ್ದಾರೆ. ಮೊದಲ ನೋಟದಲ್ಲೇ ಟೀಸರ್ ಗಮನ ಸೆಳೆಯುವಂತಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.

'ಡೇರ್ ಡೆವಿಲ್ ಮುಸ್ತಾಫಾ' ರೀತಿಯ ಹಿಟ್ ಸಿನಿಮಾ ಕೊಟ್ಟ ಶಶಾಂಕ್ ಸೊಗ್ಗಾಲ್ 'ಜಿಂಗೋ' ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ. ನಾಗೇಂದ್ರ ರೆಡ್ಡಿ ಎಂಬುವವರ ಜೊತೆ ಸೇರಿ ಸ್ವತಃ ಧನಂಜಯ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಣ್ಣ ಟೀಸರ್ನಿಂದಲೇ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇನ್ನು ಆಂಟಿ ಹೀರೊ ಆಗಿ ಚಿತ್ರದಲ್ಲಿ ಧನಂಜಯ ನಟಿಸುತ್ತಿದ್ದಾರೆ. ಅದನ್ನು ಟೀಸರ್ನಲ್ಲೇ ಹೇಳಲಾಗಿದೆ.
ಡಾಲಿ ಖಡಕ್ ವಾಯ್ಸ್ ಓವರ್ ಜೊತೆಗೆ 'ಜಿಂಗೋ' ಟೀಸರ್ ಶುರುವಾಗುತ್ತದೆ. ಒಂದು ಕಥೆಯ ರೂಪದಲ್ಲಿ ಸಿನಿಮಾ ಕಥೆಯ ಸುಳಿವನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ. ಒಂದು ಸೊಂಪಾದ ತೋಟ.. ಅಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದ ಕುರಿ ಹಿಂಡು.. ಆ ಕುರಿಗಳನ್ನು ತಿನ್ನಲು ತೋಳ, ಕಿರುಬ, ಚಿರತೆ, ಸಿಂಹ, ಹುಲಿ ಹೊಂಚು ಹಾಕುತ್ತಿತ್ತು. ಆದರೆ ಆ ಕುರಿಗಳನ್ನು ಕಾಯೋಕೆ ಶತ್ರುಗಳಿಗೆ ತಿರುಗೇಟು ಕೊಡುವುದಕ್ಕೆ ಒಬ್ಬ ನಿಂತಿದ್ದಾನೆ ಅಂತ 'ಜಿಂಗೋ'ನ ಪರಿಚಯಿಸಿದ್ದಾರೆ.
ದೊಡ್ಡ ದೊಡ್ಡ ಬಂದೂಕು, ಗನ್ಗಳನ್ನೆಲ್ಲಾ ಬಿಟ್ಟು 'ಜಿಂಗೋ' ಮೈಕ್ ಅನ್ನೇ ಆಯುಧ ಮಾಡಿಕೊಂಡು ಯುದ್ಧಕ್ಕೆ ನಿಂತಿದ್ದಾನೆ. ಇವತ್ತು ನಮ್ಮ ರಕ್ತದ ರುಚಿ ನೋಡಲು ವೈರಿಗಳು ನಮ್ಮ ನಿಮ್ಮ ನಡುವೆ ಇದ್ದಾವೆ. ಆದರೆ ಅಂತಹವರನ್ನು ನನ್ನ ಎದೆ ಒಡ್ಡಿ ಕಾಯ್ತೀನಿ. ನಾನು ಗಂಢಬೇರುಂಢನಾಗಿ ಹಾರ್ತಿದ್ರೆ ನನ್ನ ರೆಕ್ಕೆ ನೀವಾಗಿರಬೇಕು. ನಾನು ಬೆಂಕಿಯಾಗಿ ಉರೀತಿದ್ರೆ ಬೀಸೊ ಬಿರುಗಾಳಿ ನೀವಾಗಿರಬೇಕು. ಶಾಂತಿಯ ತೋಟದ ಮೇಲೆ ನಂಬಿಕೆ ಇಲ್ಲ, ನಾವು ಈಗ ಉತ್ತು ಬಿತ್ತಬೇಕಾಗಿರೋದು ಕ್ರಾಂತಿಯ ತೋಟ ಎನ್ನುವ ಡಾಲಿ ಡೈಲಾಗ್ಸ್ ಕಿಕ್ ಕೊಡುವಂತಿದೆ.

ಸಂಗೀತ ನಿರ್ದೇಶಕ ನವನೀತ್ ಶ್ಯಾಮ್ ಹಂಟಿಂಗ್ ಬಿಜಿಎಂ ಮತ್ತಷ್ಟು ಬಲ ತುಂಬಿದೆ. ಹಿಂದಿನ ಚಿತ್ರದಲ್ಲಿ ಶಾಂತಿಯ ತೋಟ ಎಂದು ಹೇಳಿದ್ದ ನಿರ್ದೇಶಕ ಶಶಾಂಕ್ ಈ ಬಾರಿ ಕ್ರಾಂತಿಯ ತೋಟ ಎಂದು ಹೇಳಲು ಹೊರಟಿರುವುದು ಹುಬ್ಬೇರಿಸಿದೆ. ಸಿನಿಮಾ ಕಥೆ ಏನು? ಎನ್ನುವ ಚರ್ಚೆ ಹುಟ್ಟು ಹಾಕಿದೆ. ಧನಂಜಯ್ ಕಥೆಗಳ ಆಯ್ಕೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಟೀಸರ್ನಲ್ಲಿ ಕ್ರಾಂತಿಕಾರಿ ನಾಯಕನಾಗಿ ಅಬ್ಬರಿಸಿದ್ದಾರೆ.
ಧನಂಜಯ್ ಬಿಟ್ಟು ಇನ್ನು ಯಾರೆಲ್ಲಾ 'ಜಿಂಗೋ' ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಚಿತ್ರಕ್ಕೆ ಹಾರಿಸ್ ಅಹಮದ್ ಕತೆ ಚಿತ್ರಕಥೆ ಬರೆದಿದ್ದಾರೆ. ರಾಘವೇಂದ್ರ ಮಾಯಕೊಂಡ ಡೈಲಾಗ್ಸ್ ಗಮನ ಸೆಳೆಯುತ್ತಿದೆ. ಮಳೆಯನ್ನು ಲೆಕ್ಕಿಸದೇ 'ಜಿಂಗೋ' ಭಾಷಣ ಮಾಡುವ ಪರಿ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ವೇಳೆ ಮಾಡಿದ ಭಾಷಣವನ್ನು ನೆನಪಿಸುವಂತಿದೆ. ಅದೇ ಭಾಷಣದಿಂದ ಪ್ರೇರಣೆಗೊಂಡು ಈ ಸನ್ನಿವೇಶ ಕಟ್ಟಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











