ನಿರ್ದೇಶಕ ಕೆ.ವಿಶ್ವನಾಥ್ ಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'
ತೆಲುಗಿನ ಖ್ಯಾತ ನಿರ್ದೇಶಕ ಮತ್ತು ನಟ ಕಾಶಿನಾಧುನಿ ವಿಶ್ವನಾಥ್(ಕೆ.ವಿಶ್ವನಾಥ್) ರವರಿಗೆ 2016ನೇ ಸಾಲಿನ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಲಭಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಎಂ.ವೆಂಕಯ್ಯ ನಾಯ್ಡು ರವರು 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಮಂಡಳಿಯ ಶಿಫಾರಸ್ಸನ್ನು ಅನುಮೋದಿಸಿದ್ದಾರೆ.
2016ನೇ ಸಾಲಿನ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಗೆ ಭಾಜನರಾಗಿರುವ ಕೆ.ವಿಶ್ವನಾಥ್ ರವರು ಟಾಲಿವುಡ್ ಚಿತ್ರರಂಗದಲ್ಲಿ 'ಕಲಾತಪಸ್ವಿ' ಎಂದೇ ಖ್ಯಾತರಾಗಿದ್ದಾರೆ. ತೆಲುಗಿನಲ್ಲಿ 'ಶಂಕರಾಭರಣಂ', 'ಸ್ವಾತಿ ಕಿರಣಂ', 'ಶುಭ ಸಂಕಲ್ಪಂ', 'ಚಿನ್ನಬ್ಬಾಯಿ' ಸೇರಿದಂತೆ ಜೊತೆಗೆ ಹಿಂದಿ, ತಮಿಳು, ಮಲಯಾಳಂ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 1965 ರಿಂದ ಇಲ್ಲಿಯವರೆಗೆ 50 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ ಚಿತ್ರರಂಗದ ಅಭಿವೃದ್ಧಿಗೆ ಕೊಡುಗೆ ನೀಡಿದವರಿಗೆ, ಭಾರತ ಸರ್ಕಾರ ಪ್ರದಾನ ಮಾಡುವ ಸಿನಿಮಾ ರಂಗದ ಅತ್ಯುನ್ನತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯು ಸ್ವರ್ಣ ಕಮಲ ಪದಕ, 10 ಲಕ್ಷ ರೂಪಾಯಿ ನಗದು ಮತ್ತು ಶಾಲ್ ಹೊಂದಿರುತ್ತದೆ. ಈ ಪ್ರಶಸ್ತಿಯನ್ನು ಕೆ.ವಿಶ್ವನಾಥ್ ರವರಿಗೆ ಮೇ 3 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಭಾರತದ ರಾಷ್ಟ್ರಪತಿ ಪ್ರದಾನ ಮಾಡಲಿದ್ದಾರೆ.


Click it and Unblock the Notifications











