ಸೋತು ಸುಣ್ಣವಾಗಿದ್ದ ಫಣಿಗೆ ಬ್ರೇಕ್ಕೊಟ್ಟ
ಅದೃಷ್ಟನೇ ಹೀಗೆ. ಯಾರಿಗೆ ಯಾವಾಗ ಎಲ್ಲಿ ಒಲಿಯತ್ತೆ ಅಂತ ಖಂಡಿತಾ ಹೇಳಕ್ಕಾಗಲ್ಲ. ಬಾಲಿವುಡ್ನ ಬಿಗ್ ಬಿ, ಅಮಿತಾಬ್ ಬಚ್ಚನ್ ಏನೇನೋ ಮಾಡಲು ಹೋಗಿ ಕೈಸುಟ್ಟುಕೊಂಡು ಹತಾಶರಾಗಿದ್ದಾಗ ಸ್ಟಾರ್ ಟಿ.ವಿ. ಕೊಟ್ಟ ಬ್ರೇಕ್ ಬಚ್ಚನ್ ಇಮೇಜ್ ಅನ್ನು ಇಮ್ಮುಡಿ, ನಾಲ್ವಡಿಗೊಳಿಸಿತು.
ಚಿತ್ರರಂಗದಲ್ಲಿ ಬಚ್ಚನ್ ಗಳಿಸಿದ್ದ ಖ್ಯಾತಿಗಿಂತಲೂ ಮಿಗಿಲಾದ ಹೆಸರನ್ನು ಹಾಗೂ ಹಣವನ್ನು ಕೌನ್ ಬನೇಗಾ ಕೊಟ್ಟಿತು. ಹಂತಹಂತವಾಗಿ ಬಚ್ಚನ್ ಋಣಮುಕ್ತರೂ ಆಗಿಬಿಟ್ಟಿದ್ದಾರೆ. ಕನ್ನಡದಲ್ಲಿ ಕೂಡ ಗಣೇಶನ ಮದುವೆ, ಗೌರಿ ಗಣೇಶ ಮೊದಲಾದ ಯಶಸ್ವೀ ಚಿತ್ರಗಳ ನಂತರ ಬ್ರೇಕ್ ಸಿಗದೆ ಒದ್ದಾಡುತ್ತಿದ್ದ ಫಣಿ ರಾಮಚಂದ್ರರಿಗೆ ದಂಡಪಿಂಡಗಳು ಒಂದು ವರವಾಗಿ ಪರಿಣಮಿಸಿದೆ.
ಉದಯ ಟಿ.ವಿಯಲ್ಲಿ ಪ್ರಸಾರವಾಗುವ ಈ ಮೆಗಾ ಧಾರಾವಾಹಿಯ ಟೈಟಲ್ ಸಾಂಗ್ ಹಿರಿ - ಕಿರಿಯರ ಬಾಯಲ್ಲಿ ನಲಿದಾಡುತ್ತಿದೆ. ಪಿಂಡ ಎಂಬ ಶಬ್ದ ಕೇಳಿದರೇ ಹರಿಹಾಯುತ್ತಿದ್ದ ಸಂಪ್ರದಾಯಸ್ಥ ಕುಟುಂಬದಲ್ಲೂ ಟೈಟಲ್ ಸಾಂಗ್ ಗುನುಗುವವರಿದ್ದಾರೆ.
ಈ ಧಾರಾವಾಹಿಯಲ್ಲಿ ದಂಡಪಿಂಡಗಳಾಗಿರುವ ಐವರು ಯುವಕರ ಕುಚೇಷ್ಟೆಯೂ ಕನ್ನಡ ಕಿರುತೆರೆಯ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. 150 ಕಂತುಗಳನ್ನು ಮುಗಿಸಿರುವ ಈ ಮೆಗಾ ಧಾರಾವಾಹಿ ಇನ್ನೂ ತನ್ನ ಜನಪ್ರಿಯತೆ ಕಳೆದುಕೊಂಡಿಲ್ಲ ಎಂಬುದೇ ಇದಕ್ಕೆ ಸಾಕ್ಷಿ.
ಒಂದು ದಿನ ಈ ಸೀರಿಯಲ್ ನೋಡದಿದ್ದರೆ, ಏನೋ ಗಂಟು ಕಳೆದುಕೊಂಡವರಂತೆ ಆಡುವ ಕೆಲವು ಪ್ರೇಕ್ಷಕರು ಪಕ್ಕದ ಮನೆಯವರಿಂದ ಕಥೆ ಕೇಳಿಯಾದರೂ ತೃಪ್ತಿಪಟ್ಟುಕೊಳ್ಳುತ್ತಾರೆ. ಕರೆಂಟ್ ಹೋದರಂತು ಕೆ.ಇ.ಬಿ.ಗೆ ಹಿಡಿಶಾಪ ಹಾಕುತ್ತಾರೆ. ಮಾಯಾಮೃಗ ನಂತರ ಜನಪ್ರಿಯತೆಯ ಮತ್ತೊಂದು ದಾಖಲೆ ಬರೆಯಲು ದಂಡಪಿಂಡ ಸಜ್ಜಾಗುತ್ತಿದೆ. ಸೋತು ಸೋತು ಸುಣ್ಣವಾಗಿದ್ದ ಫಣಿ ರಾಮಚಂದ್ರರೂ ಯಶಸ್ಸಿನ ಕುದುರೆ ಮೇಲೇರಿ ಸವಾರಿ ಮಾಡುವಂತೆಯೂ ಮಾಡಿದೆ.


Click it and Unblock the Notifications