ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣನ ಮದುವೆಗೆ ಕರೆದ ಡಾಲಿ ಧನಂಜಯ್, ಮತ್ತೆ ಕೆರಳಿದ ದರ್ಶನ್ ಫ್ಯಾನ್ಸ್..!
ಒಂದು, ಮತ್ತೊಂದು, ಮಗದೊಂದು ಅಂತ ಒಂದಾದ ಮೇಲೊಂದು ಸೋಲುಗಳನ್ನು ಕಂಡು ಆ ನಂತರ ಡಾಲಿಯಾಗಿ ಧನಂಜಯ್ ಬೆಳೆದಿದ್ದು ಈಗ ಇತಿಹಾಸ. ನೋವು-ಅಪಮಾನಗಳನ್ನೆಲ್ಲ ಎದುರಿಸಿದರೂ ಕುಗ್ಗದೆ, ಬಗ್ಗದೆ, ಜಗ್ಗದೇ ಪ್ರಯತ್ನ ಮುಂದುವರೆಸಿದ ಧನಂಜಯ್ ಇವತ್ತು ಕನ್ನಡ ಚಿತ್ರರಂಗದ ಬಿಡುವಿರದ ನಟ.
ಇನ್ನು ಟಗರು ನಂತರ ನೆಗೆಟಿವೋ, ಪಾಸಿಟಿವೋ ಒಟ್ನಲ್ಲಿ ತನಗೊಪ್ಪುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ನಟಿಸುತ್ತಾ ಬರುತ್ತಿರುವ ಡಾಲಿ ಕೇವಲ ಕನ್ನಡಿಗರಿಗೆ ಮಾತ್ರ ಚಿರಪರಿಚಿತರಲ್ಲ. ಬದಲಿಗೆ ಬೇರೆ ಭಾಷೆಯವರಿಗೆ ಕೂಡ ಗೊತ್ತು. ಅದರಲ್ಲಿಯೂ ತೆಲುಗಿನಲ್ಲಿ ಪುಷ್ಪ ಚಿತ್ರಕ್ಕಿಂತ ಮುನ್ನವೇ ಭೈರವ ಗೀತಾ ಚಿತ್ರದ ಮೂಲಕ ತಮ್ಮ ಬಾವುಟ ಹಾರಿಸಿದ್ದರು ಧನಂಜಯ್.

ಇಂಥಾ ಡಾಲಿ ಧನಂಜಯ್ ಈಗ ಈ ಫೆಬ್ರವರಿ 16ರಂದು ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ. ಡಾ.ಧನ್ಯತಾ ಅವರ ಜೊತೆ ಹೊಸ ಬಾಳು ಶುರು ಮಾಡಲಿದ್ದಾರೆ. ಈ ಹಿನ್ನೆಲೆ ಹೆಚ್ಚು ಕಡಿಮೆ ಕಳೆದೊಂದುವರೆ ತಿಂಗಳಿಂದ ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರಿಗೆ ತಮ್ಮ ಮದುವೆಯ ಮಮತೆಯ ಕರೆಯೋಲೆಯನ್ನು ನೀಡುತ್ತಿರುವ ಡಾಲಿ ಧನಂಜಯ್ ಈಗ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿದ್ದಾರೆ. ಮದುವೆಗೆ ಬರಬೇಕು ಎಂದು ಆಮಂತ್ರಣ ಪತ್ರಿಕೆಯನ್ನು ಕೊಟ್ಟಿದ್ದಾರೆ.
ಕೇವಲ ಅಲ್ಲು ಅರ್ಜುನ್ ಮಾತ್ರವಲ್ಲ ತಮ್ಮ ಪುಷ್ಪ ಚಿತ್ರದ ಕ್ಯಾಪ್ಟನ್ ಸುಕುಮಾರ ಮತ್ತು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ಗೆ ಕೂಡ ಜಾಲಿ ರೆಡ್ಡಿ ಇನ್ವಿಟೇಶನ್ ಕಾರ್ಡ್ ಕೊಟ್ಟಿದ್ದು ರಶ್ಮಿಕಾ ಮಂದಣ್ಣ ಅವರನ್ನು ಕೂಡ ಭೇಟಿಯಾಗಿ ಮದುವೆಗೆ ಬನ್ನಿ ಎಂದಿದ್ದಾರೆ. ಸದ್ಯ ಧನಂಜಯ್ ಅವರ ಈ ಹೈದರಾಬಾದ್ ಪ್ರವಾಸದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಕೂಡ ಗುರಿಯಾಗುತ್ತಿವೆ.
ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಅವರನ್ನು ಹೊರತು ಪಡಿಸಿ ಡಾಲಿ ಧನಂಜಯ್ ತಮ್ಮ ಮದುವೆಗೆ ಕನ್ನಡ ಚಿತ್ರರಂಗದ ಬಹುತೇಕರನ್ನು ಕರೆದಿದ್ದಾರೆ. ಹೀಗಾಗಿಯೇ ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಮುನ್ನೆಲೆಗೆ ಬಂದಾಗ ಮಾತನಾಡಿದ್ದ ಡಾಲಿ "ಎಲ್ಲರನ್ನೂ ಮದುವೆ ಕರೆಯುತ್ತಿದ್ದೇನೆ, ಅಂದ್ಮೇಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದರೆ, ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಂದಲೇ ಕರೆಯುತ್ತೇನೆ" ಎಂದು ಧನಂಜಯ್ ಹೇಳಿದ್ದರು. ಈಗ ಅಲ್ಲು ಅರ್ಜುನ್ ಅವರನ್ನು ಡಾಲಿ ಧನಂಜಯ್ ಭೇಟಿ ಮಾಡಿದ್ದಾರೆ.
ಹೀಗಾಗಿ ಕೆರಳಿರುವ ದರ್ಶನ್ ಅಭಿಮಾನಿಗಳು ಧನಂಜಯ್ ವಿರುದ್ದ ಮತ್ತೊಂದು ಸುತ್ತಿನ ಸಮರ ಸಾರಿದ್ದಾರೆ. ಹೈದರಾಬಾದ್ನಲ್ಲಿರುವ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸುವುದು ಸುಲಭವಾಗಿರುವಾಗ ಇಲ್ಲಿಯೇ ಕೂಗಳತೆಯ ದೂರದಲ್ಲಿರುವ ದರ್ಶನ್ ಅವರನ್ನು ಸಂಪರ್ಕಿಸುವುದು ಕಷ್ಟವಾಗುತ್ತಿದೆ ಎನ್ನುವ ನಿಮ್ಮ ಮಾತು ಜೀರ್ಣಿಸಿಕೊಳ್ಳುವುದೇ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ.
ಇನ್ನುಳಿದಂತೆ ಧನಂಜಯ್ ಹಾಗೂ ಧನ್ಯತಾ ಇದೇ ಫೆಬ್ರವರಿ 16 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಮದುವೆಗೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಮುಂದಾಳತ್ವದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಇನ್ನು, ತಮ್ಮ ವಿವಾಹಕ್ಕೆ ಈಗಾಗಲೇ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳಿಗೂ ಡಾಲಿ ಧನಂಜಯ್ ಆಹ್ವಾನ ನೀಡಿದ್ದಾರೆ. ತಮ್ಮ ಮದುವೆಗೆ ಬರುವ ಅಭಿಮಾನಿಗಳಿಗಾಗಿಯೇ ಡಾಲಿ ಧನಂಜಯ್ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿದ್ದು ವಿದ್ಯಾಪತಿ ಅನ್ನುವ ದ್ವಾರದಿಂದ ಅವರಿಗೆ ಪ್ರವೇಶ ನೀಡಲಾಗುತ್ತೆ.


Click it and Unblock the Notifications











