ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ವಿ ಕೆ ಮೂರ್ತಿ ಇನ್ನಿಲ್ಲ
ಕನ್ನಡಿಗ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ಸಿನಿಮಾ ಛಾಯಾಗ್ರಾಹಕ ವಿ ಕೆ ಮೂರ್ತಿ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮೂರ್ತಿ ಅವರು ಶಂಕರಪುರಂನ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.
ಬಾಜಿ, ಜಾಲ್, ಚೌದಾವಿ ಕಾ ಚಾಂದ್, ಪ್ಯಾಸಾ, 12 ಓ ಕ್ಲಾಕ್, ಜಿದ್ದಿ ಚಿತ್ರಗಳು ಮೂರ್ತಿ ಅವರ ಕಲಾಪ್ರೌಢಿಮೆಗೆ ಸಾಕ್ಷಿ. ಕನ್ನಡದ 'ಹೂವು ಹಣ್ಣು' (ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ) ಚಿತ್ರಕ್ಕೂ ಮೂರ್ತಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. [ಕನ್ನಡಿಗ ವಿಕೆ ಮೂರ್ತಿಗೆ ದಾದಾ ಸಾಹೇಬ್ ಫಾಲ್ಕೆ]
ತಮ್ಮ ಛಾಯಾಗ್ರಹಣ ಮೂಲಕ ಬೆಳ್ಳಿಪರದೆಯ ಮೇಲೆ ದೃಶ್ಯ ವೈಭವನ್ನು ತಂದಂತಹ ಮಹಾನ್ ಕಲಾವಿದ ಮೂರ್ತಿ. ಅತ್ಯಾಧುನಿಕ, ನವೀನ ತಂತ್ರಗಳಿಂದ ಭಾರತೀಯ ಚಿತ್ರರಂಗಕ್ಕೆ ಹೊಸ ದೃಶ್ಯ ವೈಭವ ತಂದ ಅದ್ಭುತ ಛಾಯಾಗ್ರಾಹಕ ಮೂರ್ತಿ.

ಭಾರತದ ಮೊದಲ ಸಿನಿಮಾ ಸ್ಕೋಪ್ ಚಿತ್ರ 'ಕಾಗಜ್ ಕೆ ಫೂಲ್' ಚಿತ್ರೀಕರಿಸಿದ ಘನತೆ ಮೂರ್ತಿ ಅವರದು. ಗುರುದತ್ ಅವರ ಚಿತ್ರಗಳಿಗೆ ಹೆಚ್ಚಾಗಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಅನುಭವಿ ಛಾಯಾಗ್ರಾಹಕ ವಿಕೆ ಮೂರ್ತಿ.
ಬಣ್ಣದ ಛಾಯಾಗ್ರಾಹಕರಾಗಿಯೂ ಮೂರ್ತಿ ಅವರದು ವರ್ಣಮಯ ಬದುಕು. 'ಚೌದಾವಿ ಕಾ ಚಾಂದ್' ಚಿತ್ರದಲ್ಲಿನ ಮೂರ್ತಿ ಅವರ ಛಾಯಾಗ್ರಹಣ ಪ್ರೇಕ್ಷಕರನ್ನು ಸಮ್ಮೋಹನ ಗೊಳಿಸಿತ್ತು. ವಯೋಲಿನ್ ವಾದಕರಾಗಿ ಮೂರ್ತಿ ಅವರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಕಾಗಜ್ ಕೆ ಪೂಲ್ ಮತ್ತು ಸಾಹಿಬ್, ಬೀಬಿ ಔರ್ ಗುಲಾಮ್ ಚಿತ್ರ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿತ್ತು.
1923ರಲ್ಲಿ ಮೈಸೂರಿನಲ್ಲಿ ವೆಂಕಟರಾಮ ಪಂಡಿತ ಕೃಷ್ಣಮೂರ್ತಿ (ವಿಕೆ ಮೂರ್ತಿ) ಅವರ ಜನನ. 1943-46ರ ಸಾಲಿನ ಮೊದಲ ಬ್ಯಾಚ್ ನ ವಿದ್ಯಾರ್ಥಿಯಾಗಿ ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ನಲ್ಲಿ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ.
ಸ್ವಾತಂತ್ರ ಹೋರಾಟಗಾರರೂ ಆಗಿದ್ದ ವಿಕೆ ಮೂರ್ತಿ ಅವರು 1943ರಲ್ಲಿ ಜೈಲು ವಾಸ ಅನುಭವಿಸಿದವರು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿದಾರರಲ್ಲಿ ಒಬ್ಬರು. ಐದು ದಶಕಗಳ ಕಾಲ ಮುಂಬೈನಲ್ಲಿ ವಾಸ ಮಾಡಿದ ಮೂರ್ತಿ ಅವರು ತಮ್ಮ ವಿಶ್ರಾಂತ ಜೀವನವನ್ನು ಬೆಂಗಳೂರಿನಲ್ಲಿ ಕಳೆಯುತ್ತಿದ್ದರು.
ಆರಂಭದಲ್ಲಿ ಮುಂಬೈಗೆ ಬಂದಿಳಿದ ಮೂರ್ತಿಯವರಿಗೆ ಅಲ್ಲಿನ ಮೈಸೂರು ಅಸೋಸಿಯೇಷನ್ ತುಂಬಾ ಪ್ರಿಯವಾಗಿತ್ತು. ಅಲ್ಲಿ ಒಂದು ನಾಟಕಕಾರರ ಗುಂಪನ್ನು ಕಟ್ಟಿ, ಅನೇಕ ನಾಟಕಗಳನ್ನು ನಿರ್ದೇಶಿಸಿ, ರಂಗಪ್ರದರ್ಶನ ಮಾಡಿದ್ದರು. ಇಂದು ಸಂಜೆ ಮೂರ್ತಿ ಅವರ ಅಂತ್ಯಕ್ರಿಯೆ ನೆರವೇರಲಿದೆ. (ಏಜೆನ್ಸೀಸ್)


Click it and Unblock the Notifications











