ಹಲಗಲಿ ಚಿತ್ರದಿಂದ ಹೊರ ನಡೆದ ಡಾರ್ಲಿಂಗ್ ಕೃಷ್ಣ ; ಯಾರಾಗ್ತಾರೆ ಐತಿಹಾಸಿಕ ಚಿತ್ರಕ್ಕೆ ನಾಯಕ..?
ಸಿನಿಮಾ ಕೆಲವರ ಪಾಲಿಗೆ ಕೇವಲ ಸಿನಿಮಾ ಅಲ್ಲ ಬದಲಿಗೆ ಅದೊಂದು ದಿವ್ಯ ತಪಸ್ಸು. ಈ ಕಾರಣಕ್ಕೆ ತಮ್ಮ ಕನಸಿನ ಚಿತ್ರಕ್ಕೆ.. ಪಾತ್ರಕ್ಕೆ.. ಅನೇಕರು ಇಲ್ಲಿ ವರ್ಷಾನುಗಟ್ಟಲೆ ತಮ್ಮ ಬದುಕನ್ನ ಮುಡಿಪಾಗಿಡ್ತಾರೆ. ಬೆವರು ಸುರಿಸುತ್ತಾರೆ. ಉದಾಹರಣೆಗೆ ಆಮಿರ್ ಖಾನ್, ಯಶ್, ಚಿಯಾನ್ ವಿಕ್ರಂ,
ಆದರೆ ಎಲ್ಲರಿಂದ ಇದು ಸಾಧ್ಯ ಇಲ್ಲ. ಅವಕಾಶಗಳ ಮಹಾಪೂರ ಹರಿದು ಬರುವ ಸಮಯದಲ್ಲಿ, ಕೇವಲ ಒಂದು ಚಿತ್ರಕ್ಕೆ ಸಮಯ ವ್ಯರ್ಥ ಮಾಡಲು ಬಹುತೇಕರಿಗೆ ಮನಸಾಗುವುದಿಲ್ಲ. ಈ ಕಾರಣಕ್ಕೆ ಕೆಲವೊಂದು ಚಿತ್ರ ಕೈ ತಪ್ಪುತ್ತವೆ. ಸದ್ಯಕ್ಕೆ ಡಾರ್ಲಿಂಗ್ ಕೃಷ್ಣ ಇದೇ ರೀತಿ ಬಂದಿದ್ದ ಸುವರ್ಣ ಅವಕಾಶವೊಂದನ್ನ ಕೈ ಚೆಲ್ಲಿದ್ದಾರೆ. ಐತಿಹಾಸಿಕ ಸಿನಿಮಾ ಹಲಗಲಿ ಯಿಂದ ಹೊರ ಬಂದಿದ್ದಾರೆ.

ಹೌದು, ಹಲಗಲಿ.. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧವನ್ನ ಮಾಡಿದ್ದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತ ಕಥೆ. ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ಮುಹೂರ್ತ ಭಾಗ್ಯ ಕಂಡ ಈ ಚಿತ್ರ ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿನ ದುಬಾರಿ ಸಿನಿಮಾ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.ಹತ್ತಾರು ವಿಶೇಷತೆಗಳಿಂದ ಕೂಡಿರುವ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹೇಗೆ ಕಾಣಿಸಬಹುದು ಅನ್ನುವ ಕುತೂಹಲ ಕೂಡ ಅನೇಕರಲ್ಲಿತ್ತು.
ಆದರೆ ಈಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಅದಕ್ಕೆ ಕಾರಣ ಷರತ್ತು ಮತ್ತು ನಿಯಮ. ಹೌದು, ಅಸಲಿಗೆ ಹಲಗಲಿ 1857ರ ಕಾಲಘಟ್ಟದ ಸಿನಿಮಾ. ಈ ಕಾರಣಕ್ಕೆ ಚಿತ್ರದ ನಿರ್ದೇಶಕ ಸುಕೇಶ್ ನಾಯಕ್ ಮತ್ತು ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಚಿತ್ರದ ಕಥಾನಾಯಕ ಡಾರ್ಲಿಂಗ್ ಕೃಷ್ಣ ಅವರಲ್ಲಿ ಎರಡು ವರ್ಷ ಈ ಚಿತ್ರಕ್ಕೆ ತಮ್ಮ ಸಮಯ ಮೀಸಲಿಡುವಂತೆ ಕೋರಿದ್ದರು. ಹಲಗಲಿ ಹೊರತು ಪಡಿಸಿ ಬೇರೆ ಚಿತ್ರದ ಬಗ್ಗೆ ಆಲೋಚನೆ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೆ..ಇದಾದ ಕೆಲವೇ ದಿನದಲ್ಲಿ ಡಾರ್ಲಿಂಗ್ ಕೃಷ್ಣ ಕನ್ನಡದ ಖ್ಯಾತ ನಿರ್ದೇಶಕ ಆರ್.ಚಂದ್ರು ಅವರ ಪಕ್ಕ ಕಾಣಿಸಿಕೊಂಡರು. ಫಾದರ್ ಚಿತ್ರವನ್ನ ಒಪ್ಪಿಕೊಂಡರು.

ಡಾರ್ಲಿಂಗ್ ಕೃಷ್ಣ ಅವರ ಈ ನಡೆಯಿಂದ ಸಹಜವಾಗಿಯೇ ಹಲಗಲಿ ಚಿತ್ರದ ನಿರ್ದೇಶಕ ಸುಕೇಶ್ ನಾಯಕ್ ಮತ್ತು ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಅವರಿಗೆ ಬೇಸರ ಆಗಿದೆ. ಹೀಗಾಗಿಯೇ ಎರಡು ಚಿತ್ರಗಳನ್ನ ಏಕಕಾಲಕ್ಕೆ ನಿಭಾಯಿಸುವ ಭರವಸೆಯನ್ನ ಡಾರ್ಲಿಂಗ್ ಕೃಷ್ಣ ನೀಡಿದ್ದರು ಕೂಡ ಬೇಡವೆಂದು ತೀರ್ಮಾನಕ್ಕೆ ಬಂದಿರುವ ಇಬ್ಬರು ಸದ್ಯಕ್ಕೆ ತಮ್ಮ ಐತಿಹಾಸಿಕ ಚಿತ್ರಕ್ಕೆ ಬೇರೆ ನಾಯಕರನ್ನ ಹುಡುಕುತ್ತಿದ್ದಾರೆ. ಹಲವರ ಜೊತೆ ಮಾತು-ಕಥೆ ಮಾಡಿದ್ದಾರೆ.
ಅಂದ್ಹಾಗೇ ಡಾರ್ಲಿಂಗ್ ಕೃಷ್ಣ ಒಂದೆರಡು ದಿನದ ಚಿತ್ರೀಕರಣದಲ್ಲಿ ಹಿಂದೆ ಭಾಗಿಯಾಗಿದ್ದರು. ಮೊದಲ ದಿನದ ಶೂಟಿಂಗ್ನಲ್ಲಿ 200ಕ್ಕೂ ಹೆಚ್ಚು ಅಮೆರಿಕ ಹಾಗೂ ರಷ್ಯನ್ ಕಲಾವಿದರು ಹಾಗೂ ಸ್ಥಳೀಯ ಕಲಾವಿದರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಆದರೆ ಈಗ ಡಾರ್ಲಿಂಗ್ ಕೃಷ್ಣ ಚಿತ್ರದಿಂದ ಹೊರ ಬಂದ ಹಿನ್ನೆಲೆ ಅವತ್ತು ಮಾಡಿದ್ದ ಚಿತ್ರೀಕರಣಕ್ಕೆ ಆದ ಖರ್ಚು-ವೆಚ್ಚ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ಆಗಿದೆ ಅಂದರೆ ಅದು ತಪ್ಪಲ್ಲ.

ಉಳಿಂದಂತೆ ವಾಸುಕಿ ವೈಭವ್ 'ಹಲಗಲಿ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿಕ್ರಮ್ ಮೋರ್ ಸಾಹಸ ಸಂಯೋಜನೆ ಮಾಡಲಿದ್ದಾರೆ. ಆ ಕಾಲವನ್ನು ಮರುಸೃಷ್ಟಿ ಮಾಡುವ ನಿಟ್ಟಿನಲ್ಲಿ ಹಲವು ಕಡೆಗಳಲ್ಲಿ ಸೆಟ್ ಹಾಕಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇದರ ಜತೆಗೆ ತಿಪಟೂರಿನಲ್ಲಿಯೂ ಸೆಟ್ ಹಾಕಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನೂ ಕನ್ನಡ ಮತ್ತು ತೆಲುಗುದಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿರುವ ಚಿತ್ರ ತಮಿಳು, ಮಲಯಾಳಂ ಹಾಗೂ ಹಿಂದಿಗೆ ಡಬ್ ಆಗಿ ತೆರೆಗೆ ಬರಲಿದೆ.
ಒಟ್ನಲ್ಲಿ ಸದ್ಯಕ್ಕೆ ಡಾರ್ಲಿಂಗ್ ಕೃಷ್ಣ ಹಲಗಲಿ ಚಿತ್ರದಿಂದ ಹೊರ ಬಂದಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ ಜಾಗಕ್ಕೆ ಯಾರು ಬರ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











